ರಾಮನಗರ; ಶೇಕಡಾ 90 ರಷ್ಟು ಮಾವು ಬೆಳೆ ನಾಶ, ಪರಿಹಾರಕ್ಕೆ ರೈತರ ಮೊರೆ
ರಾಮನಗರ, ಮಾರ್ಚ್ 24; ಅಕಾಲಿಕ ಅತಿವೃಷ್ಟಿ ಹಾಗೂ ರೋಗ ಬಾಧೆಯಿಂದ ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ಹಿತ ಕಾಪಾಡುವಂತೆ ಆಗ್ರಹಿಸಿ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತರು ಅಹೋ ರಾತ್ರಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ರಾಮನಗರ ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಸಂಸ್ಥೆ ನೇತೃತ್ವದಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದಾರೆ. ನಗರದ ಎಪಿಎಂಸಿ ಮಾರುಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಗುರುವಾರ ಮೆರವಣಿಗೆ ನಡೆಸಿದ ರೈತರು ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆದಿದ್ದು, ಬೆಳೆಯ ಕನಿಷ್ಟ ಶೇ 5ರಷ್ಟು ಫಸಲು ರೈತನಿಗೆ ಸಿಗುತ್ತಿಲ್ಲ ಎಂದು ಹೇಳಿದರು.
ಒಂದು ತಿಂಗಳು ತಡವಾಗಿ ಮಾರುಕಟ್ಟೆಗೆ ಬಂದ ರಾಮನಗರ ಮಾವು
ನಮ್ಮ ಸಮಸ್ಯೆ ಬಗ್ಗೆ ಅರಿಯುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸ್ಥಳಕ್ಕೆ ಬಂದು ಮಾವು ಬೆಳೆಗಾರರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯ ಮಾಡಿದರು.
ಅಕಾಲಿಕ ಮಳೆ; ಮಾವು ಫಸಲು ಕಡಿಮೆ ಸಾಧ್ಯತೆ, ರೈತರಿಗೆ ಸಲಹೆಗಳು
ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, "ಜಿಲ್ಲಾಡಳಿತ ರೈತರ ಹಿತ ರಕ್ಷಣೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯ ಹಾಗೂ ಶಿಫಾರಸು ಮಾಡಿದ ರಾಸಾಯನಿಕ ಔಷಧಗಳ ದುಷ್ಪರಿಣಾಮದಿಂದ ಶೇ 85ಕ್ಕೂ ಅಧಿಕ ಪ್ರಮಾಣದಲ್ಲಿ ಹೂವು ಬತ್ತಿ ಹೋಗಿ, ಹರಳು, ಈಚು ಜೊಳ್ಳಾಗಿ ಬಿದ್ದು ಹೋಗಿದ್ದು ರೈತರು ಭಾರಿ ಪ್ರಮಾಣದ ನಷ್ಟಕ್ಕೆ ಗುರಿಯಾಗಿದ್ದಾರೆ" ಎಂದರು.
ರಾಮನಗರ: ಬೊಮ್ಮಾಯಿ ಸರ್ಕಾರದಲ್ಲಿಯಾದರೂ ಮಾವು ಸಂಸ್ಕರಣ ಘಟಕ ಅನುಷ್ಠಾನಗೊಳ್ಳುವುದೇ?
120 ಕೋಟಿಗೂ ಹೆಚ್ಚು ನಷ್ಟ
ರೇಷ್ಮೆ ನಗರಿ ರಾಮನಗರ ಜಿಲ್ಲೆಯ ರೈತರು ವಾಣಿಜ್ಯ ಬೆಳೆಯಾಗಿ ಮಾವನ್ನು ನಂಬಿದ್ದಾರೆ. ಮಾವು ಬೆಳೆ ಕೂಡ ಈ ವರ್ಷ ಅಷ್ಟೇ ಸೊಗಸಾಗಿ ಬಂದಿದೆ. ಆದರೆ ಜೀವನಾಧಾರವಾಗಿದ್ದ ಮಾವು ಬೆಳೆ ರೈತನಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಅವಧಿಗೂ ಮುನ್ನವೇ ಹೂ ಆಗಿತ್ತು. ಆದರೆ ಇದೀಗ ಇದ್ದ ಅಲ್ಪ ಸ್ವಲ್ಪ ಮಾವು ಬೆಳೆ, ರೋಗಕ್ಕೆ ತುತ್ತಾಗಿ ಬೆಳೆಗಾರನಿಗೆ ಮೊತ್ತೊಮ್ಮೆ ಶಾಕ್ ನೀಡಿದೆ. ಮಾವಿನ ಬಗ್ಗೆ ಕನಸು ಕಟ್ಟಿಕೊಂಡಿದ್ದ ರೈತರು ಇದೀಗ ಕಂಗಾಲಾಗಿದ್ದಾರೆ.
ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಮಾವು ಬೆಳೆ ಕೈಕೊಟ್ಟ ಪರಿಣಾಮ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯಾದ್ಯಂತ ಅವಧಿಗೂ ಮುನ್ನವೇ ಮಾವು ಹೂವು ಕಚ್ಚಿದೆ. ಇದರಿಂದಾಗಿ ಈಗಾಗಲೇ ಕೆಲವು ಭಾಗಗಳಲ್ಲಿ ಮಾವಿನ ಕಾಯಿಗಳು ಮರಗಳಲ್ಲಿ ಇದ್ದರು ಸರಿಯಾದ ಫಸಲನ್ನು ಬಿಟ್ಟಿಲ್ಲ.
ಹವಾಮಾನ ವೈಪರಿತ್ಯ
ಇನ್ನೂ ಹವಾಮಾನ ವೈಪರೀತ್ಯಕ್ಕೆ ಒಳಗಾಗಿರುವ ಮಾವು ಮಳೆಯ ಅಭಾವ ಹಾಗೂ ಮಂಜಿನ ಅಭಾವದಿಂದ ಇದೀಗ ರೋಗಕ್ಕೆ ತುತ್ತಾಗಿದೆ. ಜೀಗೆ ಹುಳು ಭಾದೆ ಹೆಚ್ಚಾಗಿ ಹೂ ಹಾಗೂ ಕಾಯಿ ಉದುರುತ್ತಿದೆ. ಜಿಲ್ಲೆಯ ಮಾವು ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲೇ ಮಾವು ಬೆಳೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿರುವಂತಹ ಜಿಲ್ಲೆ ರಾಮನಗರ. ಜಿಲ್ಲೆಯಾದ್ಯಂತ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಇದೀಗ ಮೂರು ಹಂತಗಳಲ್ಲಿ ಮಾವು ಹೂ ಬಿಟ್ಟಿರುವುದು ಮಾವು ಫಸಲಿನ ಕುಂಠಿತಕ್ಕೆ ಕಾರಣವಾಗಿದೆ.
ತೋಟಗಾರಿಕಾ ಇಲಾಖೆ ಅಧಿಕಾರಿಗಳು
"ಮಾವು ಇಳುವರಿಯಿಲ್ಲದೇ ಚಿಂತೆಯಲ್ಲಿದ್ದ ಮಾವು ಬೆಳೆಗಾರರಿಗೆ ಹುಳು ಭಾದೆ ಹೆಚ್ಚಾಗಿ ಇಳುವರಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಫಸಲು ಕಡಿಮೆ ಸಿಗುವ ಆತಂಕ ರೈತರಿಗೆ ಎದುರಾಗಿದೆ. ಈಗಾಗಲೇ 2-3 ಬಾರಿ ಮಾವಿನ ಗಿಡಗಳಿಗೆ ಔಷಧಿ ಸಿಂಪಡಿಸಲಾಗಿದೆ ಆದರೂ ಕೂಡ ಜೀಗೆ ಹುಳು ಭಾದೆ ಹತೋಟಿಗೆ ಬರುತ್ತಿಲ್ಲಾ, ಈ ಸಂಭಂದ ಈಗಾಗಲೇ ಮಾವು ತಜ್ಞರಿಂದ ಸಲಹೆ ಪಡೆದು ಹುಳು ಹತೋಟಿಗೆ ಬರಲು ಹೊಸ ಔಷಧ ಸಿಂಪಡಣೆ ಮಾಡಲು ಕ್ರಮ ವಹಿಸಲಾಗುತ್ತಿದೆ" ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮುನೇಗೌಡ ಹೇಳಿದ್ದಾರೆ.
ಪರಿಹಾರ ನೀಡಲು ಒತ್ತಾಯ
ಮಾವು ಬೆಳೆಗೆ ಸಿಂಪಡಿಸುವ ಔಷಧಗಳ ಸಾಮರ್ಥ್ಯ ಗುಣಮಟ್ಟ ಪರಿಶೀಲಿಸಿ ಔಷಧಿ ಶಿಫಾರಸು ಮಾಡಬೇಕಾದ ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಗುಣಮಟ್ಟ ಖಾತರಿ ಇಲ್ಲದ ಔಷಧ ಬಳಕೆಯಿಂದ ರೈತರಿಗೆ ಸುಮಾರು 120 ಕೋಟಿಯಷ್ಟು ಹೆಚ್ಚು ಹಣ ಪೋಲಾಗಿದೆ. ಫಸಲು ಕಳೆದುಕೊಂಡಿರುವ ರೈತರಿಗೆ ಹೂ, ತರಕಾರಿ ಹಾಗೂ ಇತರೆ ಬೆಳೆಗಾರರಿಗೆ ನೀಡುವಂತೆ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಅಡಿ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.