ಚನ್ನಪಟ್ಟಣದ ಜನ ಹಾಲನ್ನಾದರೂ ನೀಡಿ, ವಿಷವನ್ನಾದರೂ ಕೊಡಿ: ಎಚ್ ಡಿಕೆ
Recommended Video
ಚನ್ನಪಟ್ಟಣ (ರಾಮನಗರ ಜಿಲ್ಲೆ), ಏಪ್ರಿಲ್ 4: "ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾನೇ" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಘೋಷಣೆ ಮಾಡಿದರು. ಈ ಕ್ಷೇತ್ರದ ಜನರು ಹಾಲನ್ನಾದರೂ ನೀಡಿ ಅಥವಾ ವಿಷವನ್ನಾದರೂ ಕೊಡಿ ಎನ್ನುವ ಮೂಲಕ ಭಾವನಾತ್ಮಕವಾಗಿ ಜನರನ್ನು ತಲುಪುವ ಪ್ರಯತ್ನ ಮಾಡಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಇದರ ಜತೆಗೆ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಕೂಡ ಕುಮಾರಸ್ವಾಮಿ ಗುಡುಗಿದರು. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆ ನಡೆಯಿತು. ವಿಕಾಸ ಯಾತ್ರೆಯಲ್ಲಿ ಚನ್ನಪಟ್ಟಣದ ಕಾರ್ಯಕರ್ತರಿಗೆ ಕುಮಾರಸ್ವಾಮಿ ಸಿಹಿ ಸುದ್ದಿಯನ್ನೇ ಹೇಳಿದ್ದಾರೆ.
ಚಿತ್ರಗಳು :ಜೆಡಿಎಸ್ ವಿಕಾಸಪರ್ವ ಯಾತ್ರೆಯಲ್ಲಿ ಕುಮಾರಸ್ವಾಮಿ
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಾದರೆ ಒಂದೊಂದು ಸ್ಥಾನವೂ ಮುಖ್ಯ. ಆದ್ದರಿಂದ ರಾಮನಗರ-ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ನಾನೇ ಸ್ಪರ್ಧೆ ಮಾಡುತ್ತೇನೆ. ಚನ್ನಪಟ್ಟಣ-ರಾಮನಗರ ನನಗೆ ಎರಡು ಕಣ್ಣು ಇದ್ದ ಹಾಗೆ. ಅದರಲ್ಲಿ ಒಂದು ಕಣ್ಣು ಕಳೆದುಕೊಳ್ಳಲು ನಾನು ಸಿದ್ಧನಿಲ್ಲ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.
ಕಾರ್ಯಕರ್ತರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು
ಇದೇ ವೇಳೆ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಗುಡುಗಿದ ಅವರು, ದೇವೇಗೌಡರ ಕಾಲದಲ್ಲಿ ಇಗ್ಗಲೂರಿನ ಬ್ಯಾರೇಜ್ ಉದ್ಘಾಟನೆ ಮಾಡಲಾಗಿತ್ತು. ಆದರೆ ಇಲ್ಲಿನ ಶಾಸಕ ಸಿ.ಪಿ.ಯೋಗೇಶ್ವರ್ , 'ನನ್ನದೇ ಪರಿಶ್ರಮ, ನಾನೇ ಭಗೀರಥ' ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹವರಿಗೆ ಕಾರ್ಯಕರ್ತರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
"ಸಿದ್ದು ರಾಜಕೀಯದ ಆರಂಭ, ಅಂತ್ಯ ಎಲ್ಲಾ ಚಾಮುಂಡೇಶ್ವರಿಯಲ್ಲೇ!"
ಜೆಡಿಎಸ್ ಸ್ವಂತ ಬಲದ ಮೇಲೆ ಹೋರಾಟ
ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ಪಕ್ಷ ಯಾರ ಹಂಗಿಲ್ಲದೆ ಸ್ವಂತ ಬಲದ ಮೇಲೆ ಹೋರಾಟ ನಡೆಸುತ್ತಿದೆ. ಇಗ್ಗಲೂರು ಬ್ಯಾರೇಜ್ ದೇವೇಗೌಡರ ಕಾಲದಲ್ಲಿ ನಿರ್ಮಾಣವಾಗಿಲ್ಲ ಎಂದು ಇಲ್ಲಿನ ಶಾಸಕರು ಉಡಾಫೆಯಾಗಿ ಮಾತನಾಡುತ್ತಾರೆ. ಇಗ್ಗಲೂರಿನಲ್ಲಿ ಬ್ಯಾರೇಜ್ ಮಾಡಿ ಎಂದು ಯಾರೂ ಅರ್ಜಿ ಹಾಕಿರಲಿಲ್ಲ. ಇಲ್ಲಿನ ರೈತರಿಗೆ ಉಪಯೋಗವಾಗಲಿ ಎಂದು ನಾನೇ ಮಾಡಿದ್ದೆ. ಆದರೆ ಇಲ್ಲಿನ ಶಾಸಕರು ಭಗೀರಥ ಎಂದು ಹೇಳಿಕೊಂಡು ಶಿಲೆಗಳನ್ನು ಹಾಕಿಸಿಕೊಂಡಿದ್ದಾರೆ ಎಂದು ಯೋಗೀಶ್ವರ್ ಹೇಳಿಕೆಗೆ ತಿರುಗೇಟು ನೀಡಿದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಬಾರದು
ಕಾವೇರಿ ವಿಚಾರದಲ್ಲಿ ತಮಿಳುನಾಡು ಸಂಸದರು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಿದ್ದಾರೆ. ಲೋಕಸಭಾ ಕಲಾಪ ನಡೆಯಲು ಬಿಡುತ್ತಿಲ್ಲ. ನಮ್ಮ ರಾಜ್ಯಕ್ಕೆ ಅನ್ಯಾಯ ಅಗದಂತೆ ತಡಯಬೇಕಿದೆ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಧಿಕ್ಕರಿಸಿ, ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ವಿಕಾಸ ಪರ್ವ ಹಲವು ವಿಶೇಷತೆಗೆ ಸಾಕ್ಷಿ
ಚನ್ನಪಟ್ಟಣದಲ್ಲಿ ನಡೆದ ವಿಕಾಸ ಪರ್ವ ಹಲವು ವಿಶೇಷಗಳಿಗೆ ಸಾಕ್ಷಿಯಾಗಿತ್ತು. ಸುಮಾರು ಏಳು ಕಿಲೋಮೀಟರ್ ವರೆಗೆ, ಸತತ ಐದು ಗಂಟೆ ವಿಕಾಸ ವಾಹಿನಿಯಲ್ಲಿ ಕುಮಾರಸ್ವಾಮಿ ದಂಪತಿ ರೋಡ್ ಶೋ ನಡೆಸಿದರು. ರಸ್ತೆಯ ಉದ್ದಕ್ಕೂ ಅಭಿಮಾನಿಗಳು ಜೆಸಿಬಿ ಯಂತ್ರಗಳ ಮೂಲಕ ಎಚ್ ಡಿಕೆ ದಂಪತಿಗೆ ಹೂವಿನ ಹಾರ, ಹೂವನ್ನು ಹಾಕಿದ್ದು ವಿಶೇಷವಾಗಿತ್ತು. ಐವತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ವಿಕಾಸ ಪರ್ವ ಸಮಾವೇಶಕ್ಕೆ ಸಾಕ್ಷಿಯಾಗಿದ್ದರು.