ಸರ್ಕಾರದ ಮಧ್ಯಪ್ರವೇಶಕ್ಕೆ ಬಿಡದಿ ಟೊಯೊಟಾ ಕಾರ್ಮಿಕರ ಒತ್ತಾಯ
ರಾಮನಗರ, ನವೆಂಬರ್ 26: ಬಿಡದಿಯಲ್ಲಿರುವ ಟೊಯೊಟಾ ಕಾರು ತಯಾರಿಕಾ ಘಟಕದ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಮುಂದುವರೆದಿದ್ದು, ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಮಧ್ಯ ಪ್ರವೇಶಿಸಿ ಟೊಯೊಟೊ ನೌಕರರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಕಾರ್ಖಾನೆ ನೌಕರ ಸಂಘದ ಅಧ್ಯಕ್ಷ ಚಕ್ಕೆರೆ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ಕೆಲಸ ಮಾಡಲು ನಾವು ಸಿದ್ಧರಿದ್ದರೂ ಆಡಳಿತ ಮಂಡಳಿ ಒಂದಲ್ಲೊಂದು ನೆಪವೊಡ್ಡಿ ನಮ್ಮನ್ನು ಬಾಗಿಲಲ್ಲೇ ತಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಧರಣಿ ಕೈಬಿಡದ ಕಾರ್ಮಿಕರು, ಮತ್ತೆ ಲಾಕೌಟ್ ಘೋಷಿಸಿದ ಬಿಡದಿ ಟೊಯೊಟಾ
ಕಳೆದ 16 ದಿನಗಳಿಂದ 40 ಕಾರ್ಮಿಕರ ಅಮಾನತು ವಿರೋಧಿಸಿ ಕಾರ್ಖಾನೆ ಎದುರು ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ. ಆಡಳಿತ ಮಂಡಳಿಯ ಬಿಗಿ ನಿಲುವಿನಿಂದಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಮತ್ತೊಮ್ಮೆ ಲಾಕೌಟ್ ಆಗಿದೆ. ಇದರಿಂದಾಗಿ 3 ಸಾವಿರಕ್ಕೂ ಹೆಚ್ಚಿನ ಕಾರ್ಮಿಕರ ಬದುಕು ಡೋಲಾಯಮಾನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಖಾನೆಯಲ್ಲಿ ಉತ್ಪಾದನಾ ಚಟುವಟಿಕೆಗಳು ನಡೆಯಲು ಕನಿಷ್ಠ ನೌಕರರು ಬೇಕು. ಕಾರ್ಮಿಕರ ಕೊರತೆಯಿಂದಾಗಿ ಕಾರ್ಖಾನೆಯ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳುತ್ತಾರೆ. ಆದರೆ, ಲಾಕ್ ಔಟ್ ಮಾಡುವ ಮೂಲಕ ಕಾರ್ಖಾನೆ ಆಡಳಿತ ಮಂಡಳಿಯು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕಾರ್ಮಿಕರು ಗಂಭೀರ ಆರೋಪ ಮಾಡಿದರು.
ಕಾರ್ಖಾನೆ ಸ್ಥಾಪನೆಯಾಗಿ 21 ವರ್ಷವಾಗಿದೆ. ಪ್ರಾರಂಭದ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಟಿಕೆಎಂನಲ್ಲಿ ಕಾರ್ಮಿಕರಿಗೆ ಕಿರುಕುಳ ಪ್ರಾರಂಭವಾಗಿದ್ದು, ಲಾಕ್ ಔಟ್ ವರೆಗೂ ತಲುಪಿರುವುದು ಕಾರ್ಮಿಕ ನೀತಿಗೆ ವಿರುದ್ಧವಾದ ಬಹುದೊಡ್ಡ ಸಾಕ್ಷಿ ಎಂದರು. ಇತ್ತೀಚಿನ ದಿನಗಳಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಉನ್ನತ ಅಧಿಕಾರಿಗಳು ಕಾರ್ಮಿಕರಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಲಭ್ಯವಿರುವ ಮಾನವ ಸಂಪನ್ಮೂಲದಲ್ಲೇ ಹಾಲಿ ಉತ್ಪಾದನೆಗಿಂತ ಇನ್ನೂ ಹೆಚ್ಚಿನ ಉತ್ಪಾದನೆ ಮಾಡಲು ಟಾರ್ಗೆಟ್ ನೀಡಲಾಗುತ್ತಿದೆ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು.
ಶಕ್ತಿ ಇರುವವರೆಗೂ ದುಡಿಸಿಕೊಂಡು, ಮುಂದೆ ವೇತನ ಬಡ್ತಿ ಸೇರಿದಂತೆ ಇನ್ನಿತರೆ ಸವಲತ್ತುಗಳನ್ನು ನೀಡಬೇಕಾಗುತ್ತದೆ ಎಂದು ನವ ಜೀವನ ಯೋಜನೆಯಡಿ 40 ದಾಟಿದ ನೌಕರರಿಗೆ ಸ್ವಯಂ ನಿವೃತ್ತಿ ನೀಡಿ ಮನೆಗೆ ಕಳುಹಿಸಲಾಗುತ್ತಿದೆ. ಇದುವರೆಗೂ ಸುಮಾರು 800 ಕಾರ್ಮಿಕರನ್ನು ಈ ರೀತಿ ಮನೆಗೆ ಕಳುಹಿಸಲಾಗುತ್ತಿದೆ. ಇದನ್ನೆಲ್ಲಾ ಕಾರ್ಮಿಕರ ಯೂನಿಯನ್ ಕೇಳಲು ಹೋದರೆ ಆಡಳಿತ ಮಂಡಳಿ ವಿರೋಧಿಗಳು ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಏನೇ ಆದರೂ, ನಾವು ನೌಕರರು ಮುಕ್ತ ಮನೋಭಾವ ಹೊಂದಿದ್ದು, ಆಡಳಿತ ಮಂಡಳಿ ಸಂಧಾನಕ್ಕೆ ಬರುವುದಾದಲ್ಲಿ ನಾವು ರಾಜಿಗೆ ಸಿದ್ಧ ಎಂದು ಪ್ರಸನ್ನ ಕುಮಾರ್ ಘೋಷಿಸಿದರು. ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಮಧ್ಯ ಪ್ರವೇಶಿಸಿ ಟೊಯೊಟೊ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಒತ್ತಾಯಿಸಿದರು.
Recommended Video