ರಾಜಕೀಯ ತಿರುವು ಪಡೆದ ರಾಮನಗರ ಬಂದ್
ರಾಮನಗರ, ಫೆಬ್ರವರಿ 20: ರಾಮನಗರ ತಾಲ್ಲೂಕು ಆಡಳಿತದ ನಿಷೇಧಾಜ್ಞೆ ನಡುವೆಯೂ ರೇಷ್ಮೆ ನಗರಿ ಇಂದು ಸಂಪೂರ್ಣ ಸ್ತಬ್ಧವಾಗಿತ್ತು. ರಾಮನಗರ ಬಂದ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ನಗರ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ ಮುಗ್ಗಟ್ಟುಗಳು ತೆರೆಯದೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದವು.
ರಾಮನಗರ ನಗರಸಭೆ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ರೇಷ್ಮೆ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಇವತ್ತು ಜನ ಜಾಗೃತಿ ವೇದಿಕೆ ವತಿಯಿಂದ ಕರೆ ನೀಡಿದ್ದ ರಾಮನಗರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮುಂಜಾನೆಯಿಂದಲೇ ವರ್ತಕರು ಅಂಗಡಿ-ಮುಗ್ಗಟ್ಟು ಮುಚ್ಚಿ ಬಂದ್ ಗೆ ಬೆಂಬಲ ನೀಡಿದರು.
ರಾಮನಗರ; ಬಂದ್ ಕರೆ, ಎರಡು ದಿನ ಸೆಕ್ಷನ್ 144 ಜಾರಿ
ಹಾಲಿನ ಬೂತ್ ಹಾಗೂ ಮೆಡಿಕಲ್ ಶಾಪ್ ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ನಗರದ ಎಪಿಎಂಸಿ ಮಾರುಕಟ್ಟೆ ಎಂದಿನಂತೆ ಕಾರ್ಯ ನಿರ್ವಹಿಸಿದರೆ ರೇಷ್ಮೆ ಮಾರುಕಟ್ಟೆ ಯಾವುದೇ ವಹಿವಾಟು ಇಲ್ಲದೆ ಬಂದ್ ಆಗಿತ್ತು.
ಬಂದ್ ಹಿನ್ನೆಲೆಯಲ್ಲಿ ರಾಮನಗರ ತಹಶೀಲ್ದಾರ ಅವರು, ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದರು. ಆದರೆ ಈ ಸೆಕ್ಷನ್ ಕೇವಲ ನೆಪ ಮಾತ್ರಕ್ಕಷ್ಟೆ ಜಾರಿಯಾಗಿತ್ತು. ನಿಷೇಧಾಜ್ಞೆಯನ್ನು ಧಿಕ್ಕರಿಸಿ ಜನರ ಗುಂಪು ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮೆರವಣಿಗೆ ಕೂಡ ನಡೆಸಿದರು.
ಮೆರವಣಿಗೆ ವೇಳೆ ಅಧಿಕಾರಿಗಳು ಹಾಗೂ ಪೊಲೀಸರು ಮೂಖ ಪ್ರೇಕ್ಷಕರಾಗಿದ್ದರು. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇಂದಿನ ಬಂದ್ ರಾಜಕೀಯ ಪ್ರೇರಿತವಾಗಿತ್ತು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮುಸ್ಲಿಂ ಮುಖಂಡರು ಆರೋಪ ಮಾಡಿದ್ದರು. ಕುಮಾರಸ್ವಾಮಿಯವರ ರಾಜಕೀಯ ಜಿದ್ದಿಗೆ ರೇಷ್ಮೆ ಮಾರುಕಟ್ಟೆಯನ್ನು ಸ್ಥಳಾಂತರ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದರು.
ಒಟ್ಟಾರೆ ನಗರಸಭೆ ವಿಚಾರ ಹಾಗೂ ರೇಷ್ಮೆ ಮಾರುಕಟ್ಟೆ ವಿಷಯವನ್ನು ಇಟ್ಟುಕೊಂಡು ಇವತ್ತು ರಾಮನಗರ ಸಂಪೂರ್ಣ ಬಂದ್ ಆಗಿತ್ತು. ಆದರೆ ಈ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.