ಸಂಸದ ಡಿ.ಕೆ.ಸುರೇಶ್ ಸಲಹೆ ತಿರಸ್ಕರಿಸಿದ ಟೊಯೊಟೊ ಕಂಪನಿ
ರಾಮನಗರ, ಡಿಸೆಂಬರ್ 23: ಬಿಡದಿಯ ಟೊಯೊಟೊ ಕಿರ್ಲೋಸ್ಕರ್ ಕಂಪನಿಯ ಆಡಳಿತ ಮಂಡಳಿಗೆ ಸರ್ಕಾರ ಮತ್ತು ನಾನು ಹಲವು ಬಾರಿ ಸಲಹೆ ನೀಡಿದರೂ, ತಿರಸ್ಕರಿಸಿ ಮೊಂಡುತನ ಮಾಡುತ್ತಿದೆ. ಕಂಪನಿ ತನ್ನ ಖಾಯಂ ನೌಕರರನ್ನು ವಜಾಗೊಳಿಸುವ ಹುನ್ನಾರ ನಡೆಸಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪ ಗಂಭೀರ ಆರೋಪ ಮಾಡಿದರು.
ಟೊಯೊಟೊ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, ಇಂದು ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದ ಟೊಯೊಟೊ ಆಡಳಿತ ಮಂಡಳಿಯೊಂದಿಗಿನ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮಷ್ಕರ; ಮತ್ತೆ ಟೊಯೋಟಾದ 5 ಕಾರ್ಮಿಕರು ಅಮಾನತು
ಟೊಯೊಟೊ ಕಾರ್ಮಿಕರ ಸಮಸ್ಯೆಯ ಹಿನ್ನಲೆಯಲ್ಲಿ ಇಂದು ಕಂಪನಿಯ ಅಡಳಿತ ಮಂಡಳಿಯ ಜೊತೆ ಸಭೆ ನಡೆಸಿದೆ. ಆದರೆ ನಮ್ಮ ಸಲಹೆಯನ್ನು ಕಾರ್ಖಾನೆಯ ಆಡಳಿತ ಮಂಡಳಿ ತಿರಸ್ಕರಿಸಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಸರ್ಕಾರ ಮತ್ತು ಜಿಲ್ಲಾಡಳಿತ ಸಭೆ ನಡೆಸಿದರೂ ಟೊಯೊಟೊ ಆಡಳಿತ ಮಂಡಳಿ ತನ್ನ ಮೊಂಡುತನ ಮುಂದುವೆರೆಸಿದೆ ಎಂದಿದ್ದಾರೆ.
""ತಕ್ಷಣವೇ ಕಾರ್ಮಿಕರು, ಕಾರ್ಮಿಕ ಮುಖಂಡರನ್ನು ಕರೆದು ಸಭೆ ನಡೆಸಿ ಇತ್ಯರ್ಥಪಡಿಸಿಕೊಳ್ಳಿ ಎಂದು ನಾನು ಸ್ಪಷ್ಟವಾಗಿ ತಿಳಿಸಿದ್ದೇನೆ. ಆದರೆ ಕಂಪನಿಯ ಮುಖ್ಯಸ್ಥರು ನನ್ನ ಮನವಿಯನ್ನು ತಿರಸ್ಕರಿಸಿದ್ದಾರೆ. ನಮಗೆ ನಮ್ಮ ಕಾರ್ಮಿಕರ ರಕ್ಷಣೆ ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಇಂದಿನಿಂದ ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದು ಸಂಸದ ಡಿ.ಕೆ.ಸುರೇಶ್ ಘೋಷಿಸಿದರು.
ಟೊಯೊಟೊ ಕಂಪನಿಯ ಕಾರ್ಮಿಕರ ವಿರೋಧಿ ನೀತಿ ಕಾಣುತ್ತಿದೆ. ಪ್ರತಿ ದಿನ ಐದು, ಆರು ಕಾರ್ಮಿಕರನ್ನು ವಜಾ ಮಾಡುತ್ತಾ ಇಂದಿಗೆ 65 ಕಾರ್ಮಿಕರನ್ನು ವಜಾ ಮಾಡುವ ಮೂಲಕ ಕಾರ್ಮಿಕರ ಒಗ್ಗಟ್ಟನ್ನು ಒಡೆದಿದೆ. ಟೊಯೊಟೊ ಕಂಪನಿಯು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.
ಕಳೆದ ಲೋಕಸಭೆ ಅಧಿವೇಶನದಲ್ಲಿ ಕಾರ್ಮಿಕರ ರಕ್ಷಣೆಗೆ ಇದ್ದ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದ ಪರಿಣಾಮ, ಟೊಯೊಟೊ ಕಾರ್ಮಿಕರ ಶೋಷಣೆ ಪ್ರಾರಂಭವಾಗಿದೆ .ಇದು ಮುಂದಿನ ದಿನಗಳಲ್ಲಿ ದೇಶದ ಎಲ್ಲೇಡೆ ಹಬ್ಬುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿವೆ ಎಂದು ಸಂಸದ ಡಿ.ಕೆ.ಸುರೇಶ್ ಆತಂಕ ವ್ಯಕ್ತಪಡಿಸಿದರು.
Recommended Video