ಟೊಯೋಟಾ ಕಂಪನಿ, ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ ಕಾರ್ಮಿಕ ಸಂಘಟನೆ
ರಾಮನಗರ, ಜುಲೈ 7: ಬಿಡದಿಯ ಕಾರು ತಯಾರಿಕಾ ಘಟಕ ಟೊಯೋಟಾ ಕಂಪನಿಯ ನೌಕರ ಕೊರೊನಾ ಸೋಂಕಿಗೆ ಬಲಿಯಾದ ಬೆನ್ನಲ್ಲೇ ಕಾರ್ಮಿಕ ಸಂಘಟನೆಯ ಸದಸ್ಯರು ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಜೂನ್ 16ರಂದು ಟೊಯೋಟಾ ಕಂಪನಿಯಲ್ಲಿ ಮೊದಲ ಕೊರೋನಾ ಸೋಂಕಿತ ಪ್ರಕರಣ ಪತ್ತೆಯಾಗಿತ್ತು. ನಂತರ ಜೂನ್ 18ರಂದೇ ಕಾರ್ಖಾನೆ ಕೆಲಸ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಟಿಕೆಎಂ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸರ್ಕಾರ, ಜಿಲ್ಲಾಡಳಿತ ಮತ್ತು ಕಂಪನಿ ಮಾನ್ಯತೆ ನೀಡಿಲ್ಲದೇ ಇರುವುದೇ ಇಂದು ಕಂಪನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಟಿಕೆಎಂ ಕಾರ್ಮಿಕ ಸಂಘಟನೆ ಆರೋಪಿಸಿದೆ.
ರಾಮನಗರ: ಕೊರೊನಾ ವೈರಸ್ ಗೆ ಟೊಯೊಟಾ ಕಾರ್ಮಿಕ ಬಲಿ, ಕಂಪನಿಯಲ್ಲಿ ಹೆಚ್ಚಿದ ಭೀತಿ
ಸರ್ಕಾರ, ಜಿಲ್ಲಾಡಳಿತ ಮತ್ತು ಟಿಕೆಎಂ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಟೊಯೋಟಾ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರು ಸೇರಿದಂತೆ ಸುಮಾರು 8000 ಮಂದಿ ಕಾರ್ಮಿಕರು ಹಾಗೂ ಅವರ ಕುಟುಂಬ ಕೊರೊನಾ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.
ವಿಶೇಷ ಪ್ಯಾಕೇಜ್ ಗೆ ಟಿಕೆಎಂ ಕಾರ್ಮಿಕ ಸಂಘಟನೆ ಒತ್ತಾಯ: ಟೊಯೋಟಾ ಕಾರು ತಯಾರಿಕಾ ಕಾರ್ಖಾನೆಯಲ್ಲಿ ಕೊರೊನಾ ಭೀತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ಸೇರಿದಂತೆ ಸುಮಾರು 8000 ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ವಿಶೇಷ ಕೋವಿಡ್ ಚಿಕಿತ್ಸಾ ಪ್ಯಾಕೇಜ್ ಘೋಷಣೆ ಮಾಡಿ, ಕೊರೊನಾ ಸೋಂಕಿಗೆ ತುತ್ತಾದ ಕಾರ್ಮಿಕರ ಸಂಪೂರ್ಣ ಚಿಕಿತ್ಸೆಯ ವೆಚ್ಚ ಭರಿಸುವ ಮೂಲಕ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ತಮಿಳುನಾಡು ಸೇರಿದಂತೆ ಹೊರ ರಾಜ್ಯದ ಖಾಸಗಿ ಕಂಪನಿಗಳು ತಮ್ಮ ಕಂಪನಿಯ ಶಂಕಿತರ ಚಿಕಿತ್ಸೆಗಾಗಿ ಕ್ವಾರಂಟೈನ್ ಕೇಂದ್ರಗಳನ್ನು ಪ್ರಾರಂಭಿಸಿ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಿವೆ. ಅಂತೆಯೇ ಟೊಯೋಟಾ ಕಂಪನಿ ಕೂಡ ಕೊರೊನಾ ಶಂಕಿತರ ಚಿಕಿತ್ಸೆಗಾಗಿ ಕ್ವಾರಂಟೈನ್ ಕೇಂದ್ರ ತೆರೆಯಬೇಕೆಂದು ಟಿಕೆಎಂ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.