ಡಿಸೆಂಬರ್ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾಣೆ: ಎಚ್ಡಿಕೆ ಭವಿಷ್ಯ
ರಾಮನಗರ, ಅಕ್ಟೋಬರ್ 18: ನವೆಂಬರ್, ಡಿಸೆಂಬರ್ ನಂತರ ಬಹುಶಃ ರಾಜ್ಯ ರಾಜಕಾರಣದಲ್ಲಿ ಬಹಳ ಬದಲಾವಣೆಯ ಮುನ್ಸೂಚನೆ ಗೋಚರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು.
ಅ.17 ರ ಶನಿವಾರ ಸಂಜೆ ತಮ್ಮ ಬಿಡದಿಯ ತೋಟದ ಮನೆಯಲ್ಲಿ ಕರೆದಿದ್ದ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ನಾನು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ತಪ್ಪು ಮಾಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿದ್ದು ನನ್ನದೇ ತಪ್ಪಾಗಿದೆ ಎಂದು ಹೇಳಿದರು.
ತಮ್ಮದೇ ಪಕ್ಷದ ಮುಖಂಡರ ಸಭೆಯಲ್ಲಿ ಸಿಟ್ಟಿನಿಂದ ಎದ್ದು ಹೊರ ನಡೆದ ಕುಮಾರಸ್ವಾಮಿ
ಕಾಂಗ್ರೆಸ್ ಜೊತೆ ಮೈತ್ರಿ ಸಮಯದಲ್ಲಿ ಮುಳ್ಳಿನ ಮೇಲೆ ಬಟ್ಟೆ ಹಾಕಿ ತಪ್ಪು ಮಾಡಿದ್ದೇನೆ. ಆ ತಪ್ಪನ್ನು ನಾನೇ ಸರಿ ಮಾಡುತ್ತೇನೆ ಎಂದು ಎಚ್.ಡಿ ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.
ನನ್ನ ಹಳೆಯ ಸ್ನೇಹಿತರು ನನ್ನ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರೆ, ಅವರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ನಾನೇನು ಅವರಿಗೆ ಅನ್ಯಾಯ ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ನನ್ನಿಂದ ಬೆಳೆದವರೇ ನನಗೆ ಮೋಸ ಮಾಡಿ ಚೂರಿ ಹಾಕಿ ಹೋಗಿದ್ದಾರೆ. ಇಲ್ಲಿ ನನ್ನದೇ ತಪ್ಪು ಇದೆ. ನಾನು ಉತ್ತಮರ ಸಹವಾಸ ಮಾಡಿದ್ದರೆ ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ಅಸಮಾಧಾನ ವ್ಯಕ್ತಪಡಿಸಿದರು.