ಸುಮಲತಾ ಬಿಜೆಪಿ ಸೇರ್ಪಡೆಗೆ ತಾಂತ್ರಿಕ ತೊಂದರೆ: ಸಿಪಿ ಯೋಗೀಶ್ವರ್
ರಾಮನಗರ ಜೂನ್ 3: ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಮಂಡ್ಯ ಸಂಸದೆ ಸುಮಲತಾ ಅವರಿಗೆ ಆಹ್ವಾನ ನೀಡಿದ್ದೇವೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ ಈಗ ಉಲ್ಟಾ ಹೊಡೆದಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, "ಸುಮಲತಾ ಅವರು ಬಿಜೆಪಿ ಪಕ್ಷದ ಜೊತೆ ಸೇರಲು ಸಾಧ್ಯವಿಲ್ಲ. ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲು ಆಗಲ್ಲ. ಹಾಗಾಗಿ ಸಂಸದೆ ಬೆಂಬಲಿಗರು ಮೊದಲ ಹಂತದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ" ಎಂದರು.
ಹೆಚ್. ಸಿ. ಬಾಲಕೃಷ್ಣರನ್ನು ಬಿಜೆಪಿಗೆ ಆಹ್ವಾನಿಸಿದ ಸಿ. ಪಿ. ಯೋಗೀಶ್ವರ್!
ನಗರದ ಕಲ್ಯಾಣ ಮಂಟಪದಲ್ಲಿ ಮೋದಿ ಸರ್ಕಾರದ ಎಂಟು ವರ್ಷಗಳ ಸಾಧನೆ ವಿವರಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗೀಶ್ವರ್, "ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಗೆ ಪಕ್ಷಾಂತರ ವಿರೋಧಿ ಕಾನೂನು ಅಡ್ಡ ಬರುತ್ತದೆ" ಎಂದು ವಿವರಿಸಿದರು.
"ಯಾವುದೇ ಶಾಸಕರಾಗಲಿ, ಸಂಸದರಾಗಲಿ ಸ್ವತಂತ್ರವಾಗಿ ಆಯ್ಕೆಯಾದ ಆರು ತಿಂಗಳುಗಳೊಳಗೆ ಯಾವುದಾದರು ಪಕ್ಷ ಸೇರ್ಪಡೆಯಾಗಬಹುದು, ನಂತರದಲ್ಲಿ ಅಧಿಕೃತವಾಗಿ ಸೇರ್ಪಡೆ ಸಾಧ್ಯವಿಲ್ಲ. ಪಕ್ಷಕ್ಕೆ ಬೆಂಬಲ ನೀಡಬಹುದು ಹಾಗಾಗಿ ಅವರ ಬೆಂಬಲಿಗರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ನಾವು ಸುಮಲತಾ ಅವರೊಂದಿಗೆ ಮಾತನಾಡಿದ್ದೇವೆ, ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಸುಮಲತಾ ಬೆಂಬಲಿಗ ಸಚ್ಚಿದಾನಂದ ಪಕ್ಷ ಸೇರ್ಪಡೆ ಆಗಲಿದ್ದಾರೆ. ಅಲ್ಲಿ ಸ್ಥಳೀಯ ಚುನಾವಣೆ ಇರುವ ಹಿನ್ನಲೆಯಲ್ಲಿ ಇತರರ ಪಕ್ಷ ಸೇರ್ಪಡೆ ತಡವಾಗಿದೆ" ಎಂದು ತಿಳಿಸಿದರು.
ಕುಮಾರಸ್ವಾಮಿ ಆ ಹೇಳಿಕೆ ಸಿ. ಪಿ. ಯೋಗೇಶ್ವರ್ಗೆ ಲಾಭವಾಗುತ್ತಾ?
ಮಂಡ್ಯ ಅಭಿವೃದ್ಧಿಗೆ ಸರ್ಕಾರ ಬದ್ದ; "ಮಂಡ್ಯದ ಮೈ ಷುಗರ್ ಸಕ್ಕರೆ ಕಾರ್ಖಾನೆ ಮತ್ತೆ ಪ್ರಾರಂಭವಾಗಬೇಕಿದೆ, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಹಾಗೂ ನೀರಾವರಿ ಯೋಜನೆಗಳ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿಗಳ ಮುಂದೆ ಸಂಸದೆ ಸುಮಲತಾ ಬೇಡಿಕೆ ಇಟ್ಟಿದ್ದಾರೆ. ಸಂಸದೆಯಾಗಿ ಅವರ ಕ್ಷೇತ್ರದ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದ್ದಾರೆ. ಮಂಡ್ಯ ಅಭಿವೃದ್ಧಿ ದೃಷ್ಟಿಯಿಂದ ಸುಮಲತಾ ಅವರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಮುಂದಿನ ದಿನಗಳಲ್ಲಿ ಸಂಸದೆ ಸುಮಲತಾ ಅವರು ಯಾವ ನಿರ್ಧಾರ ತೆಗೆದೆಕೊಳ್ಳುತ್ತಾರೆ? ಕಾದು ನೋಡೋಣ" ಎಂದು ಯೋಗೀಶ್ವರ್ ಹೇಳಿದರು.
ಬಿಜೆಪಿ ಮೂರನೇ ಅಭ್ಯರ್ಥಿಯಲ್ಲಿ ಗೆಲ್ಲುವ ವಿಶ್ವಾಸ: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್, "ಇದು ನಮ್ಮ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ, ಇದುವರೆಗೂ ಇಂತಹ ಬೆಳವಣಿಗೆ ನಡೆದಿಲ್ಲ. ಹಿಂದೆ ಕಾಂಗ್ರೆಸ್ -ಜೆಡಿಎಸ್ ಇಬ್ಬರೂ ಸೇರಿ ಸರ್ಕಾರ ಮಾಡಿದ್ದರು. ದೇವೇಗೌಡರನ್ನು ರಾಜ್ಯಸಭೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಸೇರಿ ಅವಿರೋಧವಾಗಿ ಕಳುಹಿಸಲಾಗಿತ್ತು" ಎಂದು ತಿಳಿಸಿದರು.