ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಸಾವರ್ಕರ್ ಅಪ್ರತಿಮ ದೇಶ ಭಕ್ತ: ಅಶ್ವಥ್ ನಾರಾಯಣ್
ರಾಮನಗರ, ಆಗಸ್ಟ್ 15: ಟಿಪ್ಪು ಒಬ್ಬ ನರಹಂತಹ , ಜನರನ್ನು ಬಲವಂತವಾಗಿ ಮತಾಂತರ ಮಾಡಿದ ಅಧರ್ಮಿ, ಸಾವರ್ಕರ್ ಒಬ್ಬ ಅಪ್ರತಿಮ ದೇಶಭಕ್ತ. ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಬಾರದ ಎನ್ನುವ ಮೂಲಕ ಟಿಪ್ಪು ಬ್ಯಾನರ್ ಹರಿದು ಹಾಕಿದ ಘಟನೆಯನ್ನು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸಮರ್ಥಿಸಿಕೊಂಡಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೇರವೇರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಬೆಂಗಳೂರಿನಲ್ಲಿ ಟಿಪ್ಪು ಬಾವಚಿತ್ರ ಹರಿದು ಹಾಕಿದ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಧರ್ಮದ ದೃಷ್ಟಿಕೋನ ಎನ್ನುವುದಕ್ಕಿಂತ ಇತಿಹಾಸದ ಸತ್ಯಾಸತ್ಯತೆ ತಿಳಿದುಕೊಳ್ಳುವುದು ಮುಖ್ಯ ಎನ್ನುವ ಮೂಲಕ ಟಿಪ್ಪು ಭಾವಚಿತ್ರವನ್ನು ಹರಿದುಹಾಕಿದನ್ನು ಸಮರ್ಥಿಸಿಕೊಂಡರು.
ಮತ್ತೆ ಭುಗಿಲೆದ್ದ ಸಾವರ್ಕರ್ ಫೋಟೊ ವಿವಾದ: ಶಿವಮೊಗ್ಗದಲ್ಲಿ ಲಘು ಲಾಠಿ ಪ್ರಹಾರ, ನಿಷೇಧಾಜ್ಞೆ
"ಎಲ್ಲ ಜಾತಿ, ಭಾಷಿಗರ ಧರ್ಮವನ್ನು ನಾವು ಗೌರವಿಸುತ್ತೆವೆ. ಟಿಪ್ಪುವನ್ನು ಮೀರಿದ ಕೋಟ್ಯಂತರ ಸಜ್ಜನರು ಇದ್ದಾರೆ. ಟಿಪ್ಪು ನಡೆಸಿದ ಕ್ರೌರ್ಯ, ನರಹತ್ಯೆ, ಬಲವಂತದ ಮತಾಂತರ ನಮ್ಮ ಮುಂದಿರುವ ಇತಿಹಾಸ. ಇದನ್ನೇ ನಾವು ಒಪ್ಪಿ ಸುಮ್ಮನೆ ಕುಳಿತುಕೊಳ್ಳಬೇಕಾ ಅಥವಾ ಹಿಂದಿನ ತಪ್ಪನ್ನು ತಿದ್ದಿಕೊಳ್ಳಬಾರದ" ಎಂದು ಸಚಿವರು ಪ್ರಶ್ನಿಸಿದರು.
ಟಿಪ್ಪು ವೀರ ಯೋಧ, ಹೋರಾಟಗಾರನಲ್ಲ
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎನ್ನಲು ಹೇಗೆ ಸಾಧ್ಯ ?. ಅವರ ಅಸ್ತಿತ್ವ ಉಳಿಸಿಕೊಳ್ಳಲು ಅಷ್ಟೇ ಹೋರಾಡಿದ್ದರು. ಟಿಪ್ಪು ವೀರ ಯೋಧ ಎಂದಷ್ಟೆ ಹೇಳಬಹುದು, ಆದರೆ ಅತ ಸ್ವಾತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ಸಮಾಜದ ಮೇಲೆ ಮಾಡಿರುವ ಅನ್ಯಾಯ ಎದ್ದು ಕಾಣುತ್ತಿದೆ ಮಡಿಕೇರಿ, ಭಟ್ಕಳ, ಕೇರಳ, ಮೇಲುಕೋಟೆ ಜನರು ಟಿಪ್ಪುವನ್ನು ಎಂದಿಗೂ ಒಪ್ಪುವುದಿಲ್ಲ ಎಂದರು.
ಮೈಸೂರು ಅರಸರಿಗೆ ಟಿಪ್ಪು ದ್ರೋಹ
ಬ್ರಿಟಿಷ್ ರಂತೆ ಟಿಪ್ಪು ಪರದೇಶಿ, ಮೈಸೂರು ಅರಸರು ಅವರನ್ನು ಕರೆದತಂದು ಬೆಳಸಿದರು. ಕೊನೆಗೆ ಟಿಪ್ಪು ಮೈಸೂರು ಅರಸರಿಗೆ ದ್ರೋಹ ಮಾಡಿದ ಎಂಬುದು ಎಲ್ಲರಿಗೂ ತಿಳಿದಿದೆ. ಮೈಸೂರು ಆರಸರು ಆಂಗ್ಲರ ಅಥವಾ ಬ್ರಿಟಿಷರಾ, ಅವರು ನಮ್ಮವರು ಅಲ್ಲವೇ. ಆಗಾಗಿ ಒಳ್ಳೆಯದನ್ನು ಒಪ್ಪಿಕೊಳ್ಳುವ, ಕೆಟ್ಟದನ್ನು ಖಂಡಿಸುವ ಕೆಲಸ ಮಾಡುತ್ತಿದ್ದೇವೆ . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅನ್ಯಾಯ ಮಾಡಿದ ಕಾಂಗ್ರೆಸ್ ಮೂಲೆಗುಂಪಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದರು.
ಸಾವರ್ಕರ್ ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರು
ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆಗೆಸಿದ ಪ್ರಕರಣದ ಬಗ್ಗೆ ಮಾತನಾಡಿ, " ಸಾವರ್ಕರ್ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ, ಸಾವರ್ಕರ್ ಮಹಾನ್ ದೇಶಭಕ್ತ, ದೇಶಕ್ಕಾಗಿ ಸಮರ್ಪಣೆ ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಸ್ಮರಿಸಬೇಕು. ಹೀಗಾಗಿ ಸಾರ್ವಕರ್ರನ್ನು ನೆನೆದಿದ್ದೇವೆ. ಇದನ್ನು ಮಾಡದ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕಾರ ಮಾಡಿದ್ದಾರೆ," ಎಂದು ಕಾಂಗ್ರೆಸ್ ವಿರುದ್ಧ ಅಶ್ವಥ್ ನಾರಾಯಣ್ ಹರಿಹಾಯ್ದರು.
ಆಡಿಯೋ ಮೂಲಕ ಸರ್ಕಾರದ ದಕ್ಷತೆ ಅಳೆಯಲು ಸಾಧ್ಯವಿಲ್ಲ
ಸರಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಎಂಬ ಸಚಿವ ಮಾಧುಸ್ವಾಮಿ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ " ವೈರಲ್ ಆಗಿರೋ ಆಡಿಯೋ ಮಾಧುಸ್ವಾಮಿ ಅವರದಲ್ಲ. ಇದನ್ನು ಯಾರೋ ಹುಟ್ಟುಹಾಕಿರಬೇಕು" ಎನ್ನುವ ಮೂಲಕ ಸಚಿವ ಮಾಧುಸ್ವಾಮಿ ಅವರನ್ನು ಸಚಿವ ಅಶ್ವಥ್ ನಾರಾಯಣ್ ಸಮರ್ಥಿಸಿಕೊಂಡರು.
ಆಡಿಯೋ ಬಗ್ಗೆ ನೀವು ಮಾಧುಸ್ವಾಮಿ ಅವರನ್ನೆ ಕೇಳಬೇಕು. ನಮ್ಮ ಸರ್ಕಾರ ಅತ್ಯದ್ಭುತವಾಗಿ ಕೆಲಸ ಮಾಡುತ್ತಿದೆ ಹಾಗಾಗಿ ಮಾಧುಸ್ವಾಮಿ ಈ ರೀತಿ ಹೇಳುವುದೇ ಇಲ್ಲ. ಆಡಿಯೋ ಮೂಲಕ ಸರ್ಕಾರದ ದಕ್ಷತೆ ಅಳೆಯಲು ಸಾಧ್ಯವಿಲ್ಲ ಇದೆಲ್ಲ ಪ್ರತಿ ಪಕ್ಷದ ಕುತಂತ್ರ, ಶಕುನಿಗಳ ಕೆಲಸ ಎಂದು ಪ್ರತಿ ಪಕ್ಷಗಳ ಮೇಲೆ ಗೂಬೆ ಕುರಿಸಿದರು.
ಸಚಿವ ಮಾಧಸ್ವಾಮಿ ಆಡಿಯೋ ಪ್ರತಿಪಕ್ಷದ ಕುತಂತ್ರ ಎಂಬ ಸಚಿವರ ಉತ್ತರಕ್ಕೆ, ಕಾಂಗ್ರೆಸ್ ಪಕ್ಷದವರ ಅಥಾವಾ ಜೆಡಿಎಸ್ ಪಕ್ಷದವರ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವಥ್ ನಾರಾಯಣ್, ಇರಬಹುದು ಯಾರು ಕುತಂತ್ರಿಗಳು, ಶಕುನಿಗಳು ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದು ಸಚಿವರು ಸಮಜಾಯಿಸಿ ನೀಡಿದರು.