ರಾಮನಗರ: ನೀರಿನ ರಭಸಕ್ಕೆ ಕೊಚ್ಚಿಹೋದ ಮೆಳೇಹಳ್ಳಿ ಸೇತುವೆ; ಸಂಕಷ್ಟದಲ್ಲಿ 7 ಗ್ರಾಮಗಳ ಜನತೆ
ರಾಮನಗರ, ನವೆಂಬರ್ 22: ರಾಮನಗರ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಜನತೆ ಬೆಚ್ಚಿ ಬಿದ್ದಿದ್ದು, ಬೆಳೆ ಹಾನಿ ಸೇರಿದಂತೆ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಮತ್ತೊಂದು ಕಡೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕೊಂಡಿಯಂತಿದ್ದ ಸೇತುವೆ ಕೊಚ್ಚಿ ಹೋಗಿ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಿರಂತರ ಮಳೆಯಿಂದ ರಾಮನಗರ ಜಿಲ್ಲೆಯ ಪ್ರಮುಖ ಜಲಾಯಶಯಗಳು ಸೇರಿದಂತೆ ಕೆರೆ- ಕಟ್ಟೆಗಳು ತುಂಬಿ ಕೋಡಿ ಹರಿದು ನದಿಗೆ ಸೇರುತ್ತಿರುವ ಹಿನ್ನಲೆಯಲ್ಲಿ ಅರ್ಕಾವತಿ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ನದಿ ರಭಸವಾಗಿ ಹರಿಯುತ್ತಿರುವುದರಿಂದ ಮೆಳೇಹಳ್ಳಿ ಗ್ರಾಮದ ಸಂಪರ್ಕ ಸೇತುವೆ ಕೊಚ್ಚಿ ಹೋಗಿದೆ.
ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಮೆಳೇಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಮೆಳೇಹಳ್ಳಿ ಗ್ರಾಮ ಸೇರಿದಂತೆ, ಮಾರೇಗೌಡನದೊಡ್ಡಿ, ಅರಳಿಮಾರದೊಡ್ಡಿ, ಜೋಗಿದೊಡ್ಡಿ, ಅಂಕನಹಳ್ಳಿ, ಜಾಲಮಂಗಲ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಇದೀಗ ಬೇರೆ ಮಾರ್ಗವಾಗಿ ಸುತ್ತಿ ಬಳಸಿ ತಮ್ಮ ಊರುಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆಳೇಹಳ್ಳಿ ಗ್ರಾಮದ ಜನರು ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೀಗ ಗುಂಗರಹಳ್ಳಿ ಗ್ರಾಮದ ಮಾರ್ಗವಾಗಿ ಸುಮಾರು 7 ಕಿಲೋಮೀಟರ್ನಷ್ಟು ದೂರ ಸುತ್ತಿಕೊಂಡು ಓಡಾಡಬೇಕಾದ ಪರಿಸ್ಥಿತಿ ಬಂದಿದೆ.
ಗುಂಗರಹಳ್ಳಿ ಗ್ರಾಮದ ರಸ್ತೆ ಕೂಡ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳೆಲ್ಲಾ ಗುಂಡಿ ಬಿದ್ದು ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಇದೆ. ಆದಷ್ಟು ಬೇಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೊಸ ಸೇತುವೆಯನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಅಕಾಲಿಕ ಮಳೆಯಿಂದ ಒಂದಲ್ಲ ಒಂದು ಅವಾಂತರಗಳು ಸೃಷ್ಟಿಯಾಗಿದ್ದು, ಜನರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಆದಷ್ಟು ಬೇಗ ಗ್ರಾಮದ ಸಂಪರ್ಕ ಸೇತುವೆ ನಿರ್ಮಾಣ ಮಾಡಿ, ಗ್ರಾಮದ ಸಮಸ್ಯೆಯನ್ನು ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅರ್ಕಾವತಿ ನದಿಯಲ್ಲಿ ನೀರಿನ ಹರಿವು ಹೆಚ್ವಾಗಿ ನದಿ ದಂಡೆಯಲ್ಲಿರುವ ಜಮೀನುಗಳು ಮತ್ತು ದೇವಾಲಯಗಳಿಗೂ ಸಾಕಷ್ಟು ಹಾನಿ ಉಂಟಾಗಿದೆ. ನದಿ ಪಾತ್ರದಲ್ಲಿರುವ ಎರೇಹಳ್ಳಿ ಗ್ರಾಮದಲ್ಲಿ ಶನಿ ದೇವಾಲಯ ಜಲಾವೃತಗೊಂಡಿದ್ದು, ಜಮೀನು, ತೋಟಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ರಾಗಿ, ಭತ್ತ, ಸೀಮೆಹುಲ್ಲು ಸೇರಿದಂತೆ ಅಪಾರ ಪ್ರಮಾಣದ ರೈತರ ಬೆಳೆ ನಾಶವಾಗಿದೆ.
Recommended Video