"ನಾವು 5 ಲಕ್ಷ ನೆರೆ ಪರಿಹಾರ ಕೊಡುತ್ತಿದ್ದೇವೆ, ಅದೇ ತಪ್ಪಾ ನಮ್ಮದು?"
ರಾಮನಗರ, ಅಕ್ಟೋಬರ್ 7: "ಮೊದಲಿಗೆ ಒಂದು ಲಕ್ಷ ರುಪಾಯಿ ಹಾಗೂ ಹತ್ತು ಸಾವಿರ ರುಪಾಯಿ ತಲುಪಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಎನ್ಡಿಆರ್ ಎಫ್ ಹಾಗೂ ಎಸ್ಡಿಆರ್ ಎಫ್ನಿಂದ 4,138 ಕೋಟಿ ತಲುಪಿತ್ತು. ಎನ್ಡಿಎ ಸರ್ಕಾರದಲ್ಲಿ 5 ವರ್ಷದಲ್ಲಿ 7,200 ಕೋಟಿ ಸಿಕ್ಕಿದೆ. ಅಂಕಿ- ಅಂಶ ಬೇಕಾದರೆ ವಿಧಾನಸೌಧದಲ್ಲೂ ಮುಂದಿಡುತ್ತೇವೆ" ಎಂದು ಸಚಿವ ಸಿ. ಟಿ. ರವಿ ಸೋಮವಾರ ರಾಮನಗರದಲ್ಲಿ ಹೇಳಿದ್ದಾರೆ.
ನೆರೆ ಪರಿಹಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಕಾರಣಕ್ಕೂ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡಲ್ಲ. ಎನ್ಡಿಆರ್ ಎಫ್ ಮಾರ್ಗದರ್ಶಿ ಸೂತ್ರ ಪ್ರಕಾರ ಎಷ್ಟು ನೀಡಬೇಕೋ ಅಷ್ಟನ್ನು ನೀಡುತ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಈಗಾಗಾಲೇ ಹೇಳಿದ್ದಾರೆ ಎಂದು ರವಿ ತಿಳಿಸಿದ್ದಾರೆ.
ರಾಜಕಾರಣ ಮಾಡುವುದಕ್ಕೆ ಬೇರೆ ಬೇರೆ ವೇದಿಕೆಗಳಿವೆ. ಅಲ್ಲಿ ರಾಜಕಾರಣ ಮಾಡೋಣ. ಬರ, ಅತಿವೃಷ್ಟಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಸಿದ್ದರಾಮಯ್ಯ, ಎಚ್ ಡಿಕೆ ಸಿಎಂ ಆಗಿದ್ದಾಗ ಒಂದು ಮನೆಗೆ 96 ಸಾವಿರ ಕೊಡುತ್ತಿದ್ದರು. ನಾವು 5 ಲಕ್ಷ ಕೊಡುತ್ತಿದ್ದೇವೆ ಅದೇ ತಪ್ಪಾ ನಮ್ಮದು? ಎಂದು ರವಿ ಪ್ರಶ್ನೆ ಮಾಡಿದ್ದಾರೆ.
5 ಲಕ್ಷ ಕೊಡಲು ಮುಂದಾಗಿದ್ದೇವೆ
ಜಾಸ್ತಿ ಹಾನಿಯಾದ ಸಂತ್ರಸ್ತರಿಗೆ 1 ಲಕ್ಷ ರುಪಾಯಿ ಹಾಗೂ ಕಡಿಮೆ ಹಾನಿಯಾದ ಸಂತ್ರಸ್ತರಿಗೆ 25 ಸಾವಿರದಿಂದ 50 ಸಾವಿರ ಬಿಡುಗಡೆ ಮಾಡಿದ್ದೇವೆ. ಯಾರಿಗಾದರೂ ಪರಿಹಾರ ತಲುಪಿಲ್ಲ ಅಂದರೆ ಅದು ದಾಖಲೆಗಳ ತಪ್ಪಿನಿಂದ ಆಗಿರಬಹುದು. ಆದರೆ 100 ಕೋಟಿ ಬೆಲೆ ಬಾಳುವ ಆಸ್ತಿಯೇ ಆದರೂ 95,000 ರುಪಾಯಿ ಅಷ್ಟೇ ಕೇಂದ್ರ ಸರ್ಕಾರ ಕೊಡುವುದು. ನಾವು ಉಳಿದ ಹಣ ಸೇರಿಸಿ 5 ಲಕ್ಷ ಕೊಡಲು ಮುಂದಾಗಿದ್ದೇವೆ. ನೆರೆಪೀಡಿತ ಸ್ಥಳಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಉತ್ತರಿಸಿದ ಅವರು, ತಾತ್ಕಾಲಿಕ ಪರಿಹಾರವನ್ನು ಕೊಟ್ಟಿದ್ದೇವೆ. ಒಬ್ಬರದ್ದು ಅರ್ಧ ಎಕರೆ ಭೂ ಕುಸಿತದಲ್ಲಿ ಹೋಗಿದೆ. ಅದಕ್ಕೆ ಕೇಂದ್ರದಿಂದ 1 ಹೆಕ್ಟೇರ್ಗೆ 38 ಸಾವಿರದಂತೆ ಬರುತ್ತದೆ. ಅದೇ ರೀತಿ ಕೆಲವು ಜಿಲ್ಲೆಗಳಲ್ಲಿ ಭೂ ಕುಸಿತಕ್ಕೆ ಪರಿಹಾರ ಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ ಎಂದು ರವಿ ಹೇಳಿದ್ದಾರೆ.
ತಾತ್ಕಾಲಿಕ ಪರಿಹಾರ ನೀಡಿದ್ದೇವೆ
ಚನ್ನಪ್ಪಗೌಡ ಹಾಗೂ ಚಂದ್ರಪ್ಪಗೌಡ ಎಂಬಿಬ್ಬರು ತೀರಿಕೊಂಡಿದ್ದಾರೆ. ನಾನು ಸಾವಿನ ವಿಚಾರದಲ್ಲಿ ವಿವಾದ ಮಾಡಲು ಬಯಸುವುದಿಲ್ಲ. ಸ್ಪಂದಿಸುವಂತಹ ಕೆಲಸ ನಮ್ಮದು. ಒಬ್ಬರದ್ದು ಅರ್ಧ ಎಕರೆ ಮಾತ್ರ ಭೂ ಕುಸಿತದಲ್ಲಿ ಹೋಗಿದೆ. ಈಗ ಇರುವುದು ಒಂದೂಕಾಲು ಎಕರೆ. ನಾವು ಭರವಸೆ ನೀಡಿದಂತೆಯೇ ತಾತ್ಕಾಲಿಕ ಪರಿಹಾರ ನೀಡಿದ್ದೇವೆ. ಆ ನಂತರವೂ ಹತಾಶರಾಗುತ್ತಾರೆ ಅಂದರೆ ಅದಕ್ಕೆ ಕಾರಣ ಆಲೋಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಮೊದಲು ನೆರೆ ಪರಿಹಾರದ ಬಗ್ಗೆ ಯೋಚನೆ
ಇನ್ನು ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರವಿ, ಅವರು ಹೇಳಿದ್ದು ಬೇರೆ ಕಾರ್ಯಕ್ಕೆ ಹಣವಿಲ್ಲ ಎಂಬರ್ಥದಲ್ಲಿ. ಎಲ್ಲವನ್ನೂ ಪರಿಹಾರ ಕಾರ್ಯಕ್ಕೆ ವಿನಿಯೋಗಿಸಬೇಕಿದೆ. ನೇಕಾರರ ಸಾಲ ಮನ್ನಾ ಪ್ಯಾಕೇಜ್ ಸಂಬಂಧ ಹೇಳಿದ್ದು. ನಾನು ಚಿಕ್ಕಮಗಳೂರಿಗೆ ಸ್ಪೆಷಲ್ ಪ್ಯಾಕೇಜ್ 100 ಕೋಟಿ ನೀಡುವಂತೆ ಮನವಿ ಮಾಡಿದ್ದೆ. ಅವರು 10 ಕೋಟಿ ಕೊಡುತ್ತೇನೆ ಅಂದಿದ್ದರು. ಅದು ಸಾಲಲ್ಲ ಅಂದಿದ್ದಕ್ಕೆ, ಮೊದಲು ಪರಿಹಾರದ ಬಗ್ಗೆ ಗಮನ ಕೊಡೋಣ ಅಂದರು.
ಅನ್ಯ ಕಾರ್ಯಕ್ಕೆ ವಿನಿಯೋಗಿಸಲು ದುಡ್ಡಿಲ್ಲ ಅಂದಿದ್ದಾರೆ ಅಷ್ಟೇ ಎಂದು ರವಿ ಉತ್ತರಿಸಿದ್ದಾರೆ.
ಯತ್ನಾಳ್ ಗೆ ನೋಟಿಸ್ ನೀಡಿದ ಕಾರಣವೇ ಬೇರೆ ಇದೆ
ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ಗೆ ನೋಟಿಸ್ ನೀಡಿದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ನೆರೆ ಪರಿಹಾರದ ಬಗ್ಗೆ ಮಾತನಾಡಿದರೆ ಶೋಕಾಸ್ ನೋಟಿಸ್ ನೀಡಲ್ಲ. ಜನರ ಧ್ವನಿಯಾಗುವುದಕ್ಕೆ ಅಂತಲೇ ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ಕೇವಲ ಪರಿಹಾರಕ್ಕೆ ಎಂದು ತಿಳಿದುಕೊಳ್ಳಬೇಡಿ. ಅದನ್ನು ಬಿಟ್ಟು ಬೇರೆ ಬೇರೆ ಮಾತನಾಡಿದ್ದಾರೆ. ಆ ಕಾರಣವನ್ನು ಉಲ್ಲೇಖಿಸಿಯೇ ಶೋಕಾಸ್ ನೋಟಿಸ್ ಕೊಟ್ಟಿದ್ಧಾರೆ. ನಾನು ಕೂಡ, ಪ್ರತಿಭಟನೆ ಮಾಡುವ ಮೊದಲನೆಯವನು ಅಂತ ಹೇಳಿದ್ದೆ. ನನಗೇನೂ ನೋಟಿಸ್ ಕೊಟ್ಟಿಲ್ಲ. ಕರ್ನಾಟಕದ ಹಿತಾಸಕ್ತಿಯನ್ನು ಬಿಟ್ಟು ನಾವು ರಾಜಕಾರಣ ಮಾಡಲ್ಲ್. ದೇಶದ ಹಿತಾಸಕ್ತಿ, ರಾಜ್ಯದ ಹಿತಾಶಕ್ತಿ ಗಮನದಲ್ಲಿ ಇರಿಸಿಕೊಂಡೇ ರಾಜಕಾರಣ ಮಾಡುತ್ತೇವೆ. ಆ ವಿಚಾರವನ್ನು ಬಿಟ್ಟು ಮಾತನಾಡಿರುವುದಕ್ಕೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ರವಿ ಹೇಳಿದ್ದಾರೆ.