ರಾಮನಗರ: ಮೇಕೆದಾಟು ಯೋಜನೆ ನಿಲ್ಲಲ್ಲ, ನೂತನ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಅಪಾಯವಿಲ್ಲ
ರಾಮನಗರ, ಆಗಸ್ಟ್ 15: ರಾಮನಗರ ಜಿಲ್ಲೆಯೂ ಸೇರಿ ರಾಜ್ಯದ ಪಾಲಿನ ಜೀವನಾಡಿ ಆಗಲಿರುವ ಮೇಕೆದಾಟು ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಸ್ಪಷ್ಟವಾಗಿ ಹೇಳಿದರು.
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದ ಅವರು, "ಕುಡಿಯುವ ನೀರಿನ ಉದ್ದೇಶಕ್ಕಾಗಿ ಅನುಷ್ಠಾನವಾಗುತ್ತಿರುವ ಈ ಯೋಜನೆ ನಿಲ್ಲುವುದಿಲ್ಲ. ಈಗಾಗಲೇ ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ,'' ಎಂದರು.
"ಆಯೋಗದಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ಯೋಜನೆ ಕಾಮಗಾರಿ ಆರಂಭ ಮಾಡಲಾಗುವುದು ಎಂದ ಅವರು, ಈ ಯೋಜನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಇದು ಅಗತ್ಯವಾದ ಯೋಜನೆ. ಈ ಯೋಜನೆಯನ್ನು ನೆರೆ ರಾಜ್ಯ ವಿರೋಧಿಸುವುದು ಸರಿಯಲ್ಲ. ಯಾರು ವಿರೋಧ ಮಾಡಿದರೂ ಯೋಜನೆ ನಿಲ್ಲುವುದೂ ಇಲ್ಲ," ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ದೇಶಕ್ಕೆ ಮಾದರಿ ಸ್ಕಿಲ್ ಹಬ್
"ರಾಜ್ಯದಲ್ಲಿ ಹೆಚ್ಚೆಚ್ಚು ಪ್ರಮಾಣದಲ್ಲಿ ಕೌಶಲ್ಯಯುಕ್ತ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ದೇಶದಲ್ಲಿಯೇ ಅತ್ಯಂತ ಮಾದರಿಯಾದ ಸ್ಕಿಲ್ ಹಬ್ (Skill Hub) ಆರಂಭ ಮಾಡಲಾಗುವುದು," ಎಂದು ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.
"ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರುದ್ಯೋಗವನ್ನು ಹತ್ತಿಕ್ಕಲು ಹಾಗೂ ಕೈಗಾರಿಕೆಗಳಿಗೆ ಅತ್ಯುತ್ತಮ ಗುಣಮಟ್ಟದ ಕುಶಲತೆಯುಳ್ಳ ಮಾನವ ಸಂಪನ್ಮೂಲವನ್ನು ಒದಗಿಸುವ ನಿಟ್ಟಿನಲ್ಲಿ ಸ್ಕಿಲ್ ಹಬ್ ನಿರ್ಣಾಯಕ ಪಾತ್ರ ವಹಿಸುತ್ತದೆ. ರಾಮನಗರ ಜಿಲ್ಲಾ ಕೇಂದ್ರದಲ್ಲೂ ಸ್ಕಿಲ್ ಹಬ್ ಸ್ಥಾಪನೆ ಮಾಡಲಾಗುವುದು ಎಂದರು. ಯಾರೇ ಉತ್ಸಾಹಿ ತರುಣ, ತರುಣೀಯರು ಜೀವನದಲ್ಲಿ ಮುಂದೇನು ಮಾಡಬೇಕು ಎಂಬ ಪ್ರಶ್ನೆ ಬಂದಾಗ ಸ್ಕಿಲ್ ಹಬ್ಗೆ ಬಂದರೆ ಸಾಕು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಕೈಹಿಡಿದು ಮುನ್ನಡೆಸಲಾಗುವುದು. ಅಲ್ಲದೇ, ವಿದ್ಯಾಭ್ಯಾಸದ ಕರಿಯರ್ ಮಾರ್ಗದರ್ಶನ ಹಾಗೂ ಕುಶಲ ತರಬೇತಿಯ ಬಗ್ಗೆಯೂ ಇಲ್ಲಿಯೇ ಮಾರ್ಗದರ್ಶನ ಸಿಗುತ್ತದೆ," ಎಂದು ಅವರು ಹೇಳಿದರು.
150 ಸರಕಾರಿ ಐಟಿಐಗಳನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ
"ಜೊತೆಗೆ ಸ್ಕಿಲ್ ಕನೆಕ್ಟ್ ಕಾರ್ಯಕ್ರಮದ ಮೂಲಕ ಉದ್ಯೋಗಾಂಕ್ಷಿಗಳು, ಉದ್ಯೋಗದಾತರ ಸಂಪರ್ಕಕ್ಕೆ ವೇದಿಕೆ ಕಲ್ಪಿಸುವುದರೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ 150 ಸರಕಾರಿ ಐಟಿಐಗಳನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. 315 ಮಿನಿ ಉದ್ಯೋಗ ಮೇಳಗಳಿಂದ 25,360 ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ನೀಡಲಾಗಿದೆ ಎಂದು ಸಚಿವ ಡಾ.ಅಶ್ವಥ್ ನಾರಾಯಣ ತಿಳಿಸಿದರು.
ಇನ್ನು ಗ್ರಾಮೀಣ ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಎನ್.ಆರ್.ಎಲ್.ಎಂ ಯೋಜನೆಯಡಿ 6 ಲಕ್ಷ ಸ್ವ-ಸಹಾಯ ಗುಂಪುಗಳಿಗೆ 13,700 ಕೋಟಿ ರೂ.ಗಳ ಬ್ಯಾಂಕ್ ಸಾಲ ನೀಡುವುದರ ಜತೆಗೆ, 59,323 ಸ್ವ ಸಹಾಯ ಗುಂಪುಗಳಿಗೆ 524 ಕೋಟಿ ರೂ.ಗಳ ಸಮುದಾಯ ಬಂಡವಾಳ ನಿಧಿ ಕೊಡಲಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದ 2.16 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ತಲಾ 2,000 ರೂ.ಗಳ ಆರ್ಥಿಕ ನೆರವು ನೀಡಲಾಗಿದೆ," ಎಂದು ಅವರು ಹೇಳಿದರು.
ನೂತನ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಎಳ್ಳಷ್ಟೂ ಅಪಾಯವಿಲ್ಲ
"ಈ ವರ್ಷದಿಂದ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಎಳ್ಳಷ್ಟೂ ಅಪಾಯವಿಲ್ಲ. ಮಾತೃ ಭಾಷಾ ಶಿಕ್ಷಣಕ್ಕೆ ಅಗ್ರ ಆದ್ಯತೆ ನೀಡುತ್ತಿದೆ," ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಸಿ.ಎನ್. ಅಶ್ವಥ್ ನಾರಾಯಣ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
"ನೂತನ ಶಿಕ್ಷಣ ನೀತಿಯಿಂದ ಕನ್ನಡ ಭಾಷಾ ಕಲಿಕೆ ಮತ್ತು ಬೆಳವಣಿಗೆಗೆ ಧಕ್ಕೆಯಾಗುತ್ತದೆ ಎಂಬುದು ಕೇವಲ ಮಿಥ್ಯ ಮಾತ್ರ. ಪದವಿ ಹಂತದಲ್ಲಿ ಎರಡು ವರ್ಷ ಕನ್ನಡದ ಕಲಿಕೆ ಕಡ್ಡಾಯ. ಜೊತೆಗೆ ನಮ್ಮ ದೇಶದ ಮತ್ತೊಂದು ಭಾಷೆಯನ್ನು ವಿಷಯವನ್ನಾಗಿ ಕಲಿಸಲಾಗುತ್ತದೆ. ಅಲ್ಲದೇ ಎಂಜಿನಿಯರಿಂಗ್, ವಿಜ್ಞಾನ, ವೈದ್ಯಕೀಯ ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣ ಕೋರ್ಸ್ಗಳನ್ನು ಕನ್ನಡ ಭಾಷೆಯಲ್ಲೇ ಸಮರ್ಥವಾಗಿ ಕಲಿಸಲಾಗುತ್ತದೆ. ಈ ದಿಸೆಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು, ಎಂಜಿನಿಯರಿಂಗ್ ಪಠ್ಯಕ್ರಮವನ್ನು ಕನ್ನಡದಲ್ಲಿ ಸಿದ್ಧಪಡಿಸಲು ಅನುವಾದ ಕಾರ್ಯ ಆರಂಭವಾಗಿದೆ, ಎಂದು ಸಚಿವರು ಮಾಹಿತಿ ನೀಡಿದ ಅವರು, ಈ ಎಲ್ಲ ಪ್ರಯತ್ನಗಳು ಕನ್ನಡವನ್ನು ಮತ್ತಷ್ಟು ಶಕ್ತಿಯುತಗೊಳಿಸುವ ದಿಸೆಯಲ್ಲೆ ಸಾಗುತ್ತಿವೆಯೇ ಹೊರತು ದುರ್ಬಲಗಿಳಿಸುವುದಕ್ಕಲ್ಲ," ಎಂದರು.
ಮೂರು ದಶಕಗಳ ನಂತರ ಬಂದ ನೀತಿ
"34 ವರ್ಷಗಳ ನಂತರ ರೂಪಿಸಲಾಗಿರುವ ಈ ಶಿಕ್ಷಣ ನೀತಿಯ ಕರಡನ್ನು ನಮ್ಮವರೇ ಆದ ಡಾ.ಕೆ. ಕಸ್ತೂರಿ ರಂಗನ್ ನೇತೃತ್ವದ ತಜ್ಞರ ತಂಡವು 5-6 ವರ್ಷಗಳ ನಿರಂತರ ಸಮಾಲೋಚನೆ ನಡೆಸಿ ರೂಪಿಸಿದೆ. ಈ ನೀತಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ," ಎಂದು ಡಾ.ಅಶ್ವಥ್ ನಾರಾಯಣ ತಿಳಿಸಿದರು.
"ರಾಜ್ಯ ಸರಕಾರವು ಉನ್ನತ ಶಿಕ್ಷಣದಲ್ಲಿ ಶಿಕ್ಷಣ ನೀತಿಯನ್ನು ಇದೇ 2021- 22ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸಲು ಆದೇಶ ಹೊರಡಿಸಿದೆ. ನೂತನ ನೀತಿಯಿಂದಾಗಿ ಮುಂಚೆ ಇದ್ದ ಬಿಗುವಿನ ಕಟ್ಟುಪಾಡುಗಳು ಹೊರಟು ಹೋಗಲಿವೆ. ಶಿಕ್ಷಣ ನೀತಿಯು ಬಹುಶಿಸ್ತುಗಳ ಕಲಿಕೆಯನ್ನು ಉತ್ತೇಜಿಸಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಓದಿ- ಕಲಿತು ಮುಂದೆ ಬರಬಹುದಾಗಿದೆ," ಎಂದರು.
Recommended Video
ಕಲಿಕೆಯಲ್ಲಿ ಮುಕ್ತ ಸ್ವಾತಂತ್ರ್ಯ
"ವಿದ್ಯಾರ್ಥಿಗಳು ತಮ್ಮ ಕೋರ್ಸ್ ಹೇಗಿರಬೇಕು ಎಂಬುದನ್ನು ತಾವೇ ನಿರ್ಧರಿಸಿಕೊಳ್ಳಬಹುದು. ಇದರಿಂದಾಗಿ, ನಿಜಕ್ಕೂ, ಸ್ವಾತಂತ್ರ್ಯೋತ್ಸವದ 75ನೇ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೂಡ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದು ಖುಷಿಯ ವಿಚಾರ. ಈ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಜೊತೆಗೆ ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನೆಲ್ಲೆಡೆ ಬೆಳಗಿಸಲು ಬಳಸಿಕೊಳ್ಳಬೇಕು," ಎಂದು ಸಚಿವರು ಕರೆ ನೀಡಿದರು.