ಮಾಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ; ಇಬ್ಬರ ಸಾವು
ರಾಮನಗರ, ನವೆಂಬರ್ 21: ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಜಿಲ್ಲೆಯ ಮಾಗಡಿಯಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಇಬ್ಬರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ನವೆಂಬರ್ 17ರಂದು ಮಾಗಡಿಯ ರಾಜೀವ್ ಗಾಂಧಿನಗರದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ಅಡುಗೆ ಮಾಡಲು ಹೋಗಿ ಗ್ಯಾಸ್ ಆನ್ ಮಾಡಿ ಕೆಲವು ಸೆಕೆಂಡ್ ಬಿಟ್ಟು ಬೆಂಕಿಪೊಟ್ಟಣ ಹಚ್ಚಿದಾಗ ಅಲ್ಲೇ ಸಮೀಪದಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಕಿಶೋರ್ (14), ಚಂದ್ರು (14), ದರ್ಶನ್ (17) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು.
Recommended Video
ಮಾಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಮೂವರ ಸ್ಥಿತಿ ಗಂಭೀರ
ಸ್ಫೋಟದಿಂದ ಮನೆಯ ಗೋಡೆ, ಶೀಟ್ ಸಂಪೂರ್ಣ ಜಖಂಗೊಂಡಿದ್ದು ಮನೆಯಲ್ಲಿದ್ದ ಫ್ರಿಜ್, ಫ್ಯಾನ್, ಪಾತ್ರೆ ಸಾಮಗ್ರಿಗಳೆಲ್ಲಾ ಸುಟ್ಟು ಕರಕಲಾಗಿತ್ತು. ಸ್ಥಳೀಯರು ಈ ಮೂವರನ್ನು ತಕ್ಷಣವೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂವರ ಸ್ಥಿತಿಯೂ ಚಿಂತಾಜನಕವಾಗಿರುವುದಾಗಿ ವೈದ್ಯರು ತಿಳಿಸಿದ್ದರು. ಚಿಕಿತ್ಸೆ ಫಲಿಸದೇ ಶುಕ್ರವಾರ ರಾತ್ರಿ ಕಿಶೋರ್(14) ಹಾಗೂ ಚಂದ್ರು (14) ಮೃತಪಟ್ಟಿದ್ದಾರೆ.