ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ನಾಳೆ ಕನಕಪುರ ಚಲೋ
ರಾಮನಗರ, ಜನವರಿ 12: ಕನಕಪುರ ತಾಲ್ಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಜಗತ್ತಿನ ಎತ್ತರದ ಏಸು ಪ್ರತಿಮೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯು ನಾಳೆ ಕನಕಪುರ ಚಲೋ ಗೆ ಕರೆ ಕೊಟ್ಟಿದೆ. ಈ ಹಿನ್ನಲೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಪೋಲೀಸರನ್ನು ಕನಕಪುರ ಮತ್ತು ಕಪಾಲ ಬೆಟ್ಟ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
1 ಎಸ್ಪಿ, 1 ಎಎಸ್ಪಿ, ಇಬ್ಬರು ಡಿವೈಎಸ್ಪಿ, 10 ಸಿಪಿಐ, 30 ಪಿಎಸ್ಐ ಸೇರಿದಂತೆ 1000 ಕ್ಕೂ ಹೆಚ್ಚು ಪೋಲೀಸರನ್ನು ಬಂದೋಬಸ್ತಗೆ ನಿಯೋಜನೆ ಮಾಡಲಾಗಿದೆ ಎಂದು ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಪಟ್ಟಣದ ಪೋಲೀಸ್ ಭದ್ರತೆಯನ್ನು ಪರಿಶೀಲಿಸಿ ಮಾತನಾಡಿದರು.
ಕನಕಪುರದ ಜನರಿಗೆ ಶಾಸಕ ಡಿ. ಕೆ. ಶಿವಕುಮಾರ್ ಪತ್ರ
ನಾಳೆ ಪ್ರತಿಭಟನೆ ನಡೆಸಲು ಕೆಲವು ಹಿಂದೂಪರ ಸಂಘಟನೆಗಳು ಅನುಮತಿ ಕೋರಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಪ್ರತಿಭಟನೆಗೆ ಅವಕಾಶವಿದೆ ನೀಡಲಾಗಿದೆ ಎಂದು ಎಸ್ಪಿ ಅನೂಪ್ ಶೆಟ್ಟಿ ತಿಳಿಸಿದರು.
ಏಸು ಪ್ರತಿಮೆ ವಿರೋಧಿಸಿ ಪ್ರತಿಭಟನೆ ಸಮಯದಲ್ಲಿ ಯಾವುದೇ ಗಲಾಟೆ, ಗಲಭೆ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದೇವೆ, ಒಂದು ವೇಳೆ ಶಾಂತಿ ಭಂಗ ಮಾಡಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ. ಅನೂಪ್ ಶೆಟ್ಟಿಯವರು ಮಾಹಿತಿ ನೀಡಿದರು.
ನಾಳೆ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮುನೇಶ್ವರಸ್ವಾಮಿ ಬೆಟ್ಟ ಉಳಿಸಿ ಚಲೋ ಕಾರ್ಯಕ್ರಮದ ಪ್ರಕಾರ ವಾಗ್ಮಿ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಮುಖ ಭಾಷಣಕಾರರಾಗಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
ಯೇಸು ಪ್ರತಿಮೆ ನಿರ್ಮಾಣ; ಸಿಎಂ ಭೇಟಿಯಾದ ಕ್ರೈಸ್ತ ಪಾದ್ರಿಗಳ ನಿಯೋಗ
ಸುಮಾರು 5000 ಹೆಚ್ಚು ಜನರು ಕನಕಪುರ ಚಲೋದಲ್ಲಿ ಭಾಗವಹಿಸಲಿದ್ದು, ಪ್ರತಿಭಟನಾ ಮೆರವಣಿಗೆ ಪಟ್ಟಣದ ಅಯ್ಯಪ್ಪ ದೇವಸ್ಥಾನ ದಿಂದ ಹೊರಟು ತಾಲ್ಲೂಕ ಕಚೇರಿ ತಲುಪಿ, ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಆರ್.ಸುರೇಶ್ ತಿಳಿಸಿದರು.