ಸಿ.ಪಿ.ಯೋಗೇಶ್ವರ್ ಭೇಟಿಯ ಬೆನ್ನಲ್ಲೇ ಕುತೂಹಲ ಮೂಡಿಸಿದ ಕುಮಾರಸ್ವಾಮಿ 2 ದಿನದ ಪ್ರವಾಸ
ರಾಮನಗರ, ಜ 19: ಇನ್ನೂ ಖಾತೆ ಹಂಚಿಕೆಯಾಗದ ಸಚಿವ ಸಿ.ಪಿ.ಯೋಗೇಶ್ವರ್ ಅವರು ತಮ್ಮ ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಭೇಟಿ ನೀಡಿದ ಮರುದಿನವೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಲ್ಲಿಗೆ ಎರಡು ದಿನದ ಪ್ರವಾಸಕ್ಕಾಗಿ ಬಂದಿಳಿದಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಹಾವು-ಮುಂಗುಸಿಯಂತಿರುವ ನಾಯಕರುಗಳಲ್ಲಿ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಅವರು ಕೂಡಾ ಒಂದು. ಒಂದು ಹಂತದಲ್ಲಿ ಕುಮಾರಸ್ವಾಮಿ, ಬಿಜೆಪಿಗೆ ಹತ್ತಿರುವಾಗುತ್ತಿದ್ದಂತಹ ಸಂದರ್ಭದಲ್ಲೂ ಇವರಿಬ್ಬರ ನಡುವೆ ಮಾತಿನ ಚಕಮಕಿಗೆ ಬರವಿರಲಿಲ್ಲ.
ಚನ್ನಪಟ್ಟಣಕ್ಕೆ ಸಚಿವ ಯೋಗೇಶ್ವರ್ ಆಗಮನ; ಅದ್ದೂರಿ ಸ್ವಾಗತ
ಸಚಿವರಾದ ನಂತರ ಮೊದಲ ಬಾರಿಗೆ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಯೋಗೇಶ್ವರ್ ಅವರನ್ನು ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ದೂರಿಯಾಗಿಯೇ ಬರಮಾಡಿ ಕೊಂಡಿದ್ದರು. ಸುಮಾರು ಐನೂರು ಕೆಜಿಯ ಸೇಬಿನ ಹಾರವನ್ನು ಹಾಕಿದ್ದರು.
ಇತ್ತೀಚೆಗೆ, ಕುಮಾರಸ್ವಾಮಿಯವರು ದೇವನಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿ ಪ್ರವಾಸದಲ್ಲಿದ್ದಾಗಲೂ, ಜೆಡಿಎಸ್ ಅಭಿಮಾನಿಗಳು ಅವರಿಗೆ ಸೇಬಿನ ಹಾರವನ್ನು ಹಾಕಿದ್ದರು. ಅದಕ್ಕೆ ಕೌಂಟರ್ ಕೊಡುವಂತೆ, ಬಿಜೆಪಿ ಅಭಿಮಾನಿಗಳು ಯೋಗೇಶ್ವರ್ ಗೆ ಹಾರ ಹಾಕಿದ್ದರು.
ಬೆಳಗಾವಿಯಲ್ಲಿ ಅಮಿತ್ ಶಾ ಭಾಷಣ ಕೇಳಿ ನಗು ತಡೆಯಲಾಗಲಿಲ್ಲ!
ಯೋಗೇಶ್ವರ್ ವಸೂಲಿ ಗಿರಾಕಿ
ಯೋಗೇಶ್ವರ್ ಅವರು ಸಚಿವರಾದ ನಂತರ ಅವರನ್ನು ವಸೂಲಿ ಗಿರಾಕಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದರು. "ಯೋಗೇಶ್ವರನ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗುತ್ತಿದೆ. ಇದನ್ನು ನಾನು ಆರೋಪ ಮಾಡುತ್ತಿಲ್ಲ. ನಮ್ಮ ಕುಟುಂಬ ಯಾರಿಗೂ ರಾಜಿಯಾಗಲ್ಲ. ಪ್ರಧಾನಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹಾಗಾಗಿ ಒಂದು ಮಂತ್ರಿ ಸ್ಥಾನಕ್ಕೆ ಹೆದರುತ್ತೇನಾ. ಇಂತಹ ಮಂತ್ರಿಗಳನ್ನು ಎಷ್ಟು ನೋಡಿಲ್ಲ ನಾನು"ಎಂದು ಎಚ್ಡಿಕೆ ಲೇವಡಿ ಮಾಡಿದ್ದರು.
ಯೋಗೇಶ್ವರ್ ತಿರುಗೇಟು
"ನನಗೆ ಅವರಿಗಿಂತಲೂ ಚೆನ್ನಾಗಿ ಮಾತನಾಡಲು ಬರುತ್ತೆ, ಮುಂದೆ ಗಂಭೀರವಾಗಿ ಮಾತನಾಡಲು ಕಲಿತುಕೊಳ್ಳಲಿ. ಯಾರ್ಯಾರ ದಾಖಲೆ ಇಟ್ಟುಕೊಂಡಿದ್ದಾರೆಂದು ಅವರನ್ನೇ ಕೇಳಬೇಕು. ಅವರ ಅಸ್ತಿತ್ವಕ್ಕೆ ಅವರು ಬಡಿದಾಡುತ್ತಿದ್ದಾರೆ, ನಾನು ಕ್ಷೇತ್ರ ಉಳಿಸಿಕೊಳ್ಳಲು ಹೋರಾಡುತ್ತಿದ್ದೇನೆ. ಹಾಗಾಗಿ ಅವರು ನನ್ನನ್ನು ಹೊಗಳೋಕೆ ಆಗುತ್ತಾ, ಇಂದ್ರ-ಚಂದ್ರ ಅನ್ನೋಕೆ ಆಗುತ್ತಾ"ಎಂದು ಯೋಗೇಶ್ವರ್ ತಿರುಗೇಟು ನೀಡಿದ್ದರು.
ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಎಚ್ಚಿಕೆ
ಯೋಗೇಶ್ವರ್ ಅವರು ಚನ್ನಪಟ್ಟಣಕ್ಕೆ ಭೇಟಿ ನೀಡಿದ ಮರುದಿನದಿಂದಲೇ ಕುಮಾರಸ್ವಾಮಿ ಕ್ಷೇತ್ರ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಕ್ಷೇತ್ರಕ್ಕೆ ಹೋಗುವ ಮುನ್ನಾ, ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಎಚ್ಚಿಕೆ, ಕ್ಷೇತ್ರದ ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳನ್ನು ಭೇಟಿಯಾಗಿ, ನಂತರ ಲೋಕೋಪಯೋಗಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
Recommended Video
ಯೋಗೇಶ್ವರ್ ಭೇಟಿಯ ಮರುದಿನ ಎಚ್ಡಿಕೆ ಭೇಟಿ
ಇದಾದ ನಂತರ ಕೋಡಂಬಳ್ಳಿ, ಅಕ್ಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚಿಕ್ಕಲೂರು ಗ್ರಾಮದಲ್ಲಿನ ಕಾರ್ಯಕ್ರಮವನ್ನು ಮುಗಿಸಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಮರುದಿನ ಅಂದರೆ, ಜನವರಿ ಇಪ್ಪತ್ತರಂದು ಮಳೂರು, ಬೇವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಯೋಗೇಶ್ವರ್ ಭೇಟಿಯ ಮರುದಿನ ಎಚ್ಡಿಕೆ ಭೇಟಿ ನೀಡುತ್ತಿರುವುದು ಪಕ್ಷ ಸಂಘಟನೆ ಚುರುಕುಗೊಳಿಸಲು ಎಂದು ಹೇಳಲಾಗುತ್ತಿದೆ.