ಚನ್ನಪಟ್ಟಣ: ಮುಸ್ಲಿಂ ಕಲಾವಿದನ ಕೈಯಲ್ಲಿ ಅರಳಿದ ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹ
ರಾಮನಗರ, ಆಗಸ್ಟ್ 09: ಭೀಮನ ಅಮಾವಾಸ್ಯೆ ಪ್ರಯುಕ್ತ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ವಿಶ್ವದಲ್ಲೇ ಅತಿ ಎತ್ತರದ ಬೃಹತ್ ಐತಿಹಾಸಿಕ ಪಂಚಲೋಹದ ಪ್ರತಿಮೆ ಭಾನುವಾರ ಲೋಕಾರ್ಪಣೆಗೊಂಡಿದೆ. ಲೋಕಾರ್ಪಣೆಯಾದ ದಿನದಂದೇ ದೇವಿಯ ದರ್ಶನ ಪಡೆಯಲು ಸಾವಿರಾರು ಮಂದಿ ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ 68 ಅಡಿ ಎತ್ತರದ ವಿಶ್ವದ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹವನ್ನು ಲೋಕಾರ್ಪಣೆ ಮಾಡಲಾಗಿದೆ. ದೇವಸ್ಥಾನದ ಧರ್ಮದರ್ಶಿ ಮಲ್ಲೇಶ್ ಎಂಬುವರು ಈ ಮಹಾಕಾರ್ಯವನ್ನು ಮಾಡಿದ್ದಾರೆ. ಸುಮಾರು 35 ಸಾವಿರ ಕೆ.ಜಿ ತೂಕದ ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು, ತಾಮ್ರ ಸೇರಿದಂತೆ ಪಂಚಲೋಹಗಳಿಂದ ಈ ವಿಗ್ರಹ ತಯರಾಗಿದೆ. ಈ ವಿಗ್ರಹವನ್ನು ಮುಸ್ಲಿಂ ಕಲಾವಿದನ ಸಾರಥ್ಯದಲ್ಲಿ ನಿರ್ಮಾಣಗೊಂಡಿದೆ ಎಂಬುದು ಪ್ರತಿಮೆಯ ವಿಷೇಷಗಳಲ್ಲೂಂದು.
ಚಾಮುಂಡೇಶ್ವರಿ ಪ್ರತಿಮೆ ನೆಲಮಟ್ಟದಿಂದ 68 ಅಡಿ ಎತ್ತರವಿರುವ, ಹದಿನೆಂಟು ಭುಜಗಳಲ್ಲಿ ಶಂಖ ಚಕ್ರ, ಗದಾ ಹಸ್ತೆ, ಸರ್ಪ ಶಾರ್ದೂಲ, ಕಮಂಡಲ, ಅಂಕುಶ, ಖಡ್ಗ, ಪರಶು, ಧನಸ್ಸು ಹೀಗೆ ಹದಿನೆಂಟು ಬಗೆಯ ಆಯುಧಗಳನ್ನು ಕೈಯಲ್ಲಿ ಹಿಡಿದಿರುವ ಸೌಮ್ಯ ರೂಪಿಯಾಗಿ ನಿಂತಿರುವ ಭಂಗಿಯಲ್ಲಿನ ನಾಡ ದೇವತೆ ಪ್ರತಿಮೆ.
18 ಭುಜಗಳುಳ್ಳ ಚಾಮುಂಡೇಶ್ವರಿ ವಿಗ್ರಹ
ಮುಸ್ಲಿಂ ಕುಶಲಕರ್ಮಿಗಳು ಸೇರಿದಂತೆ ಸುಮಾರು 25 ಜನ ಕಲಾವಿದರಿಂದ ಕಳೆದ ಮೂರು ವರ್ಷಗಳಿಂದ ನಿರಂತರ ಪರಿಶ್ರಮದಿಂದ ತಯಾರು ಮಾಡಿದ್ದಾರೆ. ಇನ್ನು 18 ಭುಜಗಳುಳ್ಳ ಚಾಮುಂಡೇಶ್ವರಿ ವಿಗ್ರಹ ಅತ್ಯದ್ಭುತವಾಗಿ ಕೆತ್ತನೆ ಮಾಡಿ ಇದೀಗ ಭೀಮನ ಅಮಾವಾಸ್ಯೆ ದಿನದಂದು ಲೋಕಾರ್ಪಣೆಗೊಂಡಿದೆ. ಚನ್ನಪಟ್ಟಣ ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಗೌಡಗೆರೆ ಗ್ರಾಮಲ್ಲಿ ಈ ಬೃಹತ್ ಚಾಮುಂಡೇಶ್ವರಿ ವಿಗ್ರಹ ಅನುಷ್ಠಾನಗೊಂಡಿದೆ. ಬೊಂಬೆಗಳ ನಿರ್ಮಾಣ ಕಾರ್ಯದಲ್ಲಿ ಈಗಾಗಲೇ ವಿಶ್ವ ಪ್ರಸಿದ್ಧಿ ಪಡೆದಿರುವ ಬೊಂಬೆನಗರಿ ಚನ್ನಪಟ್ಟಣಕ್ಕೆ ಮತ್ತೊಂದು ಮತ್ತೊಂದು ಗರಿ ಬಂದಿದೆ.
ನಾಗಸಾಧು ಅಣತಿಯಂತೆ ನಿರ್ಮಾಣವಾದ ವಿಗ್ರಹ
ಗೌಡಗೆರೆ ಬಸಪ್ಪ ದೇವಸ್ಥಾನಕ್ಕೆ ನೂರಾರು ವರ್ಷದ ಇತಿಹಾಸವಿದೆ. ದೇವಿಯ ಇಚ್ಛಾನುಸರವಾಗಿ ಈಗ ಬೃಹತ್ ಚಾಮುಂಡೇಶ್ವರಿ ತಾಯಿ ವಿಗ್ರಹ ಪ್ರತಿಷ್ಠಾಪನೆಗೊಂಡಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಹಾಗೂ ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ.
ಇನ್ನು ಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರದ ಧರ್ಮದರ್ಶಿ ಮಲ್ಲೇಶಪ್ಪ ಮಾತನಾಡಿ, "ಜಗತ್ತಿನ ಇತರೆ ಭಾಗದಲ್ಲಿ ಅತಿ ಎತ್ತರದ ಉಕ್ಕಿನ ಪ್ರತಿಮೆ, ಕಲ್ಲಿನ ಪ್ರತಿಮೆ ಹಾಗೂ ಸಿಮೆಂಟ್ ಪ್ರತಿಮೆಗಳು ಕಾಣಸಿಗುತ್ತವೆ. ಆದರೆ ಪಂಚಲೋಹದಲ್ಲಿ ನಿರ್ಮಾಣವಾಗಿರುವ ವಿಶ್ವದ ಎತ್ತರದ ಪ್ರತಿಮೆ ಚಾಮುಂಡೇಶ್ವರಿ ತಾಯಿಯ ಪ್ರತಿಮೆ ಎಂಬಿದು ಕ್ಷೇತ್ರದ ಹೆಗ್ಗಳಿಕೆ,'' ಎನ್ನುತ್ತಾರೆ.
ಕಲ್ಲಿನ ವಿಗ್ರಹ ನಿರ್ಮಾಣಕ್ಕೆ ಮುಂದಾದಾಗ ಭಗ್ನ
ಗೌಡಗೆರೆ ಕ್ಷೇತ್ರದ ಚಾಮುಂಡಿ ತಾಯಿ ವಿಗ್ರಹ ಸ್ಥಾಪಿಸುವಂತೆ ಕ್ಷೇತ್ರಕ್ಕೆ ಭೇಟಿ ನೀಡಿದ ನಾಗಸಾಧು ಒಬ್ಬರು ಧರ್ಮದರ್ಶಿ ಮಲ್ಲೇಶಪ್ಪನವರಿಗೆ ತಾಕೀತು ಮಾಡಿದರಂತೆ. ನಂತರ ಕಲ್ಲಿನ ವಿಗ್ರಹ ನಿರ್ಮಾಣಕ್ಕೆ ಮುಂದಾದ ಸಮಯದಲ್ಲಿ ವಿಗ್ರಹ ಭಗ್ನವಾಗಿದೆ. ನಂತರ ವರ್ಷಗಳ ನಂತರ ಮತ್ತೆ ಕ್ಷೇತ್ರಕ್ಕೆ ಬಂದ ನಾಗಸಾಧು ಪಂಚಭೂತಗಳಲ್ಲಿ ತಾಯಿಯ ಪ್ರತಿಮೆಯನ್ನು ಪಂಚಲೋಹದಿಂದ ನಿರ್ಮಾಣ ಮಾಡುವಂತೆ ಆದೇಶ ಮಾಡಿದ ಹಿನ್ನಲೆಯಲ್ಲಿ ಇಂದು ಕ್ಷೇತ್ರದಲ್ಲಿ 68 ಅಡಿ ಎತ್ತರದ ಪಂಚಲೋಹದ ಸುವರ್ಣ ಲೇಪಿತ ವಿಗ್ರಹ ಸ್ಥಾಪನೆಗೊಂಡಿದೆ ಎನ್ನುತಾರೆ ಮಲ್ಲೇಶಪ್ಪ.
Recommended Video
ಮುಸ್ಲಿಂ ಕಲಾವಿದನ ಕೈಯಲ್ಲಿ ಅರಳಿದ ಪ್ರತಿಮೆ
ಬೃಹತ್ ಚಾಮುಂಡೇಶ್ವರಿ ಪಂಚಲೋಹದ ವಿಗ್ರಹದ ನಿರ್ಮಾಣದ ಸಾರಥ್ಯ ವಹಿಸಿದ್ದ ಮುಸ್ಲಿಂ ಕುಶಲಕರ್ಮಿ ಬೆಂಗಳೂರಿನ ಪಠಾಣ್ ಮಾತನಾಡಿ, "ನಾವು ಇದುವರೆಗೆ ಕೇವಲ 10, 15 ಅಡಿಯ ವಿಗ್ರಹಗಳನ್ನೂ ನಿರ್ಮಾಣ ಮಾಡಿದ್ದೇವೆ. ಆದರೆ ಇದು ವಿಶ್ವದಲ್ಲೇ ಅತಿ ಎತ್ತರದ ವಿಗ್ರಹ ನಿರ್ಮಾಣ ಮಾಡಿರುವುದು ಖುಷಿ ಕೊಟ್ಟಿದೆ. ನಾನು ಮುಸ್ಲಿಂ ಧರ್ಮಕ್ಕೆ ಸೇರಿದರೂ, ತಾಯಿ ವಿಗ್ರಹವನ್ನು ತುಂಬಾ ಶ್ರದ್ಧೆಯಿಂದ ನಿರ್ಮಾಣ ಮಾಡಿದ್ದೇವೆ.''
"ಸುಮಾರು 20 ಕುಶಲಕರ್ಮಿಗಳು ಸುಮಾರು 35 ಸಾವಿರ ಕೆ.ಜಿ ಲೋಹ ಬಳಸಿ ನಿರ್ಮಾಣ ಮಾಡಿದ್ದೇವೆ. ಮೊದಲು ಮಣ್ಣಿನಿಂದ ಕಲಾಕೃತಿ ತಯಾರಿಸಿ, ನಂತರ ಪೈಬರ್ ಕಲಾಕೃತಿ ನಿರ್ಮಾಣ ಮಾಡಿ ಅಂತಿಮವಾಗಿ ಕಾಸ್ಟಿಂಗ್, ಮೂರು ಹಂತದಲ್ಲಿ ನಿರ್ಮಾಣ ಮಾಡಿ, ಕೊನೆಯದಾಗಿ ಮೂರ್ತಿಗೆ ಸುವರ್ಣ ಲೇಪನ ಮಾಡಿದ್ದೇವೆ,'' ಎಂದು ಮೂರ್ತಿಯ ನಿರ್ಮಾಣದ ವಿವಿಧ ಹಂತಗಳ ಬಗ್ಗೆ ಪಠಾಣ್ ತಿಳಿಸಿದರು.