ರಾಮನಗರ: ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ವಿವಾಹಿತೆಯೊಡನೆ ಸ್ವಾಮೀಜಿ ಎಸ್ಕೇಪ್
ರಾಮನಗರ, ಆಗಸ್ಟ್ 14: ಮಾಗಡಿ ತಾಲೂಕಿನ ಸೋಲೂರ ಗದ್ದುಗೆ ಮಠದ ಸ್ವಾಮೀಜಿ ತಾವೂ ಪ್ರೀತಿಸುತ್ತಿದ್ದ ವಿವಾಹತೆ ಜೊತೆಗೆ ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.
ವಿವಾಹವಾಗಿ ಕೇವಲ ಒಂದೂವರೆ ತಿಂಗಳಾಗಿದ್ದ ಯುವತಿ ಜೊತೆ ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮೀಜಿ ಎಸ್ಕೇಪ್ ಆಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಮಠ ಬಿಟ್ಟು ಹೋಗುತ್ತಿರುವುದಾಗಿ ಹಾಗೂ ತಮ್ಮ ನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ಪರಾರಿಯಾಗಿದ್ದಾರೆ.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಅಪ್ತ ಬಿಜೆಪಿ ತೆಕ್ಕೆಗೆ!
ಶಿವಮಂತ ಸ್ವಾಮೀಜಿ ಕಳೆದ ಎರಡು ವರ್ಷಗಳ ಹಿಂದೆ ಮಠದ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು. ಈ ಹಿಂದೆ ಕಂಬಾಳು ಮಠದಲ್ಲಿರುವಾಗ ತಾವೂ ಪ್ರೇಮಾಂಕುರವಾಗಿದ್ದ ಮಹಿಳೆ ಜೊತೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ತಾವರೆಕೆರೆ ಪೋಲಿಸ್ ಠಾಣೆಯಲ್ಲಿ ಮಹಿಳೆ ನಾಪತ್ತೆ ಪ್ರಕರಣ ದಾಖಲಾಗಿದೆ. ಸ್ವಾಮೀಜಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿರುವ ಮಾಹಿತಿ ಇನ್ನೂ ಗೊತ್ತಾಗಿಲ್ಲ.
ಪತ್ರದಲ್ಲಿ ಏನಿದೆ?
"ನಾನು ನನ್ನ ಸ್ವಾಮೀಜಿ ಜೀವನ ತ್ಯಜಿಸುತ್ತಿದ್ದೇನೆ. ಕಾರಣ ನನ್ನ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈ ಕಾರಣವಾಗಿ ನಾನು ಇದನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೇನೆ. ನನಗೆ ಈ ಜೀವನ ಜಿಗುಪ್ಸೆ ಉಂಟು ಮಾಡಿದೆ. ಈ ಕಾರಣ ನಿಮಗೆಲ್ಲ ಗೊತ್ತಿದೆ ಅಂತ ಭಾವಿಸುತ್ತೇನೆ. ದಯವಿಟ್ಟು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಕಾವಿ ಬಟ್ಟೆಯನ್ನು ಬಿಚ್ಚಿದ ಮೇಲೆ ಮತ್ತೆಂದೂ ತೊಡುವುದಿಲ್ಲ"
"ಹಾಗೇನಾದರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನನ್ನ ಹೆಣವನ್ನು ನೀವು ನೋಡುತ್ತೀರಾ. ನಾನು ಕೇಳುವುದೇನೆಂದರೆ ನನ್ನನ್ನ ನನ್ನ ಪಾಡಿಗೆ ಬಿಟ್ಟು ಬಿಡಿ. ಎಲ್ಲೂ ಹೇಗೋ ನೆಮ್ಮದಿಯಗಿ ಇರುತ್ತೇನೆ. ಆದರೆ ಮತ್ತೆ ನನ್ನ ಈ ಜೀವನಕ್ಕೆ ತರಬೇಡಿ ತಂದಿದ್ದೇ ಆದರೆ ನೀವು ನನ್ನ ಸಾವನ್ನು ನೋಡಬೇಕಾಗುತ್ತದೆ. ದಯವಿಟ್ಟು ನನ್ನನ್ನು ಎಲ್ಲರೂ ಕ್ಷಮಿಸಿ, ನನ್ನನ್ನು ಮರೆತುಬಿಡಿ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.