World Sparrow Day; ಕನಕಪುರದ ಈ ಮನೆಯಲ್ಲಿ ಗುಬ್ಬಚ್ಚಿಗಳ ಕಲರವ!
ರಾಮನಗರ, ಮಾರ್ಚ್ 20; ತಂತ್ರಜ್ಞಾನದ ಕ್ರಾಂತಿ ಹಾಗೂ ಮಾನವನ ಅತಿ ಆಸೆಗೆ ಬಲಿಯಾಗಿ ಅಳಿವಿನ ಅಂಚಿಗೆ ತಲುಪಿರುವ ಗುಬ್ಬಚ್ಚಿ ಸಂತತಿಯ ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಪ್ರಾರಂಭವಾದದ್ದೇ 'ವಿಶ್ವ ಗುಬ್ಬಚ್ಚಿ ದಿನ'. ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಮಾನವ ಮತ್ತು ಪರಿಸರಕ್ಕೆ ಜೈವಿಕ ಕೊಂಡಿಯಂತಿರುವ ಗುಬ್ಬಚ್ಚಿಗಳನ್ನು ಉಳಿಸಲು ಪಣ ತೊಡಬೇಕಿದೆ.
ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಪ್ರತಿವರ್ಷದ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. 2010 ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತು. ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆಯ (ಐಯುಸಿಎನ್) ವರದಿಯ ಪ್ರಕಾರ, 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿಯು ಶೇ 71ರಷ್ಟು ಕುಸಿದಿದೆ ಎಂಬುದು ಆತಂಕ ಸೃಷ್ಟಿಸಿದೆ.
ವಿಶ್ವ ಗುಬ್ಬಚ್ಚಿ ದಿನ: ಕೇಳದಾಗಿದೆ ಚಿಲಿಪಿಲಿ ಸದ್ದು; ಚಿತ್ರದಲ್ಲಿ ತೋರಿಸುವ ವನ್ಯಜೀವಿಗಳ ಸಾಲಿಗೆ ಗುಬ್ಬಿ
ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪ್ರಾರಂಭವಾದ ವಿಶ್ವ ಗುಬ್ಬಚ್ಚಿ ಸಂರಕ್ಷಣಾ ದಿನವನ್ನು ವರ್ಷದ ಒಂದು ದಿನ ಮಾತ್ರ ಆಚರಣೆ ಮಾಡಬಾರದು. ನಿರಂತರವಾಗಿ ಗುಬ್ಬಚ್ಚಿಗಳ ಸಂತತಿ ಉಳಿಸಲು ಶತ ಪ್ರಯತ್ನ ನಡೆಸಬೇಕಾದ ಅನಿರ್ವಾಯತೆ ನಿರ್ಮಾಣವಾಗಿದೆ.
ಚಿಲಿಪಿಲಿ ಗುಬ್ಬಚ್ಚಿಯ ನಿಗೂಢ ಕಣ್ಮರೆ... ವಿಶ್ವ ಗುಬ್ಬಿ ದಿನದ ಆತಂಕ
ಇಂದು ವಿಶ್ವ ಗುಬ್ಬಚ್ಚಿ ದಿನ ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳನ್ನು ಸಂರಕ್ಚಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯ ಕನಕಪುರ ನಗರದ ಪಕ್ಷಿ ಪ್ರೇಮಿ ಮರಸಪ್ಪ ರವಿ ತಮ್ಮ ಮನೆಯ ಅಂಗಳದಲ್ಲಿ ನೂರಾರು ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ.#WorldSparrowDay #WorldSparrowDay2022 #Kanakapura pic.twitter.com/qKq4MmmTZ6
— oneindiakannada (@OneindiaKannada) March 20, 2022
ರಾಮನಗರ ಜಿಲ್ಲೆಯ ಕನಕಪುರ ನಗರದ ನಿವಾಸಿ ಮರಸಪ್ಪರವಿ ತಮ್ಮ ಮನೆಯಲ್ಲಿ ಗುಬ್ಬಚ್ಚಿಗಳಿಗೆ ಆಶ್ರಯ ನೀಡಿದ್ದಾರೆ. ಸುಮಾರು 100 ಗುಬ್ಬಚ್ಚಿಗಳು ಈ ಮನೆಯಲ್ಲಿವೆ. ಪ್ರತಿದಿನವೂ ಮನೆಯಲ್ಲಿ ಗುಬ್ಬಚ್ಚಿ ಕಲರವವನ್ನು ಕೇಳಬಹುದಾಗಿದೆ.
ಚಿಂವ್ ಚಿಂವ್ ಗುಬ್ಬಚ್ಚಿ ಎಲ್ಲಿ ಹೋದೆ...
ಈ ಮನೆಯಲ್ಲಿ ಗುಬ್ಬಚ್ಚಿಗಳ ಸಂರಕ್ಷಣೆ
ರಾಮನಗರ ಜಿಲ್ಲೆಯ ಕನಕಪುರ ನಗರದ ಮರಸಪ್ಪರವಿ ತಮ್ಮ ಪುಟ್ಟ ಮನೆಯ ಆವರಣದಲ್ಲಿ ಪುಟ್ಟ ಪಾರ್ಕ್ ನಿರ್ಮಾಣ ಮಾಡಿ ಮನೆಯ ಆವರಣ ಹಾಗೂ ಮರದ ಕೊಂಬೆಗಳ ಬೊಂಬಿನಲ್ಲಿ ರಂಧ್ರಗಳನ್ನು ಕೊರೆದು ಗುಬ್ಬಚ್ಚಿಗಳು ನೆಲೆಸಲು ಅನುಕೂಲ ಮಾಡಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವ ಮೂಲಕ ಜನಸಾಮಾನ್ಯರು ಗುಬ್ಬಚ್ಚಿ ಉಳಿವಿಗೆ ನಾವೇನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮರಸಪ್ಪರವಿ ಮನೆಯ ಅಂಗಳದಲ್ಲಿ ನೆಲೆಸಿರುವ 100ಕ್ಕೂ ಹೆಚ್ಚು ಗುಬ್ಬಚ್ಚಿಗಳಿಗೆ ಧಾನ್ಯ, ಕಾಳುಗಳನ್ನು ಹಾಕಿ ನೀರನ್ನು ಒದಗಿಸಿ ಪೋಷಿಸುತ್ತಿದ್ದಾರೆ. ಮನೆಯ ಸುತ್ತಲಿನ ಲಭ್ಯವಿರುವ ಅಲ್ಪ ಸ್ಥಳವನ್ನು ನಂದನವನವನ್ನಾಗಿಸಿಕೊಂಡು ಹತ್ತಾರು ಬಗೆಯ ಗಿಡಮರಗಳನ್ನ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಸೀಬೆ, ದಾಳಿಂಬೆ, ಅಂಜೂರ, ಸಪೋಟ, ಬೆಣ್ಣೆ ಹಣ್ಣು ಮೊದಲಾದ ಗಿಡಗಳನ್ನು ಬೆಳೆಸಿ ಪಕ್ಷಿಗಳಿಗೆ ಆಹಾರವನ್ನು ಒದಗಿಸಿದ್ದಾರೆ.
ಗುಬ್ಬಚ್ಚಿ, ಕಾಜಾಣ, ಕೋಗಿಲೆ, ಗಿಣಿ ಹಾಗೂ ಅಪರೂಪದ ಸನ್ ಬರ್ಡ್ ಪಕ್ಷಿಗಳು ಇವರ ಕಿರು ಉದ್ಯಾನವನದ ನಿತ್ಯ ಅತಿಥಿಗಳಾಗಿವೆ. ಪರಿಸರ ಸಂರಕ್ಷಣೆ ಬಗೆಗೂ ಅಪಾರ ಆಸಕ್ತಿ ಹೊಂದಿರುವ ಮರಸಪ್ಪ ರವಿರವರು ಪ್ರತಿ ವರ್ಷ ಹತ್ತಾರು ಶಾಲೆಗಳಿಗೆ ಹಾಗೂ ಹಳ್ಳಿಹಳಿಗೆ ಸಸಿಗಳನ್ನು ವಿತರಿಸಿ ಗಿಡಗಳನ್ನು ಬೆಳೆಸಲು ಉತ್ತೇಜನ ನೀಡುತ್ತಿದ್ದಾರೆ.
ಗುಬ್ಬಚ್ಚಿಗಳ ಇತಿಹಾಸ
ಪುಟ್ಟ ಗುಬ್ಬಚ್ಚಿಗಳ ದೊಡ್ಡ ಇತಿಹಾಸವೇ ಇದೆ. ವೈಜ್ಞಾನಿಕವಾಗಿ ಪ್ಯಾಸಿರೈಡೆ ಪಕ್ಷಿ ಕುಟುಂಬಕ್ಕೆ ಸೇರಿದ ಗುಬ್ಬಚ್ಚಿಗಳನ್ನು ಪ್ಲಾಸ್ಟಿಕ್ ಡೊಮೆನೈಕಸ್ ಎನ್ನುತ್ತಾರೆ. ವಿಶ್ವದಾದ್ಯಂತ ಬಹುತೇಕವಾಗಿ ಕಂಡುಬರುವ ಈ ಸಣ್ಣ ಹಕ್ಕಿಗಳು ಸಾಮಾನ್ಯವಾಗಿ 6 ಇಂಚುಗಳ ಉದ್ದವಿದ್ದು 25 ರಿಂದ 40 ಗ್ರಾಂ ತೂಕವಿರುತ್ತವೆ. ಏಷ್ಯಾದಲ್ಲಿ ಅದರಲ್ಲೂ ಭಾರತದಲ್ಲಿ ಕಂದು ಹಾಗೂ ಬೂದು ಬಣ್ಣದ ಹಕ್ಕಿಗಳು ಕಂಡು ಬರುತ್ತವೆ. ಗುಬ್ಬಚ್ಚಿಗಳಲ್ಲಿ 25ಕ್ಕೂ ಹೆಚ್ಚು ಪ್ರಭೇಧಗಳಿವೆ. ಮನೆಗುಬ್ಬಿಗಳೆಂದು ಕರೆಯುವ ಇವುಗಳು ಮಾನವರೊಂದಿಗೆ ಹೆದರದೆ ಹೊಂದಿಕೊಳ್ಳುತ್ತವೆ, ಧಾನ್ಯಗಳು, ಕಾಳುಗಳು ಇವುಗಳ ಪ್ರಮುಖ ಆಹಾರವಾಗಿದೆ.
ಇವುಗಳ ಚಿತ್ರಗಳು ಎಲ್ಲ ಕಡೆಯೂ ಇವೆ
ಗುಬ್ಬಚ್ಚಿಗಳು 10 ಸಾವಿರ ವರ್ಷಗಳಿಗಿಂತಲೂ ಮಿಗಿಲಾಗಿ ಮಾನವನೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಇದಕ್ಕೆ ಸಾಕ್ಷಿಯಾಗಿ ಈಜಿಪ್ಟಿನ ಪಿರಮಿಡ್ಗಳಲ್ಲಿಯೂ ಇವುಗಳ ಚಿತ್ರಗಳು ಮೂಡಿಬಂದಿವೆ. ಗುಬ್ಬಚ್ಚಿಗಳು 45 ಕಿ.ಮೀ ವೇಗವಾಗಿ ಹಾರಬಲ್ಲವು. ಗುಬ್ಬಚ್ಚಿಗಳು ಸಾಮಾನ್ಯವಾಗಿ ಮರದ ಪೊಟರೆಗಳಲ್ಲಿ ಕೊಂಬೆಗಳ ನಡುವೆ ತಮ್ಮ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತವೆ, ಗೂಡುಗಳನ್ನು ಹುಲ್ಲು, ಬೇರು ಹಾಗೂ ನಾರಿನಿಂದ ನಿರ್ಮಿಸಿಕೊಳ್ಳುತ್ತವೆ. ಇವುಗಳು ಸಾಮಾನ್ಯವಾಗಿ 5 ರಿಂದ 7 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು 11 ರಿಂದ 14 ದಿನ ಕಾವು ಪಡೆದು ಮರಿಗಳಾಗಿ 15 ದಿನಗಳ ನಂತರ ಗೂಡಿನಿಂದ ಹೊರಬಂದು ಸ್ವತಂತ್ರವಾಗುತ್ತವೆ. ಇವುಗಳ ಜೀವಿತ ಕಾಲಾವಧಿ ಯಾವುದೇ ಅಪಾಯಕ್ಕೆ ಸಿಲುಕದಿದ್ದರೆ 15 ರಿಂದ 20 ವರ್ಷಗಳು ಎಂಬುದು ಅಚ್ಚರಿ ಮೂಡಿಸುತ್ತದೆ.
ಗುಬ್ಬಚ್ಚಿಗಳಿಗೆ ಮಾರಕವಾದ ಮೊಬೈಲ್ ತರಂಗ
ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿ ಸಂತತಿಗೆ ಸಾಂಪ್ರದಾಯಿಕ ವೈರಿಗಳಾದ ಹದ್ದು, ಕಾಗೆ ಹಾಗೂ ಬೆಕ್ಕುಗಳಿಗಿಂತ ಹೆಚ್ಚಾಗಿ ಆಧುನಿಕ ತಂತ್ರಜ್ಞಾನ ಕಾರಣ ಎಂಬುದು ನಂಬಲು ಅಸಾಧ್ಯವಾದರೂ ಸತ್ಯ ಸಂಗತಿಯಾಗಿದೆ. ಕಳೆದ ಮೂರು ದಶಕಗಳಿಂದ ಸಂಚಾರಿ ಮೊಬೈಲ್ ದೂರವಾಣಿ ಜನಪ್ರಿಯತೆ ನಾಗಾಲೋಟದಲ್ಲಿ ಹೆಚ್ಚಾಗುತ್ತಾ ಬಂದಿದೆ ಮೊಬೈಲ್ಗಳ ಜಾಲ ವಿಸ್ತರಣೆಯಾದಂತೆ ಧ್ವನಿ ತರಂಗಗಳನ್ನು ಹರಡುವ ಗ್ರಹಿಸುವ ಸಂಪರ್ಕ ಸಾಧನಗಳು, ಟ್ರಾನ್ಸ್ಪೌಂಡರ್ಗಳು ಹರಡುವ ಧ್ವನಿ ತರಂಗಗಳು ಈ ಪುಟಾಣಿ ಹಕ್ಕಿಗಳಿಗೆ ಮಾರಕವಾಗಿ ಪರಿಗಣಿಸಿ ಅವುಗಳ ಬದುಕನ್ನು ಅತಂತ್ರಗೊಳಿಸಿವೆ. ಧ್ವನಿ ತರಂಗಗಳು ಈ ಗುಬ್ಬಚ್ಚಿಗಳ ಮೆದುಳನ್ನು ಕಂಗೆಡಿಸಿ ಸಂತತಿಯನ್ನೇ ವಿನಾಶದ ಅಂಚಿಗೆ ತಂದು ನಿಲ್ಲಿಸಿವೆ. ಎಲ್ಲೆಲ್ಲಿ ಮೊಬೈಲ್ ಟವರ್ಗಳಿವೆಯೋ ಅಲ್ಲಿ ಹಲವಾರು ಕಿಲೋಮೀಟರ್ಗಳಷ್ಟು ದೂರ ಈ ಗುಬ್ಬಚ್ಚಿಗಳ ಸಂತತಿಯೇ ಇಲ್ಲವಾಗಿದೆ.
ಗುಬ್ಬಚ್ಚಿಗಳಿಗೆ ಮಾನವನು ಶತ್ರು
ಗುಬ್ಬಚ್ಚಿ ನಾಶಕ್ಕೆ ವಿಜ್ಞಾನಕ್ಕಿಂತಲೂ ಅಜ್ಞಾನಿ ಮಾನವ ಪ್ರಹಾರವೇ ಹೆಚ್ಚು ಎನ್ನಬಹುದು. ಅತಿಯಾಗಿ ಕೃಷಿಯನ್ನು ನಂಬಿರುವ ನಾವು ಹೊಲ ಗದ್ದೆಗಳಲ್ಲಿ ಬೆಳೆಯನ್ನು ಹಾಳುಮಾಡುವ ಹುಳ ಉಪ್ಪಟೆಗಳನ್ನು ತಿಂದು ರೈತ ಸ್ನೇಹಿಯಾಗಿರುವ ಗುಬ್ಬಚ್ಚಿಗಳನ್ನು ಕ್ರಿಮಿನಾಶಕ ಬಳಸುವ ಮೂಲಕ ಕೊಲ್ಲುತ್ತಿದ್ಧೇವೆ. ಫಸಲಿನ ರಕ್ಷಣೆಯ ಹೆಸರಿನಲ್ಲಿ ಬೆಳೆಗೆ ಅತಿಯಾದ ಕೀಟನಾಶಕಗಳನ್ನು ಬಳಸುವುದರಿಂದ ಇವುಗಳ ಸಂತತಿಗೆ ಮಾರಕವಾಗಿರುವುದು ಕೂಡ ಸತ್ಯ.
Recommended Video