ರಾಮನಗರ: ಜುಲೈ 20 ರಿಂದ ಟೊಯೊಟಾ ಕಾರು ತಯಾರಿಕಾ ಕಂಪನಿ ಪುನರಾರಂಭ
ರಾಮನಗರ, ಜುಲೈ 19: ಜುಲೈ 20 ರ ಸೋಮವಾರದಿಂದ ಟೊಯೊಟಾ ಕಾರು ಕಂಪನಿಯು ತನ್ನ ಬಿಡದಿ ಘಟಕದಲ್ಲಿ ಉತ್ಪಾದನೆ ಪ್ರಾರಂಭಿಸುವುದಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Recommended Video
ಜುಲೈ 14 ಮಂಗಳವಾರದ ಮಧ್ಯಾಹ್ನದಿಂದ ಸರ್ಕಾರದ ಪ್ರಾರಂಭಿಕ ಆದೇಶದಂತೆ ಕಂಪನಿಯನ್ನು ಮುಚ್ಚಲಾಗಿತ್ತು. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ಕಾರಣ ನೌಕರರು ತಮ್ಮ ಊರುಗಳಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಸೋಮವಾರದಿಂದ ಉತ್ಪಾದನೆ ಪ್ರಾರಂಭಿಸಲು ನಿರ್ಧರಿಸಿದೆ.
ರಾಮನಗರ: ಕೊರೊನಾ ವೈರಸ್ ಗೆ ಟೊಯೊಟಾ ಕಾರ್ಮಿಕ ಬಲಿ, ಕಂಪನಿಯಲ್ಲಿ ಹೆಚ್ಚಿದ ಭೀತಿ
ಕಂಪನಿಯ ನೌಕರರು ಮತ್ತು ಅವರ ಕುಟುಂಬಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವುದು ಟಿಕೆಎಂನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಕೆಲಸ ಮಾಡುವ ಮೂಲಕ ಟಿಕೆಎಂ ಎಲ್ಲಾ ಸಂಭಾವ್ಯ ತಡೆಗಟ್ಟುವಿಕೆ ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೋವಿಡ್ ಬಿಕ್ಕಟ್ಟನ್ನು ತ್ವರಿತವಾಗಿ ಪರಿಶೀಲನೆ ಮಾಡುವುದನ್ನು ಮುಂದುವರಿಸುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಲಾಕ್ ಡೌನ್ ನಂತರ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುವ ನೌಕರರ ಸಂಖ್ಯೆಯ ಬಗ್ಗೆ ಟಿಕೆಎಂ ಸಾಕಷ್ಟು ಕಾಳಜಿ ವಹಿಸಿದ್ದು, ಪ್ರಸ್ತುತ 40 ರಿಂದ 45% ರಷ್ಟು ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗುತ್ತಿದ್ದು, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಪ್ರತಿನಿತ್ಯ ಎಲ್ಲಾ ಉದ್ಯೋಗಿಗಳು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸ್ವಯಂ ಘೋಷಿಸಕೊಳ್ಳಬೇಕಾಗುತ್ತಿದ್ದು, ಆರೋಗ್ಯದ ಮೇಲೆ ಸಂಸ್ಥೆ ನಿರಂತರ ಕಾಳಜಿ ವಹಿಸಿದೆ ಎಂದು ತಿಳಿಸಿದೆ.
ಅಂತೆಯೇ, ಕೆಲ ಉದ್ಯೋಗಿಗಳಿಗೆ ಕೋವಿಡ್-19 ಸೋಂಕು ತಗುಲಿದ ಸಂದರ್ಭದಲ್ಲಿ, ಸೋಂಕಿತ ಉದ್ಯೋಗಿಗಳೊಂದಿಗೆ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕ ಹೊಂದಿರುವ ನೌಕರರನ್ನು ಪತ್ತೆ ಹಚ್ಚುವುದರ ಮೂಲಕ ಕ್ವಾರಂಟೈನ್ ಗೆ ಒಳಪಡಿಸಿ ಸಂಸ್ಥೆ ಸಾಕಷ್ಟು ಕ್ರಮ ಕೈಗೊಂಡಿದೆ.
ಟೊಯೋಟಾ ಕಂಪನಿ, ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ ಕಾರ್ಮಿಕ ಸಂಘಟನೆ
ಅಲ್ಲದೇ ಚಿಕಿತ್ಸೆಯ ಅವಧಿಯಲ್ಲಿ ಸೋಂಕಿತ ಉದ್ಯೋಗಿಗಳಿಗೆ ಕಂಪನಿಯು ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತದೆ. ಇದಲ್ಲದೇ, ಪ್ರತಿದಿನವೂ ಕೆಲಸದ ಸ್ಥಳವನ್ನು ಸೋಂಕು ನಿವಾರಕಗೊಳಿಸುವ ಸಂಪೂರ್ಣ ಪ್ರಕ್ರಿಯೆಯನ್ನು ವಿಶೇಷ ವಿಧಾನದಲ್ಲಿ ಶುಚಿಗೊಳಿಸುತ್ತದೆ ಎಂದು ಟಿಕೆಎಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.