ಸಂಭ್ರಮದ ಮಧ್ಯೆ ಅನಾಥವಾದ ವಿಧಾನಸೌಧ ನಿರ್ಮಾತೃ ಕೆಂಗಲ್ ಸಮಾಧಿ
Recommended Video
ರಾಮನಗರ, ಅಕ್ಟೋಬರ್ 25: ಸಿಲಿಕಾನ್ ಸಿಟಿಯ ವಿಧಾನಸೌಧದಲ್ಲಿ ಇಂದು ಹಬ್ಬವೋ ಹಬ್ಬ. 60 ವಸಂತಗಳನ್ನು ಪೂರೈಸಿದ ವಿಧಾನಸೌಧಕ್ಕೆ ವಜ್ರಮಹೋತ್ಸವದ ಸಡಗರ; ಹೂಮಾಲೆಗಳ ಆಡಂಬರ.
ಗ್ಯಾಲರಿ:ವಿಧಾನಸೌಧ ವಜ್ರಮಹೋತ್ಸವಕ್ಕೆ ಭರ್ಜರಿ ತಯಾರಿ
ಆದರೆ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಒಂದು ಹೂವಿನ ಮಾಲೆಯೂ ಇಲ್ಲ. ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿನ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಇಂದು ಒಂದೇ ಒಂದು ಹೂವಿನ ಹಾರವನ್ನೂ ಹಾಕದಷ್ಟು ಅಮಾನವೀಯತೆಯನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಮೆರೆದಿದೆ.
ವಿಧಾನಸೌಧ ವಜ್ರಮಹೋತ್ಸವದಿಂದ ಅಂತರ ಕಾಯ್ದುಕೊಂಡ ಜೆಡಿಎಸ್
ವಿಧಾನಸೌಧ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯನವರು ಕಟ್ಟಿಸಿದ ಕಟ್ಟಡಕ್ಕೆ ಕೊಟ್ಟ ಮಾನ್ಯತೆ ಕೆಂಗಲ್ ಹನುಮಂತಯ್ಯನವರಿಗೆ ಇಂದು ರಾಜ್ಯ ಸರ್ಕಾರ ನೀಡಿಲ್ಲ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದೆ ಕೆಂಗಲ್ ಸಮಾಧಿ
ರಾಮನಗರ ಜಿಲ್ಲೆಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಕೆಂಗಲ್ ಬಳಿಯಿರುವ ಅವರ ಸಮಾಧಿಗೆ ನೆಪಮಾತ್ರಕ್ಕೊಂದು ವಿದ್ಯುತ್ ದೀಪವಿಲ್ಲ; ಸಮಾಧಿ ಸುತ್ತ ಶುಚಿತ್ವವಿಲ್ಲ. ಇದಲ್ಲದೇ ಇಂದು ವಜ್ರಮಹೋತ್ಸವಕ್ಕೆ ಕಾರಣರಾದ ಅವರನ್ನ ನೆನೆಯೋ ಕಾಯಕವೂ ಕೂಡಾ ನಡೆದಿಲ್ಲ.
ಸಮಾಧಿಗೊಂದು ಹೂಗುಚ್ಛವಿಲ್ಲ
ಅವರ ಸಮಾಧಿ ಇದೀಗ ಧೂಳು, ಕಸಕಡ್ಡಿಗಳಿಂದ ಕೂಡಿದ ದುರ್ಗತಿಗೆ ಬಂದಿದೆ. ಆದರು ಕೂಡಾ ಶುಚಿ ಮಾಡುವ ಇಲ್ಲವೇ ಇಂದು ವಜ್ರ ಮಹೋತ್ಸವ ಆಚರಿಸಿಕೊಳ್ಳಲು ಕಾರಣರಾದವರ ಸಮಾಧಿಗೊಂದು ಹೂಗುಚ್ಛವನ್ನಿಡುವ ಕಾಯಕ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮಾಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ಸರ್ಕಾರದ ನಡೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಉಳಿದಿರುವ ಸಮಾಧಿಗೂ ಮರ್ಯಾದೆ ಇಲ್ಲವೇ?
ಅಂದಹಾಗೇ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರು ತಮ್ಮೆಲ್ಲ ಶ್ರಮವನ್ನು ಹಾಕಿ ವಿಧಾನಸೌಧವನ್ನು ಕಟ್ಟಿಸಿದ್ದಾರೆ. ಆದರೆ ಅವರ ನೆನಪಿಗಾಗಿ ತವರು ಜಿಲ್ಲೆಯಲ್ಲಿ ಉಳಿದಿರುವುದು ಕೇವಲ ಒಂದು ಸಮಾಧಿ ಮಾತ್ರ. ಅಂತಹ ವ್ಯಕ್ತಿಯ ಸಮಾಧಿಯನ್ನ ಉಳಿಸುವಂತಹ ಕಾಯಕವನ್ನು ಸಹ ಜಿಲ್ಲಾಡಳಿತ ಮಾಡುತ್ತಿಲ್ಲ.
ಇನ್ನಾದರೂ ಜಿಲ್ಲಾಡಳಿತ ಗಮನಹರಿಸಲಿ
ಇನ್ನು ಇಂಧನ ಸಚಿವ ಡಿ.ಕೆ ಶಿವಕುಮಾರ್ರ ಉಸ್ತುವಾರಿ ಜಿಲ್ಲೆ ಕೂಡಾ ರಾಮನಗರ. ಅದರೆ ಅವರ ಜಿಲ್ಲೆಯಲ್ಲಿಯೇ ಇರುವ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರ ಸಮಾಧಿಯತ್ತ ಕಣ್ಣೆತ್ತಿಯೂ ನೋಡಿಲ್ಲ. ಅಲ್ಲದೇ ಸಮಾಧಿಗೆ ಕೇವಲ ಮೂರು ದಿನಗಳು ಮಾತ್ರ ಹೂವಿನ ಅಲಂಕಾರವಾಗುತ್ತೆ. ಅದು ಕೆಂಗಲ್ರ ಜನ್ಮದಿನ, ಮರಣದ ದಿನ ಹಾಗೂ ಪಿತೃಪಕ್ಷದ ದಿನ ಪುತ್ರಿ ವಿಜಯಲಕ್ಷ್ಮಿಯವರು ಪೂಜೆ ಪುನಸ್ಕಾರಗಳನ್ನ ಮಾಡುತ್ತಾರೆ. ಅಷ್ಟೆ. ಜಿಲ್ಲಾಡಳಿತ ಯಾವ ದಿನಗಳಲ್ಲೂ ಸಹ ಕೆಂಗಲ್ ಹನುಮಂತಯ್ಯನವರ ಸಮಾಧಿ ಬಳಿ ಸುಳಿಯುವುದಿಲ್ಲ.
ಇನ್ನಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತು ಕೆಂಗಲ್ ಹನುಮಂತಯ್ಯನವರ ಸಮಾಜ ಸೇವೆಗಾದರು ಬೆಲೆ ನೀಡಲಿ ಅನ್ನೋದು ನಮ್ಮೆಲ್ಲರ ಆಶಯವಾಗಿದೆ.