ರಮೇಶ್ ಜಾರಕಿಹೊಳಿಗೆ ಪೊರಕೆ ಸ್ವಾಗತ ಮಾಡುವುದಾಗಿ ಎಚ್ಚರಿಸಿದ ಕಾಂಗ್ರೆಸ್ ಕಾರ್ಯಕರ್ತೆಯರು
ರಾಮನಗರ, ಮಾರ್ಚ್ 29: ಜಿಲ್ಲೆಯ ಕನಕಪುರ ಕ್ಷೇತ್ರದ ಮಹಿಳೆಯರು ಸ್ವಾಭಿಮಾನಿಗಳು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂದರೆ ಇಲ್ಲಿನ ಮಹಿಳೆಯರು ಪೊರಕೆಯಿಂದ ಸ್ವಾಗತ ಮಾಡುತ್ತಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ರೋಹಿಣಿ ಎಚ್ಚರಿಕೆ ನೀಡಿದ್ದಾರೆ.
ಕನಕಪುರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ""ಮಾನ್ಯ ಜಾರಕಿಹೊಳಿ ಅವರೇ, ನಮ್ಮ ಕ್ಷೇತ್ರ ಪವಿತ್ರವಾದದ್ದು ನೀವು ನಮ್ಮ ಕ್ಷೇತ್ರಕ್ಕೆ ಕಾಲಿಟ್ಟು ಅಪವಿತ್ರ ಮಾಡಬೇಡಿ, ಒಂದು ವೇಳೆ ಕ್ಷೇತ್ರಕ್ಕೆ ಬರೋದಾದರೆ ಸಾವಿರ ಸಾರಿ ಯೋಚನೆ ಮಾಡ್ಕೊಂಡು ಬರಬೇಕು'' ಎಂದು ಎಚ್ಚರಿಸಿದರು.
ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಭವನದೆದುರು ಪ್ರತಿಭಟನೆ
ಇನ್ನು ಎಂಎಲ್ಸಿ ರವಿ ಮಾತನಾಡಿ, ನೀರಾವರಿ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಇಲಾಖೆ ಕೆಲಸ ಮಾಡು ಅಂದ್ರೆ ಲಜ್ಜೆಗೆಟ್ಟ ಕೆಲಸ ಮಾಡಿ ಮಾನ ಮಾರ್ಯದೆ ಇಲ್ಲದೆ ಜಾರಕಿಹೊಳಿ ತಾನು ಮಾಡಿದ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿಡಿಯಲ್ಲಿ ಇರುವವರು ಜಾರಕಿಹೊಳಿ ನಾನಲ್ಲ ಅಂದ ಮೇಲೆ, ಸಿಡಿಯಲ್ಲಿ ಇರುವ ಆ ಜಾರಕಿಹೊಳಿ ಯಾರು ಎಂದ ಅವರು, ಎಸ್ಐಟಿ ಅಧಿಕಾರಿಗಳು ನಕಲಿ ಸಿಡಿ ಬಗ್ಗೆ ತನಿಖೆ ಮಾಡುತ್ತಿದ್ದೊರೊ ಇಲ್ಲಾ ಸಿಡಿ ಹೊರ ತಂದವರು ಯಾರು ಅಂತಾ ತನಿಖೆ ನಡೆಸುತ್ತಿದ್ದಾರಾ ಗೊತ್ತಿಲ್ಲ ಎಂದು ಎಸ್ಐಟಿ ಕಾರ್ಯವೈಖರಿಯನ್ನು ಪ್ರಶ್ನಿಸಿದರು.
ಸಾಹುಕಾರ್ ಎಂದು ತಮ್ಮ ದುರಹಂಕಾರದಲ್ಲಿ ರಮೇಶ್ ಜಾರಕಿಹೊಳಿ ನಮ್ಮ ನಾಯಕರ ವಿರುದ್ಧ ಮಾತನಾಡಿದ್ದಾರೆ, ಜಾರಕಿಹೊಳಿ ಅವರು ಕನಕಪುರದಲ್ಲಿ ಡಿಕೆಶಿ ಅವರನ್ನು ಸೋಲಿಸುತ್ತೇನೆ ಎಂದು ಹೇಳಿದ್ದಾರೆ, ಅವರಿಗೆ ತಾಕತ್ತು ಇದ್ದರೆ ಕನಕಪುರಕ್ಕೆ ಬಂದು ಸ್ಪರ್ಧೆ ಮಾಡಲಿ ಅಂತಾ ಎಸ್.ರವಿ ಸವಾಲು ಹಾಕಿದರು.
ರಮೇಶ್ ಜಾರಕಿಹೊಳಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿರುವ ಸಂತ್ರಸ್ತೆಯನ್ನು ಕೊಲೆ ಮಾಡುವ ಹುನ್ನಾರ ನಡೆಸಿದ್ದಾರೆ, ಆದ್ದರಿಂದ ರಮೇಶ್ ಜಾರಕಿಹೊಳಿಯನ್ನು ತಕ್ಷಣವೇ ಬಂಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಸರ್ಕಾರವನ್ನು ಒತ್ತಾಯಿಸಿದರು.