ವಿಶೇಷ ಸುದ್ದಿ: ನೆಚ್ಚಿನ ಗುರುವಿಗೆ ಬೆಳ್ಳಿ ಕಿರೀಟ ತೊಡಿಸಿ ಗುರುಭಕ್ತಿ ಮೆರೆದ ವಿದ್ಯಾರ್ಥಿಗಳು
ರಾಮನಗರ, ನವೆಂಬರ್ 30: ಮಕ್ಕಳಿಗೆ ತಿದ್ದಿ, ಬುದ್ದಿ ಕಲಿಸಿದ ನೆಚ್ಚಿನ ಗುರುವಿಗೆ ನಿವೃತ್ತಿ ದಿನದಂದು ವೃತ್ತಿ ಬದುಕಿನ ಕಿರುಚಿತ್ರ ನಿರ್ಮಾಣ ಮಾಡಿ, ಬೆಳ್ಳಿ ಕಿರೀಟ ತೊಡಿಸಿ, ಆತ್ಮೀಯವಾಗಿ ಸನ್ಮಾನಿಸಿ, ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡುವ ಮೂಲ ಗುರು ಭಕ್ತಿಯನ್ನು ಮೆರೆದ ಘಟನೆ ಪಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇದೇ ನವೆಂಬರ್ 30ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದುತ್ತಿರುವ ಪಾದರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ಕೆ. ಬೈರಲಿಂಗಯ್ಯರಿಗೆ ಗ್ರಾಮಸ್ಥರು ಮತ್ತು ಶಿಕ್ಷಕರು ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.
ರಾಮನಗರ ತಾಲ್ಲೂಕಿನ ಪಾದರಹಳ್ಳಿ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೆಚ್ಚಿನ ಶಿಕ್ಷಕನ್ನು ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಾಗೂ ಶಾಲೆಯ ಮಕ್ಕಳು ಶಿಕ್ಷಕ ಆರ್.ಕೆ. ಬೈರಲಿಂಗಯ್ಯರನ್ನು ಸನ್ಮಾನಿಸಿ ತಮ್ಮ ಅಭಿಮಾನವನ್ನು ಮೆರೆದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಮುಖ್ಯದ್ವಾರದಿಂದ ವೇದಿಕೆಯವರೆಗೆ ಪ್ರಮುಖ ರಸ್ತೆಯಲ್ಲಿ ಆರ್.ಕೆ. ಬೈರಲಿಂಗಯ್ಯರನ್ನು ವಿದ್ಯಾರ್ಥಿನಿಯರ ಪೂರ್ಣಕುಂಭ, ಜನಪದ ಕಲಾತಂಡಗಳೊಂದಿಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಬೈರಲಿಂಗಯ್ಯ, ನನ್ನ 37 ವರ್ಷಗಳ ಸುದೀರ್ಘ ಸರ್ಕಾರಿ ಸೇವೆಯ ಅವಧಿಯಲ್ಲಿ ತಾಲ್ಲೂಕಿನ ಪಾದರಹಳ್ಳಿ ಪ್ರೌಢಶಾಲೆಯಲ್ಲಿ 9 ವರ್ಷ ಶಿಕ್ಷಕರಾಗಿ ಮಾಡಿದ ಸೇವೆ ಅವಿಸ್ಮರಣೀಯ ಹಾಗೂ ಇಲ್ಲಿನ ಜನರು ತೋರಿದ ನಿಷ್ಕಲ್ಮಷ ಪ್ರೀತಿಗೆ ಚಿರಋಣಿಯಾಗಿದ್ದೇನೆ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ತಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಮಟ್ಟದಲ್ಲಿ ಗ್ರಾಮಸ್ಥರು ತೋರಿದ ಪ್ರೀತಿಯನ್ನು ಎಂದಿಗೂ ಮರೆಯಲಾಗದು. ಮೂರು ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಗ್ರಾಮೀಣ ಪ್ರದೇಶದ ಶಾಲೆ ಆಯ್ಕೆ ಮಾಡಿಕೊಂಡಿದ್ದೆನು. ಅದರಂತೆ ಪಾದರಹಳ್ಳಿ ಶಾಲೆಯನ್ನು ಆಯ್ಕೆ ಮಾಡಿಕೊಂಡೆ ಅದು ನನಗೆ ಬಹಳ ತೃಪ್ತಿ ತಂದಿದೆ ಎಂದರು.
ನಾನು ಈ ಶಾಲೆಯ ಮುಖ್ಯೋಪಾಧ್ಯಾಯನಾಗಿ ಸೇವೆ ಸಲ್ಲಿಸಿದ 9 ವರ್ಷದ ಅವಧಿಯಲ್ಲಿ ಶಾಲಾ ಅಭಿವೃದ್ಧಿಗೆ 45 ಲಕ್ಷ ರೂ. ಅನುದಾನ ತರಲಾಯಿತು, ರಂಗಮಂದಿರ ನಿರ್ಮಾಣ ಕಾರ್ಯ ಎಲ್ಲರ ಸಹಕಾರದಿಂದ ನಡೆದಿದೆ ಎಂದು ಸ್ಮರಿಸಿದರು.
ಬಿಆರ್ಪಿ ಸಂಪತ್ಕುಮಾರ್ ಅಭಿನಂದಿತರಾದ ಬಗ್ಗೆ ಮಾತನಾಡಿ, ಬೈರಲಿಂಗಯ್ಯನವರು ತಮ್ಮ ಸರ್ಕಾರಿ ಸೇವಾ ಜೀವನದ ಉದ್ದಕ್ಕೂ, ಕಾಯಾ, ವಾಚ, ಮನಸಾ ಪ್ರಾಮಾಣಿಕವಾದ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ತಮ್ಮ ಮೂವತ್ತೇಳು ವರ್ಷಗಳ ಸೇವಾವಧಿಯಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿ ದಾರಿ ದೀಪವಾಗಿದ್ದಾರೆ. ತಮ್ಮ ಆದರ್ಶ ವ್ಯಕ್ತಿತ್ವ ಮೂಲಕ ವಿದ್ಯಾರ್ಥಿ ವೃಂದ ಮಾತ್ರವಲ್ಲ, ಸಹೋದ್ಯೋಗಿಗಳು, ನಾಗರಿಕರು ಹಾಗೂ ಅವರ ಒಡನಾಟಕ್ಕೆ ಬಂದ ಎಲ್ಲರ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದ್ದಾರೆ ಎಂದರು.
ಶಿಕ್ಷಕ ಆರ್.ಕೆ. ಬೈರಲಿಂಗಯ್ಯನವರು ಸೇವೆಯಿಂದ ನಿವೃತ್ತಿ ಪಡೆದಿರಬಹುದು. ಅದರೆ, ಪ್ರವೃತ್ತಿಯಲ್ಲಿ ಇನ್ನೂ ಸಕ್ರಿಯವಾಗಿ ಚಟುವಟಿಕೆಗಳಿಂದ ಇದ್ದಾರೆ. ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಆರ್.ಕೆ. ಬೈರಲಿಂಗಯ್ಯನವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ಸಾಹದಲ್ಲಿ ಪಾಲ್ಗೊಳ್ಳಲಿ ಎಂದು ಶುಭಾಶಯ ಕೋರಿದರು.
ತಹಸೀಲ್ದಾರ್ ಎಂ. ವಿಜಯಕುಮಾರ್ ಹಾಗೂ ಡಿಡಿಪಿಐ ಸೋಮಶೇಖರಯ್ಯ ಮಾತನಾಡಿ, ಸರ್ಕಾರಿ ನೌಕರರಾಗಿ ಹಾಗೂ ನೌಕರರ ಸಂಘದಲ್ಲಿ ವಿವಿಧ ಹುದ್ದೆ ಅಲಂಕರಿಸಿ, ಸರ್ಕಾರಿ ನೌಕರರ ಹಿತರಕ್ಷಣೆ ಮಾಡುವಲ್ಲಿ ಆರ್.ಕೆ. ಬೈರಲಿಂಗಯ್ಯ ಮಾಡಿದ ಹೋರಾಟದ ಹಾದಿಯನ್ನು ಮೆಲುಕು ಹಾಕಿ, ದಕ್ಷತೆ, ಪ್ರಾಮಾಣಿಕತೆ ಹಾಗೂ ಸ್ನೇಹಮಯಿಯಾಗಿ ಸೇವೆ ಸಲ್ಲಿಸುವ ಮೂಲಕ ನಮ್ಮ ಗ್ರಾಮದಲ್ಲಿ ಅಚ್ಚಳಿಯದ ಛಾಪು ಮೂಡಿಸಿ, ಅನೇಕ ನೆನಪುಗಳನ್ನು ಬಿಟ್ಟು ಸೇವೆಯಿಂದ ನಿವೃತ್ತಿ ಪಡೆಯುತ್ತಿದ್ದಾರೆ. ಅವರ ಮುಂದಿನ ನಿವೃತ್ತ ಜೀವನ ನೆಮ್ಮದಿ, ಆರೋಗ್ಯ ಹಾಗೂ ಸಮೃದ್ಧತೆಯಿಂದ ಕೂಡಿರಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಆರ್.ಕೆ. ಬೈರಲಿಂಗಯ್ಯ ವ್ಯಕ್ತಿತ್ವ ಹಾಗೂ ಸಾಧನೆ ಕುರಿತ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಆರ್ಕೆಬಿ ಅವರ ಸಾಧನೆ ಹಾಗೂ ಜನಪರ ಸೇವೆಗೆ ನೆರೆದಿದ್ದ ವಿದ್ಯಾರ್ಥಿ ವೃಂದ, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಕರತಾಡನ ಮಾಡಿದರು.
ಪಾದರಹಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೇವೆ ನಡುವೆಯೇ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ಸಂಘಟನೆಗಳಲ್ಲಿ ತೊಡಗಿಕೊಂಡು ಸಾವಿರಾರು ವೃತ್ತಿ ಬಂಧುಗಳ ಕಷ್ಟ ಸುಖದಲ್ಲಿ ಭಾಗಿಯಾಗಿ, ಎಲ್ಲರ ಮನೆ ಗೆದ್ದ ಶಿಕ್ಷಕ ಬೈರಲಿಂಗಯ್ಯ ಅವರನ್ನು ಸರ್ಕಾರಿ ನೌಕರರು ಸನ್ಮಾನಿಸಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ, ಡಯಟ್ನ ಹಿರಿಯ ಉಪನ್ಯಾಸಕ ಮುನಿಕೆಂಪೇಗೌಡ, ಶಿಲ್ಹಾಂಧರ ರೆಸಾರ್ಟ್ನ ವ್ಯವಸ್ಥಾಪಕ ನಿರ್ದೇಶಕ ಸಾ.ನಾ.ರಮೇಶ್, ಗ್ರಾಮಸ್ಥರಾದ ಶ್ರೀಹರಿ, ಮೋಹನ್ರಾಮ್ ಮನ್ನಾರ್, ಸತೀಶ್, ರವಿ, ಮಹದೇವ, ಪುಟ್ಟೇಗೌಡ, ಶ್ರೀಕಂಠ, ಚಂದ್ರು, ಚರಣ್, ಅನಿಷ್, ಮಹದೇವ್, ಮೂರ್ತಿನಾಯ್ಕ, ರವೀಂದ್ರ, ಚಂದ್ರಯ್ಯ, ಶಿಕ್ಷಕರಾದ ಸುಶ್ಮಾ, ರವಿ, ಸಾಯಿದಾಬಾನು, ರಂಗಪ್ಪ, ಸುಪ್ರಿಯಾ, ಸುನಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ವಿದ್ಯಾರ್ಥಿಗಳು, ಸ್ನೇಹಿತರು, ಅಭಿಮಾನಿಗಳು ಆರ್ಕೆಬಿಯವರನ್ನು ಸನ್ಮಾನಿಸಿದರು.
Recommended Video