ಎಸ್ಆರ್ಎಸ್ ಟ್ರಾವೆಲ್ಸ್ ಮಾಲೀಕ ರಾಜಶೇಖರ್ ಕೊರೊನಾಗೆ ಬಲಿ
ರಾಮನಗರ, ಮೇ 22: ದೇಶದ ಸಾರಿಗೆ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದ ಎಸ್ಆರ್ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಟಿ ರಾಜಶೇಖರ್ (78) ಶುಕ್ರವಾರ ನಿಧನರಾದರು.
ರಾಮನಗರ ಜಿಲ್ಲೆ ಮಾಗಡಿ ಮೂಲದ ಕೆ.ಟಿ ರಾಜಶೇಖರ್, 1943ರ ಸೆ.17ರಂದು ಜನಿಸಿದ್ದರು. ಡಿಪ್ಲೊಮಾ ಇನ್ ಆಟೋಮೊಬೈಲ್ ವ್ಯಾಸಂಗ ಮಾಡಿದ ಅವರು, ಹಲವು ಉದ್ಯೋಗದ ನಂತರ ದೇಶದ ಪ್ರಮುಖ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿರುವ ಎಸ್ಎಆರ್ಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಯನ್ನು 1971ರಲ್ಲಿ ಸ್ಥಾಪಿಸಿದರು.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಕೆ.ಟಿ.ರಾಜಶೇಖರ್ ಇಳಿವಯಸ್ಸಿನಲ್ಲೂ ಚಟುವಟಿಕೆಯಿಂದ ಇರುತ್ತಿದ್ದರು. ಕಳೆದ 10 ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶುಕ್ರವಾರ (ಮೇ 21) ಬೆಳಿಗ್ಗೆ ಮೃತರಾದರು.
ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಕೆ.ಟಿ ರಾಜಶೇಖರ್, ಆರಂಭದಲ್ಲಿ ಟೂರಿಸ್ಟ್ ಬುಕ್ಕಿಂಗ್ ಏಜೆಂಟ್, ಟ್ರಾವೆಲ್ ಏಜೆಂಟ್ ಹೀಗೆ ಹಲವು ರೀತಿಯ ಕೆಲಸಗಳನ್ನು ಮಾಡಿದ್ದರು.
ಕೇವಲ ಒಂದು ಬಸ್ ಮೂಲಕ ಆರಂಭಿಸಿದ್ದ ಎಸ್ಎಆರ್ಸ್ ಸಂಸ್ಥೆ ಇದೀಗ 3 ಸಾವಿರಕ್ಕೂ ಹೆಚ್ಚಿನ ಬಸ್ಗಳನ್ನು ಹೊಂದಿದೆ. ನಾಲ್ಕು ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ, ನೂರಾರು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದೆ.
ಬೆಂಗಳೂರು ಎಸ್ಎಆರ್ಸ್ನ ಕೇಂದ್ರ ಕಚೇರಿಯಾಗಿದ್ದರೂ ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದ ಮುಂಬೈ, ಆಂಧ್ರಪ್ರದೇಶದ ವಿಜಯವಾಡ ಸೇರಿ ದೇಶದ ಇನ್ನಿತರ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಇದೀಗ ಎಸ್ಎಆರ್ಎಸ್ ಸಂಸ್ಥೆ 50ನೇ ವರ್ಷಕ್ಕೆ ಕಾಲಿಟ್ಟಿದ್ದು ಇದೇ ವೇಳೆ ತನ್ನ ಮಾಲೀಕನನ್ನು ಕಳೆದುಕೊಂಡಿದೆ.
Recommended Video
ಕೆ.ಟಿ.ರಾಜಶೇಖರ್ ಮಗಳು ಮೇಘ ಮತ್ತು ಅಳಿಯ ದೀಪಕ್ ಅವರನ್ನು ಅಗಲಿದ್ದಾರೆ. ಎಸ್ಆರ್ಎಸ್ ಟ್ರಾವೆಲ್ಸ್ ಸಂಸ್ಥೆ ಮುನ್ನಡೆಸಲು ಮಗಳು ಮತ್ತು ಅಳಿಯ, ರಾಜಶೇಖರ್ ಅವರಿಗೆ ನೆರವಾಗುತ್ತಿದ್ದರು. ಎಸ್ಎಆರ್ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ಇನ್ಫೋಸಿಸ್, ಅಪೋಲೋ, ಐಬಿಎಂ, ಡೆಲ್ ಸೇರಿ ಇನ್ನಿತರ ಸಂಸ್ಥೆಗಳು ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಎಸ್ಆರ್ಎಸ್ ಸಂಸ್ಥೆ ಭಾಜನವಾಗಿದೆ.