ರೈತರಿಗೆ ಉಪಟಳ: ಆನೆಗಳನ್ನು ಕಾಡಿಗೆ ಓಡಿಸಲು ಮುಂದಾದ ಅರಣ್ಯ ಇಲಾಖೆ
ರಾಮನಗರ, ಜೂನ್ 9: ರಾಮನಗರ ಜಿಲ್ಲೆಯಲ್ಲಿ ಮಾನವ ಹಾಗೂ ಕಾಡುಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗಿದೆ. ಕೋವಿಡ್ ಮಹಾಮಾರಿ ಆರ್ಭಟಕ್ಕೆ ಸಿಕ್ಕು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೇ ಕಳೆದ 5 ತಿಂಗಳಿನಿಂದ ನಿರಂತರವಾಗಿ ಆನೆಗಳು ರೈತರ ಜಮೀನುಗಳ ಮೇಲೆ ದಾಳಿ ಮಾಡಿ ಫಸಲನ್ನು ನಾಶ ಮಾಡುತ್ತಿವೆ.
ಕೊರೊನಾ ಸೋಂಕಿನ ಭೀತಿಯಿಂದ ತತ್ತರಿಸಿರುವ ರೈತರಿಗೆ ಕಾಡಾನೆಗಳ ಹಾವಳಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ, ಜಾನುವಾರು, ಆಸ್ತಿ ಮುಂತಾದವುಗಳ ಮೇಲೆ ದಾಳಿ ಮಾಡಿ ಹಾನಿ ಉಂಟುಮಾಡಿವೆ.
ಕಾವೇರಿ ವನ್ಯಜೀವಿ ವಲಯದಿಂದ ನಾಡಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳ ದಂಡು, ನಿರಂತರವಾಗಿ ರೈತ ಜಮೀನಿನಗಳ ಮೇಲೆ ದಾಳಿ ಮಾಡಿ ಶ್ರಮದಿಂದ ಬೆಳೆಸಿದ್ದ ಫಸಲನ್ನು ನಾಶ ಮಾಡುತ್ತಿವೆ. ಆನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಗೆ ಜನರು ಆಗ್ರಹಿಸಿದ್ದಾರೆ.
ಜನರ ಸಂಚಾರಕ್ಕೆ ನಿರ್ಬಂಧಿಸಿದ ಅರಣ್ಯ ಇಲಾಖೆ
ಆನೆಗಳ ದಾಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆಯಲ್ಲಿ ಆನೆಗಳನ್ನು ಜಿಲ್ಲೆಯ ಗಡಿಯಂಚಿನಲ್ಲಿರುವ ಕಾವೇರಿ ವನ್ಯಜೀವಿಧಾಮ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಪುನಃ ಓಡಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಕಾರ್ಯಾಚರಣೆಯ ಸಮಯದಲ್ಲಿ ಜನರು ಸಂಚಾರ ಮಾಡದಂತೆ ಎಚ್ಚರಿಕೆ ನೀಡಿದೆ.
ರಾಮನಗರ ಅರಣ್ಯ ವಿಭಾಗ ಹಾಗೂ ಇತರೆ ವನ್ಯಜೀವಿ ವಿಭಾಗಗಳ ನುರಿತ ಸಿಬ್ಬಂದಿಗಳಿಂದ ಜೂನ್ 10, 11 ಹಾಗೂ 12 ಮೂರು ದಿನಗಳ ಕಾರ್ಯಚರಣೆಯನ್ನು ಹಮ್ಮಿಕೊಂಡಿದ್ದು, ಈ ಮೂರು ದಿನ ಕಾರ್ಯಚರಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಜನರ ಸಂಚಾರ ನಿರ್ಭಂದಿಸಿ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
Recommended Video
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿ, ವಿರೂಪಾಕ್ಷಿಪುರ ಹೋಬಳಿ ಹಾಗೂ ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ ಎಲ್ಲಾ ರೈತರು ಮತ್ತು ಸಾರ್ವಜನಿಕರು ಮೂರು ದಿನಗಳ ಕಾಲ ತಮ್ಮ ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ಹೊರಗೆ ಕಾಣಿಸದೆ, ಸಾರ್ವಜನಿಕವಾಗಿ ಓಡಾಡದೇ ಕಾರ್ಯಚರಣೆಗೆ ಸಹಕರಿಸಬೇಕು ಎಂದು ರಾಮನಗರ ಪ್ರಾದೇಶಿಕ ವಿಭಾಗ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.