ರಾಮನಗರದಲ್ಲಿ ಶ್ರೀರಾಮುಲು ಸಭೆ; ಮಾಸ್ಕ್ ಧರಿಸದ ಆರೋಗ್ಯ ಸಚಿವರು
ರಾಮನಗರ, ಮಾರ್ಚ್ 28: ರಾಜ್ಯದಲ್ಲಿ ಕೊರೊನಾ ವೈರಸ್ ಸೋಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತ ಸರ್ಕಾರ ಎಲ್ಲರೂ ಮಾಸ್ಕ್ ಹಾಕಿಕೊಳ್ಳಿ ಎಂದು ಸಲಹೆ ನೀಡುತ್ತಿದೆ. ಆದರೆ ಈ ನಿಯಮವನ್ನು ಆರೋಗ್ಯ ಸಚಿವರೂ ಪಾಲಿಸಿಲ್ಲ.
ಆರೋಗ್ಯ ಸಚಿವ ಶ್ರೀರಾಮುಲು ಇಂದು ರಾಮನಗರ ಜಿಲ್ಲೆಗೆ ಭೇಟಿ ನೀಡಿದ್ದರು. ಕೊರೊನಾ ಸಂಬಂಧಿತ ಜಿಲ್ಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಸಚಿವ ಶ್ರೀರಾಮುಲು, ಸಂಸದ ಡಿ.ಕೆ.ಸುರೇಶ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಎಸ್.ಪಿ ಅನುಪ್ ಎ.ಶೆಟ್ಟಿ, ಸಿಇಒ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಕೆಮ್ಮಿನಲ್ಲಿ ಹೋದ ಮಾನ ಮಾಸ್ಕ್ ಹಾಕಿ ಕೊಂಡರೂ ಬರೋಲ್ಲಾ!
ಆದರೆ ಶ್ರೀರಾಮುಲು ಕಾರಿನಿಂದ ಇಳಿದು ಸಭೆ ನಡೆಸಿ ಮತ್ತೆ ಕಾರಿಗೆ ಬಳಿ ವಾಪಸ್ಸು ತೆರಳುವವರೆಗೂ ಮಾಸ್ಕ್ ಹಾಕಿಯೇ ಇರಲಿಲ್ಲ. ಇವರ ಜತೆಗೆ ಇದ್ದ ಜಿಲ್ಲಾಧಿಕಾರಿ ಅರ್ಚನಾ ಸೇರಿದಂತೆ ಎಸಿ ದಾಕ್ಷಾಯಿಣಿ, ಸಿಇಓ ಇಕ್ರಾಂ ಹಾಗೂ ಡಿಎಚ್ಓ ಡಾ.ನಿರಂಜನ್ ಸೇರಿದಂತೆ ಹಲವು ಅಧಿಕಾರಿಗಳು ಮಾಸ್ಕ್ ಧರಿಸಿಯೇ ಇರಲಿಲ್ಲ. ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಡಿ.ಕೆ.ಸುರೇಶ್, ಎಸ್.ಪಿ. ಅನುಪ್ ಶೆಟ್ಟಿ ಹಾಗೂ ಎಡಿಸಿ ಮಾಸ್ಕ್ ಧರಿಸಿ ನಿಯಮವನ್ನು ಪಾಲಿಸಿದ್ದರು.
ಸಭೆಯ ವೇಳೆ, ರಾಜ್ಯದಲ್ಲಿ ಈವರೆಗೆ 75 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ಶ್ರೀರಾಮುಲು ಮಾಹಿತಿ ನೀಡಿದರು. "ರಾಜ್ಯದ ಜನತೆಯ ಪ್ರಾಣ ರಕ್ಷಣೆಗೆ ಸರ್ಕಾರ ನಿಂತಿದೆ. ಅಧಿಕಾರಿಗಳು 24 ಗಂಟೆಗಳ ಕಾಲ ಕೆಲಸ ಮಾಡ್ತಿದ್ದಾರೆ. ಯಾರೂ ಹೊರಗೆ ಬರಬೇಡಿ, ಅವಶ್ಯಕತೆ ಇದರೆ ಮಾತ್ರ ಹೊರಗೆ ಹೋಗಿ" ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಒಟ್ಟು 134 ಜನರನ್ನು ನಿಗಾದಲ್ಲಿ ಇಡಲಾಗಿತ್ತು. ಇವರಲ್ಲಿ 77 ಮಂದಿಯನ್ನ ನಿಗಾದಲ್ಲಿಟ್ಟು, ಮನೆಗೆ ಕಳುಹಿಸಲಾಗಿದೆ. ಹೋಮ್ ಕ್ವಾರಂಟೈನ್ ಲ್ಲಿರುವವರು ಹೊರಗೆ ಬರದಂತೆ ಗಮನಿಸಲಾಗುತ್ತಿದೆ. ಜಿಲ್ಲೆಯಲ್ಲಿ 80 ಬೆಡ್ ಗಳ ಐಸೊಲೇಷನ್ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ ಎಂದರು. ರಾಮನಗರದ ವೈದ್ಯರು, ನರ್ಸ್ ಗಳಿಗೆ ನುರಿತ ವೈದ್ಯರ ಮೂಲಕ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.