ಉಂಡ ಮನೆಗೆ ಮೋಸ ಮಾಡಿದವರು ಪಾಠ ಕಲಿಯುತ್ತಾರೆ ಎಂದ ಡಿಕೆಶಿ
ರಾಮನಗರ, ನವೆಂಬರ್ 27: "ಯಾರು ತಾಯಿಗೆ, ಮಾತೃಭೂಮಿಗೆ, ಮಾತೃಪಕ್ಷಕ್ಕೆ ಮೋಸ ಮಾಡಿದ್ದಾರೋ ಅವರಿಗೆಲ್ಲ ಜನರು ತಕ್ಕ ಪಾಠ ಕಲಿಸಿಕೊಡ್ತಾರೆ. ಎಲ್ಲ ರಾಜ್ಯದಲ್ಲೂ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ. ಅವರಿಗೆಲ್ಲ ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದಲ್ಲೂ ಜನ ಬಹಳ ಪ್ರಜ್ಞಾವಂತರಿದ್ದಾರೆ. ಅವರು ಒಳ್ಳೆಯ ತೀರ್ಪನ್ನು ನೀಡುತ್ತಾರೆ" ಎಂದು ರಾಮನಗರದಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಹುಣಸೂರಿಗೆ ಪ್ರಚಾರಕ್ಕೆ ಹೋಗುವ ವೇಳೆ ರಾಮನಗರಕ್ಕೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್, "ಚುನಾವಣೆ ಸಂಬಂಧ ಈಗಾಗಲೇ ನಾನು ಹೊಸಕೋಟೆಗೆ ಹೋಗಿದ್ದೆ. ಈಗ ಹುಣಸೂರು ಮತ್ತು ಕೆಆರ್ ಪೇಟೆ ಎರಡು ಕ್ಷೇತ್ರಗಳಲ್ಲಿ ಪ್ರಚಾರ ಮುಗಿಸಿ ನಂತರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಪ್ರಚಾರ ಮಾಡುವೆ. ಈ ಚುನಾವಣೆ ಬಗ್ಗೆ ನನಗೆ ವಿಶ್ವಾಸವಿದೆ. ಮತದಾರರ ಅಂತರಾಳವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
ನಾನು ಜ್ಯೋತಿಷಿ ಅಲ್ಲ, ಆಶಾವಾದಿ ಎಂದ ಡಿಕೆ ಶಿವಕುಮಾರ್
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ವಿಚಾರವನ್ನು ಬಿಜೆಪಿ ಚುನಾವಣೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ವಿಚಾರಕ್ಕೆ ಮಾತನಾಡಿದ ಅವರು, "ನಾನು ಯಾರಿಗೂ ಮೋಸ ಮಾಡಿಲ್ಲ. ಸಿಎಂ ಯಡಿಯೂರಪ್ಪ ನೂರು ಮೆಡಿಕಲ್ ಕಾಲೇಜು ಕೊಡಲಿ. ಚಿಕ್ಕಬಳ್ಳಾಪುರಕ್ಕೂ ಕೊಡಲಿ. ಸಿದ್ದರಾಮಯ್ಯ ಬಜೆಟ್ ನಲ್ಲಿ ಸೇರಿಸಿ ನಮ್ಮ ಕ್ಷೇತ್ರಕ್ಕೆ ಒಂದು ಕಾಲೇಜು ಕೇಳಿದ್ದೆ. ಅದಕ್ಕೆ ಏನು ಅನುದಾನ ಬೇಕೋ ಅದನ್ನು ಎಚ್.ಡಿ. ಕುಮಾರಸ್ವಾಮಿ ಕೊಟ್ಟಿದ್ದರು. ಚಿಕ್ಕಬಳ್ಳಾಪುರಕ್ಕೆ ಕೊಡಬೇಡಿ ಅಂತ ನಾನೆಲ್ಲಿ ಹೇಳಿದ್ದೇನೆ? ಅದನ್ನೇ ರಾಜಕಾರಣ ಮಾಡ್ತೀವಿ ಅಂದ್ರೆ ಮಾಡ್ಕೊಳ್ಳಿ. ಎಲ್ಲದಕ್ಕೂ ಜನರು ಉತ್ತರ ಕೊಡುತ್ತಾರೆ" ಎಂದರು.