ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆ ಮೈತ್ರಿ; ದೇವೇಗೌಡರು ಬಂದ ಬಳಿಕ ತೀರ್ಮಾನ!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 01; "ಎಚ್. ಡಿ. ದೇವೇಗೌಡರು ದೆಹಲಿಯಿಂದ ಬಂದ ಮೇಲೆ ವಿಧಾನ ಪರಿಷತ್ ಚುನಾವಣೆಯ ಮೈತ್ರಿ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಾಸ್ವಾಮಿ ಹೇಳಿದರು.

ಬುಧವಾರ ಬಿಡದಿಯ ತೋಟದ ಮನೆಯಲ್ಲಿ ರಾಮನಗರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತದಾರರ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜತೆ ಕುಮಾರಸ್ವಾಮಿ ಮಾತನಾಡಿದರು.

ಎಂಎಲ್‌ಸಿ ಸ್ಥಾನಕ್ಕೆ ಜೆಡಿಎಸ್ ನಾಯಕನ ರಾಜೀನಾಮೆ ಎಂಎಲ್‌ಸಿ ಸ್ಥಾನಕ್ಕೆ ಜೆಡಿಎಸ್ ನಾಯಕನ ರಾಜೀನಾಮೆ

"ಜೆಡಿಎಸ್‌ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪನವರು ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನವರು ನಮಗೆ ಜೆಡಿಎಸ್‌ ಪಕ್ಷದ ಮತಗಳ ಅಗತ್ಯವಿಲ್ಲ. ಅವರ ಜತೆ ಹೊಂದಾಣಿಕೆ ಪ್ರಶ್ನೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ" ಎಂದರು.

ಜೆಡಿಎಸ್ ಬೆಂಬಲ ಕೇಳಿದ ಬಿಎಸ್‌ವೈ; ಸೋಮಶೇಖರ್ ಹೇಳಿದ್ದೇನು?ಜೆಡಿಎಸ್ ಬೆಂಬಲ ಕೇಳಿದ ಬಿಎಸ್‌ವೈ; ಸೋಮಶೇಖರ್ ಹೇಳಿದ್ದೇನು?

"ಬೇಡ ಎಂದವರ ಮನೆ ಬಾಗಿಲಿಗೆ ಹೋಗಲಿಕ್ಕೆ ಆಗುತ್ತದೆಯೇ?. ಹೀಗಾಗಿ ಯಡಿಯೂರಪ್ಪ ಅವರ ಮನವಿ ಬಗ್ಗೆ ಏನು ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ಶೀಘ್ರವೇ ನಿರ್ಧಾರ ಮಾಡುತ್ತೇವೆ" ಎಂದು ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.

ಪರಿಷತ್ ಚುನಾವಣೆ; ನಾಮಪತ್ರ ವಾಪಸ್ ಪಡೆದ ಜೆಡಿಎಸ್ ಅಭ್ಯರ್ಥಿ!ಪರಿಷತ್ ಚುನಾವಣೆ; ನಾಮಪತ್ರ ವಾಪಸ್ ಪಡೆದ ಜೆಡಿಎಸ್ ಅಭ್ಯರ್ಥಿ!

ಮೋದಿ, ದೇವೇಗೌಡರ ಭೇಟಿ

ಮೋದಿ, ದೇವೇಗೌಡರ ಭೇಟಿ

ಪ್ರಧಾನಿ ನರೇಂದ್ರ ಮೋದಿ ಜತೆ ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, "ಮೊದಲಿನಿಂದಲೂ ಪ್ರಧಾನಮಂತ್ರಿಗಳು ಮತ್ತು ದೇವೇಗೌಡರ ನಡುವೆ ಉತ್ತಮ ಬಾಂಧವ್ಯವಿದೆ. ಗೌಡರ ಬಗ್ಗೆ ಮೋದಿ ಅವರಿಗೆ ವಿಶೇಷ ಗೌರವವಿದೆ. ಅವರಿಬ್ಬರೂ ಭೇಟಿಯಾಗುವುದು ಹೊಸದೇನಲ್ಲ. ನಾನು ಸಿಎಂ ಆಗಿದ್ದಾಗ ಭೇಟಿಯಾಗಿದ್ದ ಸಂದರ್ಭದಿಂದಲೂ ನನಗೆ ಗೊತ್ತಿದೆ" ಎಂದರು.

"ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಹಾಸನಕ್ಕೆ ಐಐಟಿ ತರುವ ವಿಚಾರದ ಬಗ್ಗೆ ಮೋದಿ ಅವರ ಜತೆ ಚರ್ಚೆ ನಡೆಸಲು ಹೋಗಿದ್ದಾರೆಂಬ ಮಾಹಿತಿ ಗಮನಿಸಿದ್ದೇನೆ. ವಿಧಾನ ಪರಿಷತ್‌ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಿರಬಹುದು. ಗೌಡರು ದೆಹಲಿಯಿಂದ ವಾಪಸ್‌ ಬಂದ ಮೇಲೆ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡುವೆ" ಎಂದು ತಿಳಿಸಿದರು.

ದೂರು ಯಾಕೆಂದು ಗೊತ್ತಿಲ್ಲ

ದೂರು ಯಾಕೆಂದು ಗೊತ್ತಿಲ್ಲ

"ಬಳ್ಳಾರಿ ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯ ಬಗ್ಗೆ ಕಾಂಗ್ರೆಸ್‌ ವತಿಯಿಂದ ದೂರು ನೀಡಲಾಗಿದೆ. ಯಾಕಾಗಿ ದೂರು ನೀಡಲಾಗಿದೆಯೋ? ನನಗೆ ಗೊತ್ತಿಲ್ಲ. ನಾನೆಂದೂ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸಿದವನಲ್ಲ. ನಮ್ಮ ಕಾರ್ಯಕರ್ತರ ವಿಶ್ವಾಸದಲ್ಲಿ ಮಾತ್ರ ಕೆಲಸ ಮಾಡಿದವನು ನಾನು. ಹೀಗಾಗಿ ವೈಯಕ್ತಿಕ ದ್ವೇಷದ ಮೇಲೆ ಆ ಅಧಿಕಾರಿ ವಿರುದ್ಧ ದೂರು ಕೊಟ್ಟಿರಬಹುದು. ಸತ್ಯಾಂಶ ಏನೆಂಬುದು ತನಿಖೆಯಿಂದ ಹೊರಬರಲಿ. ನಮ್ಮ ಅಭ್ಯರ್ಥಿಗೆ ನಮ್ಮ ಕಾರ್ಯಕರ್ತರು ಮತ ಹಾಕಿಸಲಿಕ್ಕೆ ಸಾಧ್ಯವೋ ಅಥವಾ ಅಧಿಕಾರಿ ಹಾಕಿಸಲಿಕ್ಕೆ ಸಾಧ್ಯವೋ?" ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಕನಕಪುರದಲ್ಲಿ ಗುಪ್ತ ಮತದಾರರು ಇದ್ದಾರೆ

ಕನಕಪುರದಲ್ಲಿ ಗುಪ್ತ ಮತದಾರರು ಇದ್ದಾರೆ

"ಕಳೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ನನ್ನ ನೇರ ಪಾತ್ರ ಇರಲಿಲ್ಲ. ಹಿಂದೆ ನಮ್ಮ ಪಕ್ಷದಲ್ಲಿದ್ದ ನಾಯಕರು ಜವಾಬ್ದಾರಿ ತೆಗೆದುಕೊಂಡು ಚುನಾವಣೆ ನಡೆಸಿದ್ದರು. ಈ ಬಾರಿ ಖುದ್ದು ನಾನೇ ಕೆಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಜತೆಗೆ ಮಾಗಡಿ ಶಾಸಕರಾದ ಮಂಜುನಾಥ್‌ ಹಾಗೂ ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡಿದ್ದಾರೆ" ಎಂದರು.

"ಕನಕಪುರ ಕ್ಷೇತ್ರಕ್ಕೂ ಹೆಚ್ಚಿನ ಗಮನ ಕೊಟ್ಟಿದ್ದೇವೆ. ಅಲ್ಲಿ ನಮ್ಮ ಪಕ್ಷಕ್ಕೆ ಗುಪ್ತ ಮತದಾರರು, ಅಂದರೆ ನಮ್ಮ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಆ ಭಾಗದಲ್ಲಿ ಮುಕ್ತ ಚುನಾವಣೆ ನಡೆಸಲು ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಬೇಕು" ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ದಿಕ್ಸೂಚಿ ಎಂದು ಹೇಳಲು ಆಗಲ್ಲ

ದಿಕ್ಸೂಚಿ ಎಂದು ಹೇಳಲು ಆಗಲ್ಲ

"ಈ ಪರಿಷತ್ ಚುನಾವಣೆ ಮುಂದಿನ 2023ರ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಈ ಚುನಾವಣೆಯ ಫಲಿತಾಂಶವು ಮುಂದಿನ ಚುನಾವಣೆಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲಿದೆ" ಎಂದು ಕುಮಾರಸ್ವಾಮಿ ಹೇಳಿದರು.

"ನಮ್ಮ ಪಕ್ಷಕ್ಕೆ ಅನೇಕ ಕ್ಷೇತ್ರಗಳಲ್ಲಿ ನೆಲೆ ಇದೆ. ಆದರೆ ಅದು ಚುನಾವಣೆ ಗೆಲ್ಲುವ ಮಟ್ಟದಲ್ಲಿ ಇಲ್ಲ. ಅದರ ಹೊರತಾಗಿ ಯಾರನ್ನು ಗೆಲ್ಲಿಸಬಹುದೆಂಬ ತೀರ್ಮಾನ ಮಾಡುವ ಶಕ್ತಿಯಂತೂ ಇದೆ. ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗುರಿ 123 ಸ್ಥಾನ. ಆ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕ್ರಮಗಳಿರುತ್ತವೆ" ಎಂದು ಅವರು ಸ್ಪಷ್ಟಪಡಿಸಿದರು.

ಪ್ರಕರಣದ ಸತ್ಯ ಹೊರಬರಲಿ

ಪ್ರಕರಣದ ಸತ್ಯ ಹೊರಬರಲಿ

"ಯಲಹಂಕದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ನನಗೆ ವಾಸ್ತವ ಅಂಶಗಳೇನು ಎನ್ನುವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸರಿಯಾದ ತನಿಖೆಯ ಮೂಲಕ ಸತ್ಯ ಆಚೆಗೆ ಬರಲಿ. ಒಂದು ವೇಳೆ ಹತ್ಯೆ ಸಂಚು ನಿಜವೇ ಆಗಿದ್ದರೆ ಕಠಿಣವಾಗಿ ಕ್ರಮ ಕೈಗೊಳ್ಳಬೇಕು" ಎಂದು ಕುಮಾರಸ್ವಾಮಿ ಆಗ್ರಹಿದರು.

"ರಾಜಕಾರಣವೇ ಬೇರೆ. ಆದರೆ ಅದರ ನೆಪದಲ್ಲಿ ಭೂ ವ್ಯವಹಾರವೋ ಅಥವಾ ಇನ್ನವುದೋ ವ್ಯವಹಾರಗಳನ್ನು ನಡೆಸಬೇಕಾದರೆ ಹತ್ಯೆ ಮಾಡುವಂಥ ಹಂತಕ್ಕೆ ಯಾರೂ ತೆಗೆದುಕೊಂಡು ಹೋಗಬಾರದು. ಸರಕಾರ ನಿರ್ಲಕ್ಷ್ಯ ಮಾಡಿದೇ ದಕ್ಷ ಅಧಿಕಾರಿಗಳನ್ನು ನೇಮಿಸಿ ತನಿಖೆ ಮಾಡಿಸಿ ಸತ್ಯವನ್ನು ಹೊರಗೆಳೆದು ಜನರ ಮುಂದೆ ಇಡಬೇಕು" ಎಂದರು.

Recommended Video

Nandi Hills ರಸ್ತೆಗಳ ಮರುನಿರ್ಮಾಣ , ಪ್ರವಾಸಿಗರು ಫುಲ್ ಖುಷ್ | Oneindia Kannada
ರಾಮನಗರ ನಮ್ಮ ಕುಟುಂಬದ ಕರ್ಮಭೂಮಿ

ರಾಮನಗರ ನಮ್ಮ ಕುಟುಂಬದ ಕರ್ಮಭೂಮಿ

"ಪಕ್ಷದ ಬಯಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ" ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ಕಾರ್ಯಕರ್ತರ ಒಲವು, ಪಕ್ಷದ ಆದೇಶ ಬಂದರೆ ಸ್ಪರ್ಧಿಸಲು ತಯಾರಿದ್ದೇನೆ ಎಂದು ಹೇಳಿದ್ದಾರೆ. ಅದು ಇನ್ನೂ ಎರಡು ವರ್ಷದ ಮಾತು" ಎಂದರು.

"ನಿಖಿಲ್‌ ರಾಮನಗರ ಅಥವಾ ಮಂಡ್ಯ ಇವೆರಡರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವುದಾದರೆ ರಾಮನಗರ ನಮ್ಮ ಕರ್ಮಭೂಮಿ. ನಮ್ಮ ಹೃದಯದಲ್ಲಿರುವ ನೆಲೆ. ಈ ಭೂಮಿ ಮೇಲೆ ಇರುವವರೆಗೂ ಇಲ್ಲೇ ಇರುತ್ತೇವೆಯಲ್ಲದೇ, ಭೂಮಿ ಮೇಲೆ ಮಣ್ಣಾದರೂ ಈ ಮಣ್ಣಲ್ಲೇ ಮಣ್ಣಾಗುವೆ. ‌‌‌ನಮ್ಮ ಮತ್ತು ರಾಮನಗರದ ನಡುವೆ ವಿಶೇಷ ಬಾಂಧವ್ಯವಿದೆ. ಅದನ್ನು ಅಳಿಸಲು ಯಾರಿದಂಲೂ ಸಾಧ್ಯವಿಲ್ಲ. ಉಸಿರಿರುವ ತನಕವಷ್ಟೇ ಅಲ್ಲ ಉಸಿರು ನಿಂತ ಮೇಲೆಯೂ ರಾಮನಗರವೇ ನಮ್ಮ ಕರ್ಮಭೂಮಿ ಆಗಿರುತ್ತದೆ" ಎಂದು ಹೇಳಿದರು.

English summary
After H. D. Deve Gowda return from Delhi we will take final decision on supporting BJP in legislative council election said former chief minister H. D. Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X