"ಕೊರೊನಾ ಭೀತಿ ನಡುವೆಯೂ ಕರ್ತವ್ಯದಲ್ಲಿರುವವರಿಗೆ ವಿಶೇಷ ಭತ್ಯೆ ನೀಡಿ"
ರಾಮನಗರ, ಏಪ್ರಿಲ್ 13: ಕೊರೊನಾ ಭೀತಿ ನಡುವೆಯು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಪೌರಕಾರ್ಮಿಕರು, ಸರ್ಕಾರಿ ನೌಕರರು ಹಾಗೂ ಪೊಲೀಸ್ ಸಿಬ್ಬಂದಿಗೆ ವಿಶೇಷ ಭತ್ಯ ನೀಡಬೇಕೆಂದು ಸರ್ಕಾರವನ್ನು ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಇಂದು, ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ವಾಟಾಳ್ ನಾಗರಾಜ್ ಜಿಲ್ಲೆಯಲ್ಲಿ ಕೊರೊನಾ ವಿಚಾರವಾಗಿ ಕೈಗೊಂಡಿರುವ ಕ್ರಮ ಹಾಗೂ ಕೊರೊನಾ ಸ್ಥಿತಿಗತಿಯ ಬಗ್ಗೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಜೊತೆಗೆ ಚರ್ಚೆ ನಡೆಸಿ ನಂತರ ಮಾಧ್ಯಮಗಳೂಂದಿಗೆ ಮಾತನಾಡಿದರು.
ವೈದ್ಯರಿಗೆ ಹಾಗೂ ನರ್ಸ್ ಗಳಿಗೆ ಸರ್ಕಾರ ರಕ್ಷಣೆ ನೀಡಲು ಎಎಪಿ ಆಗ್ರಹ
ರಾಜ್ಯ ಸರ್ಕಾರ ಸಂಸದರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸಮಿತಿಯಲ್ಲಿ ಸ್ಥಳೀಯ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಸಮಿತಿಯ ಸದಸ್ಯರಾಗಿ ನೇಮಿಸಿ ಎಲ್ಲರಿಗೂ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಸರ್ಕಾರವನ್ನು ವಾಟಳ್ ನಾಗರಾಜ್ ಒತ್ತಾಯಿಸಿದರು.
ಕೊರೊನಾ ತಡೆಕಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಇಂದು ರಾಮನಗರ ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ಮುಂದೆ ಕೋಲಾರ, ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ. ರಾಮನಗರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿಯಿರುವುದಕ್ಕೆ ಯಾವುದೇ ವಿಶೇಷತೆಯಿಲ್ಲ. ನಾನು ಇಲ್ಲಿ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ. ಆ ರೀತಿಯ ಯಾವ ಯೋಚನೆಯೂ ಇಲ್ಲ ಎಂದು ತಿಳಿಸಿದರು.