"ಡಿಕೆಶಿ ತನಿಖೆಯಲ್ಲಿ ಬಿಜೆಪಿ ಪಾತ್ರ ಏನಿದೆ"; ಡಿಸಿಎಂ ಗೋವಿಂದ ಕಾರಜೋಳ
ರಾಮನಗರ, ಸೆಪ್ಟೆಂಬರ್ 3: "ಬಿಜೆಪಿ ಎಂದಿಗೂ ದ್ವೇಷದ ರಾಜಕೀಯ ಮಾಡೋದಿಲ್ಲ. ಇಡಿ ಮತ್ತು ಐಡಿ ಸಾಂವಿಧಾನಿಕವಾಗಿ ಕೆಲಸ ಮಾಡುತ್ತಿವೆ ಅಷ್ಟೆ. ಅದರಲ್ಲಿ ಬಿಜೆಪಿ ಪಾತ್ರವೇನು?" ಎಂದು ಪ್ರಶ್ನಿಸಿದ್ದಾರೆ ಲೋಕೋಪಯೋಗಿ, ಸಮಾಜ ಕಲ್ಯಾಣ ಖಾತೆಯ ಸಚಿವ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ.
ರಾಮನಗರದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಅಭಿವೃದ್ಧಿ ಸಂಬಂಧ ಅಧಿಕಾರಿಗಳ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಬೇರೆಯವರು ಕಷ್ಟದಲ್ಲಿದ್ದಾಗ ಅದನ್ನು ನೋಡಿ ಸಂತೋಷ ಪಡುವಷ್ಟು ಕೆಟ್ಟ ಮನುಷ್ಯ ಅಲ್ಲ ನಾನು. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರುತ್ತದೆ. ಅಲ್ಲಿವರೆಗೂ ಕಾದು ನೋಡಿ" ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪರಿಚಯ
"ಅಮಿತ್ ಶಾ ಅವರು ಶಿವಕುಮಾರ್ ಗೆ ಕರೆ ಮಾಡಿದ್ದರು ಎಂಬುದು ಸುಳ್ಳು. ಕೆಲವರು ಸಾಂದರ್ಭಿಕವಾಗಿ ಮಾತನಾಡುತ್ತಾರೆ. ಇದಕ್ಕೆ ಬೆಲೆ ಕೊಡುವ ಅಗತ್ಯ ಇಲ್ಲ" ಎಂದು ಈಚೆಗೆ ಈ ಕುರಿತು ಆರೋಪಿಸಿದ್ದ ಎಂಎಲ್ಸಿ ಸಿ.ಎಂ.ಲಿಂಗಪ್ಪ ಅವರಿಗೆ ಪ್ರತಿಕ್ರಿಯಿಸಿದರು.
"ಬಿಜೆಪಿ ಅವರು ಕೆಲ ಶಾಸಕರ ಬಳಿ ಹಣದ ಬೇಡಿಕೆ ಇಟ್ಟಿದ್ದರು ಎಂದು ಈಚೆಗೆ ಸದನದಲ್ಲಿ ಚರ್ಚೆಯಾಗಿತ್ತು. ಈ ಬಗ್ಗೆ ತನಿಖೆಯಾಗಲಿ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಇದಕ್ಕೆ ಸಾಕ್ಷಿ ಇದ್ದರೆ ತರಲಿ, ಅಗತ್ಯ ಇದ್ದರೆ, ತನಿಖೆಯೂ ಆಗಲಿ" ಎಂದು ಸವಾಲು ಹಾಕಿದರು.