ಲಾಕ್ಔಟ್ ಹಿಂಪಡೆದ ಟೊಯೊಟಾ ಕಿರ್ಲೋಸ್ಕರ್: 66 ಕಾರ್ಮಿಕರ ವಿಚಾರಣೆ ಕಾಯ್ದಿರಿಸಿದ ಕಂಪನಿ
ರಾಮನಗರ, ಜನವರಿ 12: ಏಷ್ಯಾದ ಅತೀ ದೊಡ್ಡ ಕಾರು ತಯಾರಿಕಾ ಟೊಯೊಟಾ ಕಾರ್ಖಾನೆಯ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯ ನಡುವಿನ ಬಿಕ್ಕಟ್ಟು ತಾತ್ಕಾಲಿಕವಾಗಿ ಇತ್ಯರ್ಥವಾಗುವ ಲಕ್ಷಣ ಗೋಚರಿಸಿದ್ದು, ಇಂದಿನಿಂದ ಲಾಕ್ಔಟ್ ತೆರೆವುಗೊಳಿಸಲು ಕಂಪನಿ ನಿರ್ಧಾರ ಮಾಡಿ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಸರ್ಕಾರ, ಕಾರ್ಮಿಕರು ಮತ್ತು ಕಂಪನಿಯ ಆಡಳಿತ ಮಂಡಳಿ ನಡುವೆ ನಡೆದ ಹಲವು ಸಂಧಾನ ಸಭೆಗಳು ವಿಫಲಗೊಂಡಿದ್ದವು. ಕಳೆದ 65 ದಿನಗಳಿಂದ ನಿರಂತರವಾಗಿ ಕಾರ್ಮಿಕರು ಹೋರಾಟ ನಡೆಸಿದ ಹಿನ್ನಲೆಯಲ್ಲಿ ಇಂದಿನಿಂದ ಎರಡನೇ ಪಾಳಿಯಲ್ಲಿ ಕಾರ್ಖಾನೆ ಉತ್ಪಾದನೆ ಪ್ರಾರಂಭಿಸುತ್ತಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಲಾಕ್ಔಟ್ ತೆರವುಗೊಳಿಸುವ ನಿರ್ಧಾರ ಮಾಡಿದೆ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವಿರುದ್ಧ ನಡೆಸುತ್ತಿರುವ ಅಕ್ರಮ ಮುಷ್ಕರದ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ 23 ರಂದು ಎರಡನೇ ಬಾರಿಗೆ ಕಂಪನಿ ಲಾಕ್ಔಟ್ ಘೋಷಣೆ ಮಾಡಿತ್ತು. ಇದರ ನಡುವೆಯೂ ಕಂಪನಿಯು 1200 ಕಾರ್ಮಿಕರ ಸಹಕಾರದೊಂದಿಗೆ ಉತ್ಪಾದನೆಯನ್ನು ಪುನರಾರಂಭಿಸಿತ್ತು. ಕಾರ್ಮಿಕರು ತೋರಿದ ಉತ್ತಮ ನಡವಳಿಕೆ, ಕೆಲಸದಲ್ಲಿನ ಕಾರ್ಮಿಕರ ಶಿಸ್ತುನ್ನು ಕಂಪನಿ ಗಮನದಲ್ಲಿಟ್ಟುಕೊಂಡು ಲಾಕ್ಔಟ್ ತೆರವುಗೊಳಿಸುವ ನಿರ್ಧಾರ ಮಾಡಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟೊಯೊಟಾ ಕಂಪನಿ ವಿರುದ್ಧ ಕಾರ್ಮಿಕರ ಅಹೋರಾತ್ರಿ ಧರಣಿ
ಯಾವುದೇ ರಾಜೀ ಮಾಡಿಕೊಳ್ಳದೆ ಲಾಕ್-ಔಟ್ ಹಿಂತೆಗೆತ
ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯ ನಂತರದಲ್ಲಿ ಟಿಕೆಎಂ ನಿರ್ವಹಣೆ, ಕಂಪನಿಯ ಒಳಗೆ ಮತ್ತು ಹೊರಗೆ ಸುರಕ್ಷತಾ ಪರಿಸ್ಥಿತಿಯಲ್ಲಿ ಕ್ರಮೇಣ ಸುಧಾರಣೆಯನ್ನು ಗಮನಿಸಿದ ಟಿಕೆಎಂ ಮ್ಯಾನೇಜ್ಮೆಂಟ್ ಯಾವುದೇ ರಾಜೀ ಮಾಡಿಕೊಳ್ಳದೆ ಲಾಕ್-ಔಟ್ ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
66 ನೌಕರರ ವಿಚಾರಣೆ ಮುಂದುವರೆಯುವುದು
ಜನವರಿ 12ರಿಂದ ಬಿಡದಿಯ ಎರಡೂ ಸ್ಥಾವರಗಳ ಬೀಗ ಮುದ್ರೆ ತೆರವುಗೊಳಿಸಲಿದ್ದು, ನೌಕರರು ಉತ್ತಮ ನಡವಳಿಕೆ ಮತ್ತು ಕೆಲಸಕ್ಕೆ ವರದಿ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಕೆಲಸಕ್ಕೆ ಹಾಜರಾಗುವ ಷರತ್ತುನ್ನು ಕಂಪನಿ ವಿಧಿಸಿದೆ. ಗಂಭೀರ ದುಷ್ಕೃತ್ಯಗಳಿಗಾಗಿ ಅಮಾನತ್ತುಗೊಂಡಿರುವ 66 ನೌಕರರ ವಿಚಾರಣೆ ಮುಂದುವರೆಯುವುದು ಎಂದು ಕಂಪನಿ ಹೇಳಿದೆ.
ಕೆಲಸಕ್ಕೆ ಮರಳುವ ನಿಷ್ಠಾವಂತ ಉದ್ಯೋಗಿಗಳ ರಕ್ಷಣೆ
ಕಂಪನಿಯ ಆವರಣದ ಹೊರಗೆ ಮತ್ತು ಒಳಗೆ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಭರವಸೆ ನೀಡುವಲ್ಲಿ ಅಧಿಕಾರಿಗಳು ಬೆಂಬಲವನ್ನು ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಲಸಕ್ಕೆ ಮರಳುವ ನಿಷ್ಠಾವಂತ ಉದ್ಯೋಗಿಗಳ ರಕ್ಷಣೆ ಒದಗಿಸುವ ಭರವಸೆಯನ್ನು ಕಂಪನಿ ಪ್ರಕಟಣೆಯ ಮೂಲಕ ಘೋಷಣೆ ಮಾಡಿದೆ.