ಕಾರ್ಮಿಕರಿಗೆ ಸೇವಾ ಭದ್ರತೆ ನೀಡುವಂತಹ ಕಾಯ್ದೆ ತಿದ್ದುಪಡಿ ಮಾಡಿ: ನಂಜಾವದೂತ ಶ್ರೀ
ರಾಮನಗರ, ಫೆಬ್ರವರಿ 15: ನಾಡಿನ ಅಭಿವೃದ್ಧಿಗೆ ಕಾರ್ಖಾನೆಗಳು ಎಷ್ಟು ಅವಶ್ಯಕತೆ ಇದೆಯೋ, ಅದೇ ರೀತಿ ಈ ನಾಡಿನ ಮಕ್ಕಳಿಗೆ ಕೆಲಸ ನೀಡುವ ಮತ್ತು ಸೇವಾ ಭದ್ರತೆ ಒದಗಿಸುವಂತೆ ಕಾಯ್ದೆಗಳು ತಿದ್ದುಪಡಿಯಾಗಬೇಕು ಎಂದು ನಂಜಾವದೂತ ಶ್ರೀ ಅಭಿಪ್ರಾಯಪಟ್ಟರು.
ಬಿಡದಿ ಕೈಗಾರಿಕಾ ವಲಯದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯ ಕಾರ್ಮಿಕರ ಹೋರಾಟ 99ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಷಟಿಕಪುರಿ ಮಠದ ನಂಜಾವದೂತ ಶ್ರೀಗಳು ಟೊಯೊಟಾ ಕಾರ್ಮಿಕರ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ: ರೈತರಿಗೆ ಸಿಹಿ ಸುದ್ದಿ ನೀಡಿದ ಪಶುಸಂಗೋಪನೆ ಸಚಿವ
ಕಾರ್ಖಾನೆ ಮತ್ತು ಕಾರ್ಮಿಕರ ಸಂಬಂಧ ತಂದೆ-ಮಕ್ಕಳ ಬಾಂಧವ್ಯದಂತಿರಬೇಕು, ಎಲ್ಲಿ ಬಾಂಧವ್ಯದ ಕೊರತೆ ಉಂಟಾಗುತ್ತದೆ ಅಲ್ಲಿ ಕಂಪನಿಯು ಉಳಿಯುವುದಿಲ್ಲ ಕಾರ್ಮಿಕರು ಉಳಿಯುವುದಿಲ್ಲ ಹಾಗಾಗಿ ಸಣ್ಣ ಪುಟ್ಟ ತಪ್ಪುಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗರಹರಿಸಿ ಕೊಳ್ಳುವಂತೆ ಶ್ರೀಗಳು ಕಾರ್ಖಾನೆ ಹಾಗೂ ಕಾರ್ಮಿಕರಿಗೆ ಕಿವಿಮಾತು ಹೇಳಿದರು.
ಈಗಾಗಲೇ ಕಳೆದ 99 ದಿನಗಳಿಂದ ನಿರಂತರವಾಗಿ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು, ವಿರೋಧ ಪಕ್ಷದ ನಾಯಕರು, ಕಾರ್ಮಿಕ ಸಚಿವರು ಶಿವರಾಮ ಹೆಬ್ಬಾರ್, ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ನಡೆಸಿದ್ದರು, ಆದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಟೊಯೊಟಾ ಕಂಪನಿಯ ಆಡಳಿತ ಮಂಡಳಿ ತನ್ನ ಹಠಮಾರಿ ಧೋರಣೆ ಬಿಡಬೇಕು ಎಂದು ಶ್ರೀಗಳು ತಿಳಿಸಿದರು.
ತಕ್ಷಣವೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ, ಕಾರ್ಮಿಕ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ ನಂಜಾವದೂತ ಶ್ರೀಗಳು, ಈ ನಾಡಿನಲ್ಲಿ ಸ್ಥಾಪಿತವಾದ ಕಾರ್ಖಾನೆಗಳು ಈ ನೆಲದ ಕಾನೂನಿಗೆ ಗೌರವ ನೀಡಬೇಕು ಎಂದು ಕಂಪನಿ ಆಡಳಿತ ಮಂಡಳಿಗೆ ತಿಳಿ ಹೇಳಿದರು.