ಮೇಕೆದಾಟಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ಇಬ್ಬರು ಟೆಕ್ಕಿಗಳು ನೀರುಪಾಲು
ರಾಮನಗರ, ಜುಲೈ.16: ಕನಕಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮೇಕೆದಾಟಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ಇಬ್ಬರು ಇಂಜಿನಿಯರ್ ಗಳು ನೀರುಪಾಲಾದ ಘಟನೆ ಭಾನುವಾರ ನಡೆದಿದೆ.
ಭಾನುವಾರ ನಾಲ್ವರು ಸ್ನೇಹಿತರು ಪ್ರವಾಸಕ್ಕೆಂದು ಮೇಕೆದಾಟಿಗೆ ತೆರಳಿದ್ದರು. ಮೇಕೆದಾಟಿನಲ್ಲಿನ ಬಂಡೆಯ ಮೇಲೆ ನಿಂತು ಕಾವೇರಿ ನೀರು ಹರಿಯುವುದರ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಕಾಲುಜಾರಿ ಇಬ್ಬರು ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಸೆಲ್ಫಿ, FB ಲೈವ್, ಆತ್ಮಹತ್ಯೆ ಮತ್ತು ಮಾನವೀಯತೆಯ ಕ್ರೂರ ಅಣಕ!
ಭವಾನಿ ಶಂಕರ್(29), ಷಮೀರ್ ರೆಹಮಾನ್ (29) ಮೃತ ದುರ್ದೈವಿಗಳಾಗಿದ್ದು, ಇಬ್ಬರು ಸಹ ಬೀದರ್ ಜಿಲ್ಲೆಯ ಮೂಲದವರು. ಬೆಂಗಳೂರಿನ ಸೋಲದೇವನಹಳ್ಳಿಯ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಗಳಾಗಿ ಕೆಲಸ ನಿರ್ವಹಿಸುತ್ತಿದ್ದರು.
ಕಾವೇರಿ ಕಣಿವೆಯ ಎಲ್ಲ ಡ್ಯಾಂಗಳು ಭರ್ತಿಯಾಗಿದ್ದು, ನೀರಿನ ಹರಿವು ಹೆಚ್ಚಿರುವ ಕಾರಣ ಮೃತ ದೇಹಗಳು ತಮಿಳುನಾಡಿನ ಗಡಿಭಾಗಕ್ಕೆ ಕೊಚ್ಚಿ ಹೋಗಿರಬಹುದೆಂದು ಅಂದಾಜು ಮಾಡಲಾಗಿದೆ.
ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಶವ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸೆಲ್ಫೀ ಓಕೆ, ಬೆರಳು ತೋರೋದೇಕೆ:ಸುರಕ್ಷತಾ ಟಿಪ್ಸ್ ಕೊಟ್ಟ ಐಪಿಎಸ್ ರೂಪಾ
ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಲಿವೆ. ಈ ಹಿಂದೆ ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಪ್ರವಾಸಿಗನನ್ನು ರಕ್ಷಿಸಿದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ 'ಓಂ ಬೀಚ್'ನಲ್ಲಿ ನಡೆದಿತ್ತು.
ರಾಣಿಬೆನ್ನೂರು ಮೂಲದ ಬಸವರಾಜ್ ಎಂ. ಎಂಬವವರೇ ರಕ್ಷಣೆಗೊಳಗಾದ ವ್ಯಕ್ತಿ. 5 ಜನರ ತಂಡ ಪ್ರವಾಸಕ್ಕೆಂದು ಗೋಕರ್ಣದ ಓಂ ಬೀಚ್ ಗೆ ಆಗಮಿಸಿದ್ದರು. ಈ ವೇಳೆ ಸಮುದ್ರದ ಬಳಿ ಇದ್ದ ಬಂಡೆಯ ಮೇಲೆ ಸೆಲ್ಫಿ ತೆಗೆಯಲು ಹೋಗಿ ಕಾಲುಜಾರಿ ಬಸವರಾಜ್ ಸಮುದ್ರಪಾಲಾಗಿದ್ದರು.
ಬಸವರಾಜ್ ಸಮುದ್ರಕ್ಕೆ ಬೀಳುತ್ತಿದ್ದನ್ನು ಸ್ಥಳದಲ್ಲಿದ್ದ ದ ಲೈಫ್ ಗಾರ್ಡ್ ಗಳು ಗಮನಿಸಿದ್ದಾರೆ. ಕೂಡಲೇ ಸಮುದ್ರಕ್ಕೆ ಇಳಿದ ಲೈಫ್ ಗಾರ್ಡ್ ಗಳಾದ ಪಾಂಡುರಂಗ ಹಾಗೂ ಪ್ರವೀಣ್ ಇಬ್ಬರೂ ಬಸವರಾಜ್ ಅವರನ್ನು ರಕ್ಷಣೆ ಮಾಡಿದ್ದಾರೆ.