ಮಾಜಿ ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಟೊಯೊಟಾ ಕಾರ್ಮಿಕರ ಪಾದಯಾತ್ರೆ
ರಾಮನಗರ, ಜನವರಿ 28: ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕರಿಂದ ಪಾದಯಾತ್ರೆ ಆರಂಭವಾಗಿದೆ.
ರಾಮನಗರ ಜಿಲ್ಲೆ ಬಿಡದಿ ಪಟ್ಟಣದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಪಾದಯಾತ್ರೆ ಹೊರಟಿದ್ದಾರೆ. ಮೈಸೂರು, ಮಂಡ್ಯ ಜಿಲ್ಲೆಯಿಂದಲೂ ಕಾರ್ಮಿಕರು ಆಗಮಿಸಿದ್ದಾರೆ.
ಟೊಯೊಟಾ ಕಾರ್ಮಿಕ ಹೋರಾಟ ಬೆಂಬಲಿಸಿ ಮಾಜಿ ಶಾಸಕ ಬಾಲಕೃಷ್ಣರಿಂದ ಪಾದಯಾತ್ರೆ
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಟೊಯೋಟಾ ಕಾರ್ಮಿಕರ ದಂಡು ಪಾದಯಾತ್ರೆ ಪ್ರಾರಂಭಿಸಿದ್ದು, ಕಾರ್ಮಿಕರ ಹೋರಾಟಕ್ಕೆ ಕುಟುಂಬಸ್ಥರು ಸಹ ಸಾಥ್ ನೀಡಿದ್ದಾರೆ. ಪಾದಯಾತ್ರೆಯಲ್ಲಿ ಕಾರ್ಮಿಕರ ಜೊತೆಗೆ ಮಹಿಳೆಯರೂ ಹೆಜ್ಜೆ ಹಾಕಿದ್ದಾರೆ.
ಕಾರ್ಮಿಕರ ಕುಟುಂಬದ ಪುಟ್ಟ ಮಕ್ಕಳು ಸಹ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ಕಾರ್ಮಿಕರ ಹೋರಾಟಕ್ಕೆ ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆ ಹೊರಟಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಜಮಾಯಿಸಿದ್ದಾರೆ.
ಹಲವು ಬಾರಿ ಟೊಯೊಟಾ ಆಡಳಿತ ಮಂಡಳಿ ಜತೆಗೆ ಮಾತುಕತೆ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಮ್ಮ ಪಾದಯಾತ್ರೆ ಹೋರಾಟ ಅನಿವಾರ್ಯವಾಗಿದೆ. ಪಾದಯಾತ್ರೆಯಲ್ಲಿ ಎಲ್ಲಾ ಪಕ್ಷದ ನಾಯಕರು ಸೇರಿ ಪಕ್ಷಾತೀತವಾಗಿ ಗುರುವಾರದಂದು ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಶಾಸಕ ಬಾಲಕೃಷ್ಣ ಘೋಷಣೆ ಮಾಡಿದ್ದರು.