ಕೊರೊನಾ ತಡೆಯಲು ರಾಮನಗರದ ಎರಡು ಗ್ರಾಮಗಳ ರಸ್ತೆ ಮುಚ್ಚಿದ ಗ್ರಾಮಸ್ಥರು
ರಾಮನಗರ, ಮಾರ್ಚ್ 26: ಕೊರೊನಾ ಮಹಾಮಾರಿ ತಡೆಗಟ್ಟಲು ಪ್ರಧಾನಿ ಮೋದಿ ಅವರು ದೇಶವ್ಯಾಪಿ 21 ದಿನಗಳ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ಗ್ರಾಮೀಣ ಭಾಗದಲ್ಲೂ ಮೋದಿ ಕರೆಗೆ ಬೆಂಬಲವಾಗಿ ಗ್ರಾಮದ ಸಂಪರ್ಕ ರಸ್ತೆಗಳನ್ನು ಮುಚ್ಚಿ ಹೊರಗಿನ ಜನ ಹಳ್ಳಿ ಪ್ರವೇಶಿಸುವುದನ್ನು ಬಂದ್ ಮಾಡಿದ್ದಾರೆ.
ಜಿಲ್ಲೆಯ ಕನಕಪುರ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ಜನರು ಸಭೆ ಸೇರಿ ಗ್ರಾಮಕ್ಕೆ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಕ್ಕೆ ಯಾರೂ ಬರಬಾರದು, ಗ್ರಾಮದಿಂದ ಯಾರು ಹೊರಗಡೆ ಹೋಗಬಾರದು ಎಂದು ನಿರ್ಧಾರ ಕೈಗೊಂಡು ಗ್ರಾಮವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಸಿಮೆಂಟ್ ಇಟ್ಟಿಗೆಗಳಿಂದ ಗೋಡೆ ನಿರ್ಮಾಣ ಮಾಡಿ ಕೊರೊನಾ ವೈರಸ್ ವಿರುದ್ಧ ಹೊರಾಟಕ್ಕೆ ಜೈ ಎಂದಿದ್ದಾರೆ.
ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಾದಿಗೊಂಡನಹಳ್ಳಿ ಗ್ರಾಮದಲ್ಲೂ ಪ್ರವೇಶದ್ವಾರದಲ್ಲಿ ನೋ ಎಂಟ್ರಿ ಬೋರ್ಡ್ ನೇತುಹಾಕಿ, ಗ್ರಾಮ ಪ್ರವೇಶಿಸುವ ರಸ್ತೆಗೆ ಮುಳ್ಳನ್ನು ಹಾಕಿ ಪ್ರವೇಶ ದ್ವಾರವನ್ನ ಮುಚ್ವಿದ್ದಾರೆ. ಜನರು ಬೇರೆ ಕಡೆಯಿಂದ ಗ್ರಾಮಕ್ಕೆ ಬರುವುದನ್ನು ಹಾಗೂ ಗ್ರಾಮಸ್ಥರು ಕೂಡ ಹೊರಹೋಗುವುದನ್ನು ನಿರ್ಬಂಧಿಸಲಾಗಿದೆ.