ರಾಮನಗರ : 3ನೇ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು?
ರಾಮನಗರ, ಅಕ್ಟೋಬರ್ 28 : ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ. ಕ್ಷೇತ್ರಕ್ಕೆ ನಡೆಯುತ್ತಿರುವ 3ನೇ ಉಪ ಚುನಾವಣೆ ಇದಾಗಿದ್ದು, ಯಾರು ಗೆಲುವು ಸಾಧಿಸಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿ ಆಗಿದ್ದು ಹೇಗೆ?
ಕ್ಷೇತ್ರದಲ್ಲಿ ಹಿಂದೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇರ ಎದುರಾಳಿಗಳು. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಣೆ ಮಾಡಿದೆ.
ರಾಮನಗರ ಉಪ ಚುನಾವಣೆ : ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತಂತ್ರ ಬದಲು
ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಪ್ರಚಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರು ಈ ಉಪ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಬೇಕು ಎಂದು ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ.
ಉಪ ಚುನಾವಣೆ : ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ನಿರೀಕ್ಷೆ ಏನು?
3ನೇ ಉಪ ಚುನಾವಣೆ
ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಇದು 3ನೇ ಉಪ ಚುನಾವಣೆಯಾಗಿದೆ. 1997ರಲ್ಲಿ ಎಚ್.ಡಿ.ದೇವೇಗೌಡ ಹಾಗೂ 2009ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ಉಪ ಉಪಚುನಾವಣೆ ನಡೆದಿತ್ತು. ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಗೆಲುವು ಸಾಧಿಸಿತ್ತು. ಈಗ ಪುನಃ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ಉಪ ಚುನಾವಣೆ ಎದುರಾಗಿದೆ. ಯಾರು ಗೆಲುವು ಸಾಧಿಸಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿಯ ಶಕ್ತಿ ಅಷ್ಟಕಷ್ಟೇ
ರಾಮನಗರ ಚುನಾವಣೆ ಎಂದರೆ ಅದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೋರಾಟ. ಬಿಜೆಪಿಯ ಪ್ರಭಾವ ಕ್ಷೇತ್ರದಲ್ಲಿ ಸಮಾಧಾನಕರವಾಗಿಲ್ಲ. ಹೆಸರಿಗೆ ಮಾತ್ರ ಬಿಜೆಪಿ ಅಭ್ಯರ್ಥಿಗಳ ಸ್ಪರ್ಧೆ ಎಂಬಂತಿದೆ ವಾತಾವರಣ. ಈ ಉಪ ಚುನಾವಣೆಯಲ್ಲಿ ಇದು ಬದಲಾಗಲಿದೆಯೇ ಕಾದು ನೋಡಬೇಕು.
2013ರಲ್ಲಿ ಬಿಜೆಪಿ ಅಭ್ಯರ್ಥಿ ಶಿವಮಾದು ಅವರು ಗಳಿಸಿದ್ದು ಕೇವಲ 1776 ಮತಗಳನ್ನು. 2018ರ ಚುನಾವಣೆಯಲ್ಲಿ ಲೀಲಾವತಿ ಅವರು 4871 ಮತಗಳನ್ನುಗಳಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹಾಕಿಲ್ಲ. ಜೆಡಿಎಸ್-ಬಿಜೆಪಿ ನಡುವೆ ಪೈಪೋಟಿ ನಡೆದಿದೆ.
ಖಾತೆ ತೆರೆಯುವುದೇ ಬಿಜೆಪಿ?
ಅಚ್ಚರಿಯ ವಿಷಯ ಎಂದರೆ ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರ ಎಲ್.ಚಂದ್ರಶೇಖರ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ. ಈ ಬಾರಿ ಕ್ಷೇತ್ರದಲ್ಲಿ ಅವರು ಗೆದ್ದರೆ ಬಿಜೆಪಿ ಮೊದಲ ಗೆಲುವು ದಾಖಲಿಸಿದಂತೆ ಆಗುತ್ತದೆ. ಹೊಸದಾಗಿ ಪಕ್ಷವನ್ನು ಸಂಘಟನೆ ಮಾಡಿ ಬಿಜೆಪಿ ಭರ್ಜರಿಯಾಗಿ ಪ್ರಚಾರ ಆರಂಭಿಸಿದೆ.
ಅನಿತಾ ಕುಮಾರಸ್ವಾಮಿ
ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಅನಿತಾ ಕುಮಾರಸ್ವಾಮಿ ಅವರಿಗೆ ಕುಮಾರಸ್ವಾಮಿ ಅವರ ಹೆಸರಿನ ಬಲವೇ ಶ್ರೀರಕ್ಷೆಯಾಗಿದೆ. ಕಾಂಗ್ರೆಸ್ ಸಹ ಜೆಡಿಎಸ್ ಜೊತೆ ಕೈ ಜೋಡಿಸಿದ್ದು ಜೆಡಿಎಸ್ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರು ಅನಿತಾ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.