ಟೊಯೊಟಾ ಕಾರ್ಮಿಕರ ವಾಕ್ ಸ್ವಾತಂತ್ರ್ಯ ಹರಣ ಮಾಡುತ್ತಿದೆ; ಕಾರ್ಮಿಕ ಸಂಘಟನೆ ಆರೋಪ
ರಾಮನಗರ, ಜುಲೈ 28: ಸುದ್ದಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದನ್ನು ನೆಪ ಮಾಡಿಕೊಂಡು ಕಾರ್ಮಿಕರನ್ನು ಅಮಾನತು ಮಾಡಿರುವ ಆರೋಪ ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಟೊಯೊಟಾ ಕಾರ್ಖಾನೆ ಮೇಲೆ ಕೇಳಿಬಂದಿದೆ.
Recommended Video
ಟಿಕೆಎಂ ಕಾರ್ಮಿಕ ಸಂಘಟನೆಯ ಕಾರ್ಯಕಾರಿ ಸಮಿತಿಯ ಸದಸ್ಯರೊಬ್ಬರು ಕೆಲದಿನಗಳ ಹಿಂದೆ ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಕೋವಿಡ್-19ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಟೊಯೊಟಾ ಕಂಪನಿ ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಕಂಪನಿ ಕಾರ್ಮಿಕನನ್ನು ಅಮಾನತು ಮಾಡಿರುವುದಾಗಿ ತಿಳಿದುಬಂದಿದೆ.
ಟಿಕೆಎಂ ಕಾರ್ಮಿಕ ಸಂಘಟನೆ ಆರೋಪ
ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಕಾರ್ಮಿಕನನ್ನು ಸೇವೆಯಿಂದ ಅಮಾನತು ಮಾಡುವ ಮೂಲಕ ಟಿಕೆಎಂ ಕಂಪನಿ ಭಾರತೀಯರ ವಾಕ್ ಸ್ವಾತಂತ್ರ್ಯ ಹರಣ ಮಾಡುತ್ತಿದೆ ಎಂದು ಕಾರ್ಮಿಕ ಸಂಘಟನೆ ಆರೋಪಿಸಿದೆ.
ಈಗಾಗಲೇ ಟಿಕೆಎಂ ಕಾರ್ಖಾನೆಯಲ್ಲಿ ಕೋವಿಡ್-19 ಸೋಂಕಿಗೆ ಒಬ್ಬ ಬಲಿಯಾಗಿದ್ದು, ಸುಮಾರು 75 ಮಂದಿಗೆ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಕಾರ್ಮಿಕರಲ್ಲಿ ಮನೆ ಮಾಡಿದೆ. ಕಂಪನಿ ಸರ್ಕಾರದ ಕೋವಿಡ್-19 ಮಾರ್ಗ ಸೂಚಿ ಉಲ್ಲಂಘನೆ ಮಾಡುತ್ತಿದೆ.
ರಾಮನಗರ: ಕೊರೊನಾ ವೈರಸ್ ಗೆ ಟೊಯೊಟಾ ಕಾರ್ಮಿಕ ಬಲಿ, ಕಂಪನಿಯಲ್ಲಿ ಹೆಚ್ಚಿದ ಭೀತಿ
ಕಾರ್ಮಿಕರ ಕೊರೊನಾ ಪರೀಕ್ಷಾ ವರದಿ ಬರುವ ಮೊದಲೇ ಕೆಲಸ ಮಾಡಿಸಿಕೊಳ್ಳುತ್ತಿದೆ ಹಾಗೂ ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿಲ್ಲ. ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ ಎಂದು ಕಾರ್ಮಿಕ ಸಂಘಟನೆ ಅಧ್ಯಕ್ಷ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಟೊಯೊಟಾ ಕಂಪನಿಯ ಸ್ಪಷ್ಟನೆ
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರು ಕಂಪನಿ, ಕಂಪನಿಯ ವಿರುದ್ಧದ ಈ ಆರೋಪಗಳು ಅತ್ಯಂತ ಗಂಭೀರ, ಆಧಾರರಹಿತ ಮತ್ತು ಕಂಪನಿಯ ಪ್ರತಿಷ್ಠೆಗೆ ಹಾನಿಯನ್ನುಂಟು ಮಾಡುತ್ತದೆ. ಕಂಪನಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಒಬ್ಬ ಉದ್ಯೋಗಿಯನ್ನು ಅಮಾನತು ಮಾಡಲಾಗಿದೆ. ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟೊಯೊಟಾ ಉತ್ಪಾದನಾ ಸ್ಥಾವರದಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಕೋವಿಡ್-19 ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುತ್ತಿದೆ. ಘಟಕದಲ್ಲಿ ಉದ್ಯೋಗಿಗಳಿಗೆ ಸುರಕ್ಷಿತ ಮತ್ತು ಆರೋಗ್ಯಯುತ ವಾತಾವರಣವನ್ನು ಸೃಷ್ಟಿಸಲು ಟಿಕೆಎಂ ವಿವಿಧ ಸರ್ಕಾರಿ ಅಧಿಕಾರಿಗಳು, ನೀಡಿದ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ ಎಂದು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
"ಗರಿಷ್ಠ ಪ್ರಮಾಣದ ಸುರಕ್ಷತಾ ಮಾನದಂಡ ಪಾಲಿಸಲಾಗುತ್ತಿದೆ"
ಸ್ಥಾವರವನ್ನು ಪ್ರತಿನಿತ್ಯ ಸೋಂಕು ರಹಿತವನ್ನಾಗಿಸಲಾಗುತ್ತಿದೆ. ಸ್ಕ್ರೀನಿಂಗ್ ಮಾರ್ಗಸೂಚಿಯನ್ನು ಪಾಲಿಸಲಾಗುತ್ತಿದ್ದು, ಉದ್ಯೋಗಿಗಳು ಸ್ಥಾವರ ಪ್ರವೇಶಿಸುವುದಕ್ಕೂ ಮುನ್ನ ಕಡ್ಡಾಯವಾಗಿ ತಾಪಮಾನ ಪರಿಶೀಲನೆ ಮಾಡಲಾಗುತ್ತಿದೆ. ಸೋಂಕಿತ ನೌಕರರು ಕೆಲಸ ಮಾಡಿದ್ದ ಸ್ಥಳದಲ್ಲಿ ಸ್ಯಾನಿಟೈಸ್ ಮಾಡುವ ಮೂಲಕ ಸೋಂಕು ಹರಡುವಿಕೆಗೆಯನ್ನು ತಡೆಯಲಾಗುತ್ತಿದೆ. ಸೋಂಕಿತರು ಪತ್ತೆಯಾದ ಪ್ರತಿಯೊಂದು ಸಂದರ್ಭದಲ್ಲೂ ಸರ್ಕಾರದ ಮಾರ್ಗಸೂಚಿಯಂತೆ ಸಂಪರ್ಕಿತರನ್ನು ಪತ್ತೆಹಚ್ಚಿ ಪ್ರತ್ಯೇಕ ಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗರಿಷ್ಠ ಪ್ರಮಾಣದ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗುತ್ತಿದೆ.
ಟೊಯೋಟಾ ಕಂಪನಿ, ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ ಕಾರ್ಮಿಕ ಸಂಘಟನೆ
ದುರುದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದ ಕಂಪನಿ
ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಇಷ್ಟೆಲ್ಲಾ ಕ್ರಮಗಳನ್ನು ಸಂಸ್ಥೆ ತೆಗೆದುಕೊಂಡಿದ್ದರೂ, ಕೆಲ ಉದ್ಯೋಗಿಗಳು ದುರುದ್ದೇಶದಿಂದ ಸಂಸ್ಥೆಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಂಪನಿ, ಆರೋಪಗಳು ಅತ್ಯಂತ ಗಂಭೀರ, ಆಧಾರರಹಿತವಾಗಿ ಕಂಪನಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದೆ.