ಭೀಕರ ಟ್ರ್ಯಾಕ್ಟರ್ ಅಪಘಾತ: ಸ್ಥಳದಲ್ಲೇ ಆರು ಜನರ ಸಾವು
ರಾಮನಗರ, ಡಿಸೆಂಬರ್ 21: ತಮಿಳುನಾಡಿನಲ್ಲಿ ಸಂಭವಿಸಿದ ಭೀಕರ ಟ್ರ್ಯಾಕ್ಟರ್ ಅಪಘಾತದಲ್ಲಿ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ 6 ಜನರು ಮೃತಪಟ್ಟಿದ್ದು, 8 ಜನರ ಸ್ಥಿತಿ ಗಂಭೀರವಾಗಿದೆ.
ಕನಕಪುರ ತಾಲೂಕಿನ ಕೆರಳಾಳುಸಂದ್ರದ 6 ಗ್ರಾಮಸ್ಥರು ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿರುವ 8 ಜನ ತಮಿಳುನಾಡಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೆರಳಾಳುಸಂದ್ರ ಗ್ರಾಮದ 15 ಮಂದಿ ಟ್ರ್ಯಾಕ್ಟರ್ ಮೂಲಕ ತಮಿಳುನಾಡಿನ ದಬ್ಬಾಗುಳೇಶ್ವರ (ದಬ್ಬಗುಳಿಯ ಬಸವೇಶ್ವರ) ದೇವಾಲಯಕ್ಕೆ ತೆರಳಿದ್ದರು.
ಚುನಾವಣೆ; ಬಿಜೆಪಿ ಬೆಂಬಲಿತ ಅಭ್ಯರ್ಥಿ ತರಾಟೆ ವಿಡಿಯೋ ವೈರಲ್
ಈ ವೇಳೆ ಕನಕಪುರದ ತಮಿಳುನಾಡು ಗಡಿ ಭಾಗದಲ್ಲಿ ಟ್ರ್ಯಾಕ್ಟರ್ ನ ಬ್ರೇಕ್ ಕಟ್ ಆಗಿದ್ದು, ಎಕ್ಸಲೀಟರ್ ವೈರ್ ಸಹ ತುಂಡಾಗಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರ್ಯಾಕ್ಟರ್ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿದ್ದು, ಸ್ಥಳದಲ್ಲೇ ಆರು ಮಂದಿ ಮೃತರಾಗಿದ್ದು, ಎಂಟು ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಗಾಯಳುಗಳಿಗೆ ತಮಿಳುನಾಡಿನ ಅನ್ನಚೆಟ್ಟಿ ಸರ್ಕಾರಿ ಅಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದ್ದು, ಮೃತರಲ್ಲಿ ಐದು ಮಂದಿ ಮಹಿಳೆಯರಿದ್ದಾರೆ. ಪುಟ್ಟಲಿಂಗಮ್ಮ, ಮುಳ್ಳಮ್ಮ, ಗೌರಮ್ಮ, ಒಸಬಮ್ಮ ಹಾಗೂ ಓರ್ವ ಯುವತಿ (ಹೆಸರು ಗೊತ್ತಿಲ್ಲ). ನಾಲ್ವರು ಐವತ್ತು ವರ್ಷ ಮೇಲ್ಪಟ್ಟ ಮಹಿಳೆಯರು, ಓರ್ವ ಯುವತಿ 25 ವರ್ಷದವರಾಗಿದ್ದಾರೆ.