ಜೀವನಾಧರಕ್ಕಾಗಿ ಕಾಯುತ್ತಿರುವ ಪರಿಸರ ಪ್ರೇಮಿ ಸಾಲು ಮರದ ನಿಂಗಣ್ಣ
ರಾಮನಗರ ಜೂನ್ 5: ತುಂಡು ಭೂಮಿ ಇಲ್ಲದೇ ಕೂಲಿ ಮಾಡುತ್ತಲೇ ಕಳೆದ 20 ವರ್ಷಗಳಲ್ಲಿ 1000 ಕ್ಕೂ ಹೆಚ್ಚು ಮರ ಬೆಳೆಸಿ ಸಾಲು ಮರದ ನಿಂಗಣ್ಣ ಎಂದು ಹೆಸರು ಪಡೆದು 30 ಕ್ಕೂ ಹೆಚ್ಚು ಪ್ರಶಸ್ತಿ, ನೂರಾರು ಸನ್ಮಾನ ಪಡೆದರೂ ಸರ್ಕಾರ ಹಾಗೂ ಜಿಲ್ಲಾಡಳಿತದ ಕಡೆಗಣೆನೆಗೆ ಒಳಗಾದ ಪರಿಸರ ಪ್ರೇಮಿ ನಿಂಗಣ್ಣ.
ತಾಲ್ಲೂಕಿನ ಅರೆಹಳ್ಳಿ ಗ್ರಾಮದ ನಿಂಗಣ್ಣ ರಸ್ತೆಯ ಎರಡು ಬದಿಗಳಲ್ಲಿ 1000 ಕ್ಕೂ ಅಧಿಕ ಮರಗಳನ್ನು ನೆಟ್ಟು ತನ್ನ ಮಕ್ಕಳಂತೆ ಪೋಷಣೆ ಮಾಡಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಕೂನಮುದ್ದನಹಳ್ಳಿ ಹೊರಭಾಗದಲ್ಲಿರುವ ಕೋಡಿ ಬಸವೇಶ್ವರ ದೇವಾಲಯದ ಆವರಣದಲ್ಲಿನ ಗುಂಡುತೋಪು ಮರಗಳಿಲ್ಲದೆ ಬಣಗುಡುತ್ತಿತ್ತು. ಇದನ್ನು ಕಂಡ ನಿಂಗಣ್ಣ ಸುಮಾರು 300 ಗಿಡಗಳನ್ನು ಅರಣ್ಯ ಇಲಾಖೆಯ ನರ್ಸರಿಯಿಂದ ತಂದು ನೆಟ್ಟು ಪೋಷಿಸುವ ಮೂಲಕ ಪ್ರಾರಂಭವಾದ ನಿಂಗಣ್ಣನ ಪರಿಸರ ಪ್ರೇಮ ಇಂದು ಕೂಡ ಮುಂದುವರೆದಿದೆ.
ವಿಶ್ವ ಪರಿಸರ ದಿನ: ಬೆಂಗಳೂರು ಹಸಿರೀಕರಣಕ್ಕೆ ಬಿಬಿಎಂಪಿ ನಿರ್ಧಾರ
ಬೇಸಿಗೆಯ ರಣಬಿಸಿಲಿನಲ್ಲೂ ತನ್ನ ಮನೆ ಕೆಲಸ, ಕೂಲಿ ಕೆಲಸ ಬಿಟ್ಟು, ಹೆಂಡತಿ ಮಕ್ಕಳ ಜತೆಯಲ್ಲಿ ಇಲ್ಲಿನ ಗಿಡಗಳಿಗೆ ಹತ್ತಿರದ ಕೆರೆ ಹಾಗೂ ಬಾವಿಯಿಂದ ನೀರು ತಂದು ತನ್ನ ಮಕ್ಕಳಂತೆ ಬೆಳೆಸಿದ ನಿಂಗಣ್ಣನ ಶ್ರಮದ ಫಲವಾಗಿ ಅಂದು ನೆಟ್ಟ 300 ಗಿಡಗಳಲ್ಲಿ ಸುಮಾರು 250 ಗಿಡಗಳು ಇಂದು ಹೆಮ್ಮರವಾಗಿವೆ. ಇಡೀ ಗುಂಡುತೋಪು ಹಸಿರಿನಿಂದ ಕಂಗೊಳಿಸುತ್ತಿದೆ.
ಪರಿಸರ ದಿನ; ಇರುವುದೊಂದು ಭೂಮಿ, ಪ್ರಕೃತಿಯೊಂದಿಗೆ ಸಾಮರಸ್ಯವಿರಲಿ
ರಸ್ತೆಯ ಬದಿ 680 ಮರಗಳ ಪೋಷಣೆ
ನಿಂಗಣ್ಣನ ಪರಿಸರ ಪ್ರೇಮ ಹಾಗೂ ಬರಡಾಗಿದ್ದ ಗುಂಡು ತೋಪಿನ ಮರಗಳ ಸಂರಕ್ಷಣೆಯ ಶ್ರಮ ಗಮನಿಸಿದ ಅರಣ್ಯ ಇಲಾಖೆಯವರು ಬಿಳಗುಂಬ ಗ್ರಾಮದಿಂದ ಕೂನಮುದ್ದನಹಳ್ಳಿ ಗ್ರಾಮದ ನಡುವೆ ಸುಮಾರು 3 ಕಿ.ಮೀ.ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸುಮಾರು 680ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಅವುಗಳ ಪೋಷಣೆಯ ಹೊಣೆಯನ್ನು ನಿಂಗಣ್ಣನಿಗೆ ನೀಡಿದ್ದರು.
ಅಂದಿನಿಂದ ಇಂದಿನವರೆಗೂ ನಿಂಗಣ್ಣ ರಸ್ತೆಯ ಎರಡು ಬದಿಯ ಗಿಡಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡಿ, ಗಿಡಗಳನ್ನು ಮರಗಳನ್ನಾಗಿ ಬೆಳೆಸಿದ್ದಾರೆ. ಅವರ ಶ್ರಮ ಮತ್ತು ಪರಿಸರದ ಮೇಲಿನ ಕಾಳಜಿಯ ಹಾಗೂ ನಿಂಗಣ್ಣನ ಸಾಧನೆಯನ್ನು ಕಂಡ ಅರಣ್ಯ ಇಲಾಖೆಯವರು, ಗ್ರಾಮಸ್ಥರು ಸಾಲುಮರದ ನಿಂಗಣ್ಣ ಎಂದೇ ಗುರುತಿಸುತ್ತಾರೆ.
ಪರಿಸರ ದಿನಾಚರಣೆ ದಿನವೂ ನೆನಪಿಗೆ ಬಾರದ ನಿಂಗಣ್ಣ
ಇಂದು ಪರಿಸರ ದಿನಾಚರಣೆ ಕಳೆದ 20 ವರ್ಷಗಳಿಂದ ಮರ ಬೆಳೆದುವ ಮೂಲಕ ಪರಿಸರ ಕಾಯಕದಲ್ಲಿ ತೊಡಗಿರುವ ಸಾಲು ಮರದ ನಿಂಗಣ್ಣನನ್ನು ಜಿಲ್ಲಾಡಳಿತ ನೆಪ ಮಾತ್ರಕ್ಕು ಕರೆದು ಸನ್ಮಾನಿಸುವ ಕೆಲಸ ಮಾಡಿಲ್ಲ. ಜಿಲ್ಲಾಡಳಿತ ನಮ್ಮಂತಹ ಹರಕಲು ಬಟ್ಟೆ ಹಾಕುವವರನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸಾಲು ಮರದ ನಿಂಗಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಸತತ 20 ವರ್ಷಗಳಿಂದ ರಸ್ತೆ ಬದಿಯ ಮರಗಳನ್ನು ಕಾಪಾಡಿಕೊಂಡು ಬಂದಿದ್ದೇನೆ. ನನಗೆ ಇರಲು ಮನೆ ಇದೆ. ಆದರೆ ಜೀವನ ನಡೆಸಲು ಜಮೀನು ಇರಲಿಲ್ಲ. ಇದರಿಂದ ಜೀವನದಲ್ಲಿ ನನಗೆ ಬಹಳ ಬೇಜಾರಾಗಿತ್ತು. ಭೂಮಿಯ ಮೇಲೆ ಹುಟ್ಟಿದ ನಾವುಗಳು ಏನಾದರೊಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬ ಆಸೆ ಸದಾ ನನ್ನಲ್ಲಿ ಕಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ನನಗೆ ಹೊಳೆದದ್ದು ಗಿಡ ನೆಡುವ ಕಾಯಕವನ್ನು ಪ್ರಾರಂಭಿಸಿದೆ ಎನ್ನುತ್ತಾರೆ ನಿಂಗಣ್ಣ.
ನಾ ಸತ್ತರು ಮರದ ನೆನಪಲ್ಲಿ ಜೀವಂತ
ಈಗ ನಾವು ನೆಟ್ಟ ಒಂದು ಗಿಡ ಮುಂದಿನ ಹಲವು ವರ್ಷಗಳ ಕಾಲ ಈ ಭೂಮಿಯ ಮೇಲಿರುತ್ತದೆ. ನಾನು ಸತ್ತರೂ ಮರದ ನೆನಪಿನಲ್ಲಿ ಜೀವಂತವಾಗಿರುತ್ತೇನೆ. ಸ್ಥಳೀಯರಿಂದ ಉತ್ತಮ ಬೆಂಬಲ ದೊರೆಯದಿದ್ದರೂ, ಇದುವರೆಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ನನ್ನ ಕೆಲಸವನ್ನು ಕಳೆದ 20 ವರ್ಷಗಳಿಂದಲೂ ಶ್ರದ್ಧೆಯಿಂದ ಮಾಡಿದ್ದೇನೆ. ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯನ್ನು ಬಯಸದೆ ಮರಗಳನ್ನು ಯಾರೂ ಕಡಿದು ಹಾಕದಿದ್ದರೆ ನನ್ನ ಶ್ರಮ ಸಾರ್ಥಕವಾಗುತ್ತದೆ ಎಂದು ನಿಂಗಣ್ಣ ಹೇಳಿದ್ದಾರೆ.
ನನ್ನ ಈ ಕೆಲಸದಿಂದ ಮಕ್ಕಳು ಅವಿದ್ಯಾವಂತರಾದರು
ನಾನು ನೆಟ್ಟಿರುವ ಸಾಲುಮರಗಳು ಇಂದು ಹದಿನೈದು ಅಡಿ ಎತ್ತರಕ್ಕೆ ಬೆಳೆದಿದ್ದು, ಅವುಗಳನ್ನು ನೋಡಲು ಬಹಳ ಸಂತೋಷವಾಗುತ್ತದೆ. ವರ್ಷಾನುಗಟ್ಟಲೆ ಇವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಣೆ ಮಾಡಿದ್ದೇನೆ. ಇಲ್ಲಿನ ಸಾಲು ಮರಗಳನ್ನು ನೋಡಿದ ಸಾವಿರಾರು ಮಂದಿ ನನ್ನನ್ನು ಪ್ರಸಂಶಿಸಿದ್ದಾರೆ. ಆದರೆ ಮರ ಬೆಳೆಸುವ ಕಾಯಕದಲ್ಲಿ ನನಗಿರುವ ಒಬ್ಬ ಮಗ ಹಾಗೂ ಓರ್ವ ಮಗಳಿಗೆ ವಿದ್ಯಾಭ್ಯಾಸ ಮಾಡಿಸುವುದನ್ನು ಮರೆತೆ. ಅವರು ನನ್ನೊಂದಿಗೆ ಮರ ಬೆಳೆಸಲು ಹೆಗಲು ಕೊಟ್ಟಿದ್ದಾರೆ. ಬೇಸಿಗೆಯಲ್ಲಿ ನನ್ನ ಹೆಂಡತಿ ಸಾವಿತ್ರಮ್ಮ, ಮಗ ನೀಲಕಂಠಮೂರ್ತಿ, ಮಗಳು ಪುಷ್ಪಲತಾ ನನ್ನೊಂದಿಗೆ ಬಂದು ಗಿಡಗಳಿಗೆ ನೀರನ್ನು ಹೊತ್ತು ತಂದು ಹಾಕಿದ್ದಾರೆ ಎಂದು ಕುಟುಂಬದವರ ಶ್ರಮವನ್ನು ಸ್ಮರಿಸಿದರು.
Recommended Video
ಹಲವಾರು ಪ್ರಶಸ್ತಿಗಳ ಗರಿ
ಯಾವುದೇ ಫಲಾಪೇಕ್ಷೆ ಇಲ್ಲದೇ ಮರಗಳನ್ನು ಬೆಳಿಸಿದ ಹಿನ್ನಲೆಯಲ್ಲಿ ಹಲವಾರು ಪ್ರಶಸ್ತಿಗಳು ನೂರಾರು ಸನ್ಮಾನಗಳು ನಮ್ಮನ್ನು ಹರಸಿ ಬಂದಿವೆ ಅದರೆ ಅವುಗಳಿಂದ ನಮ್ಮ ಬದುಕಿಗೆ ಭದ್ರತೆ ಇಲ್ಲ. ‘ನನಗೆ ಹಾಗೂ ಹೆಂಡತಿಗೆ ವಯಸ್ಸಾಗಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಜೀವನ ನಿರ್ವಹಣೆಗಾಗಿ 4 ಎಕರೆ ಸರ್ಕಾರಿ ಜಮೀನನ್ನು ನಮಗೆ ಮಂಜೂರು ಮಾಡಿಕೊಡಬೇಕು' ಎಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸೇರಿದಂತೆ ಹಲವರಿಗೆ ಮನವಿ ಮಾಡಿದ್ದೇನೆ ಎಂದು ಸಾಲು ಮರದ ನಿಂಗಣ್ಣ ಮನವಿ ಮಾಡಿಕೊಂಡಿದ್ದಾರೆ.
ನಿಂಗಣ್ಣನ ಮನವಿಗೆ ಸ್ಪಂದಿಸಿ ಹಲವರು ನಿಂಗಣ್ಣನಿಗೆ ಭೂಮಿ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಆದರೆ ನಾಲ್ಕು ವರ್ಷ ಕಳೆದರು ಜಿಲ್ಲಾಡಳಿತ ನಿಂಗಣ್ಣನಿಗೆ ಜಮೀನು ನೀಡುವಲ್ಲಿ ವಿಫಲವಾಗಿದೆ. ಜೀವನದ ಅಂತಿಮ ದಿನಗಳನ್ನು ನೆಮ್ಮದಿಯಾಗಿ ಕಳೆಯಲು ಸರ್ಕಾರ ನಮ್ಮ ನೆರವಿಗೆ ದಾವಿಸಬೇಕೆಂದು ತಮ್ಮ ನೋವು ತೋಡಿಕೊಳ್ಳುತ್ತಾರೆ ಸಾಲು ಮರದ ನಿಂಗಣ್ಣ.