ಯಡಿಯೂರಪ್ಪ ಯಾವುದೇ ಕಾರಣಕ್ಕೂ ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡಲ್ಲ: ವಾಟಾಳ್ ನಾಗರಾಜ್
ರಾಮನಗರ, ಸೆಪ್ಟೆಂಬರ್ 16: ಸಿಎಂ ಬಿ.ಎಸ್ ಯಡಿಯೂರಪ್ಪನ ಮಾತನ್ನು ನಂಬಬೇಡಿ, ಸುಳ್ಳು ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರ ಸುಳ್ಳು, ಅವರು ಯಾವುದೇ ಕಾರಣಕ್ಕೂ ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ವಾಟಾಳ್ ನಾಗರಾಜ್ ಅವರು ಇಂದು ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಐಜೂರು ವೃತ್ತದಲ್ಲಿ ಮೇಕೆದಾಟು ಆಣೆಕಟ್ಟು ಯೋಜನೆಗೆ ಶೀಘ್ರ ಶಂಕು ಸ್ಥಾಪನೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಅನುಮೋದನೆ ನಂತರ ಮೇಕೆದಾಟು ಅಣೆಕಟ್ಟು ನಿರ್ಮಾಣ; ರಮೇಶ್ ಜಾರಕಿಹೊಳಿ
ಮೇಕೆದಾಟು ಆಣೆಕಟ್ಟು ನಿರ್ಮಾಣ ಸ್ಥಳಕ್ಕೆ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ಭೇಟಿ ಕೊಟ್ಟಿದ್ದಾರೆ. ಸರ್ಕಾರ ಆಣೆಕಟ್ಟು ನಿರ್ಮಾಣ ಮಾಡುವುದಿಲ್ಲ, ಅವರಿಗೆ ಯೋಜನೆ ಬೇಕಾಗಿಲ್ಲ, ಸರ್ಕಾರ ಯೋಜನೆಯ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಇದು ರಾಜ್ಯದ ಜನರಿಗೆ ಮಾಡುತ್ತಿರುವ ಮೋಸ ಎಂದು ಸರ್ಕಾರದ ವಿರುದ್ಧ ವಾಟಾಳ್ ಹರಿಹಾಯ್ದರು.
ಸರ್ಕಾರ ಮೇಕೆದಾಟು ಯೋಜನೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಇದೇ ತಿಂಗಳ 26 ರಂದು ರಾಮನಗರದಲ್ಲಿ ಹೆದ್ದಾರಿ ಬಂದ್ ಮಾಡಿ ತಮಿಳುನಾಡು ಭೂತ ದಹನ ಮಾಡಿ ಉಗ್ರರೂಪದ ಹೋರಾಟ ಮಾಡುವುದಾಗಿ ವಾಟಾಳ್ ನಾಗರಾಜ್ ಘೋಷಣೆ ಮಾಡಿದರು.
ಈಗಾಗಲೇ ತಮಿಳುನಾಡು ಸರ್ಕಾರ ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಮೊಂಡುತನ ತೋರುತ್ತಿದೆ,
ನಮ್ಮ ಕುಡಿಯುವ ನೀರಿನ ಯೋಜನೆಯನ್ನು ತಡೆಯಲು ಇವರು ಯಾರು? ಇವರ ಅಪ್ಪಣೆ ನಮಗೆ ಬೇಕಿಲ್ಲ. ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅಡ್ಡಿ ಮಾಡಿದರೆ ತಮಿಳುನಾಡಿನ ಒಂದೇ ಒಂದು ವಾಹನ ರಾಜ್ಯಕ್ಕೆ ಬರದಂತೆ ಗಡಿ ಬಂದ್ ಮಾಡುವುದಾಗಿ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಇರುವುದು ಇಬ್ಬರು ಹೆಣ್ಣು ಮಕ್ಕಳು ಮಾತ್ರನಾ..? ಈ ಮಾಫಿಯಾ ಮುಚ್ಚಿ ಹಾಕುವ ತಂತ್ರ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ವಾಟಾಳ್ ನಾಗರಾಜ್ ಆರೋಪ ಮಾಡಿದರು.
ಈ ಡ್ರಗ್ಸ್ ಮಾಫಿಯಾದಲ್ಲಿ ಮಂತ್ರಿಗಳು, ಅಧಿಕಾರಿಗಳ ಮಕ್ಕಳು ಇದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿಲ್ಲ. ಈ ಡ್ರಗ್ಸ್ ಮಾಫಿಯಾ ಸಮಗ್ರ ತನಿಖೆಯಾದಾಗ ಮಾತ್ರ ಸತ್ಯಾಸತ್ಯತೆ ಹೊರ ಬೀಳಲಿದೆ. ಒಂದು ವೇಳೆ ತನಿಖೆ ನಡೆಸದಿದ್ದರೆ ಕರ್ನಾಟಕ ಬಂದ್ ನಡೆಸುತ್ತೇವೆ ಎಂದು ಕನ್ನಡ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.