ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ ನಿವಾಸಕ್ಕೆ ಪೊಲೀಸ್ ಭದ್ರತೆ
ರಾಮನಗರ, ಮಾರ್ಚ್ 4: ಸಾಮಾಜಿಕ ಹೋರಾಟಗಾರ ಹಾಗೂ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ದೂರುದಾರ ದಿನೇಶ್ ಕಲ್ಲಹಳ್ಳಿ ಅವರು ಕನಕಪುರ ಗ್ರಾಮಾಂತರ ಪೊಲೀಸರಿಗೆ ದೂರು ಕೊಟ್ಟ ಹಿನ್ನೆಲೆ, ಅವರ ನಿವಾಸದ ಎದುರು ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಇರುವ ದಿನೇಶ್ ಕಲ್ಲಹಳ್ಳಿ ನಿವಾಸಕ್ಕೆ ಕನಕಪುರ ಗ್ರಾಮಾಂತರ ಠಾಣೆಯ ಇಬ್ಬರು ಪೊಲೀಸ್ ಕಾನ್ ಸ್ಟೆಬಲ್ ಸಿಬ್ಬಂದಿಗಳಿಂದ ಭದ್ರತೆ ಒದಗಿಸಲಾಗಿದೆ.
ಜಾರಕಿಹೊಳಿ ರಾಜೀನಾಮೆ: ಸಿಎಂಗೆ ಅಭಿನಂದನೆ ಸಲ್ಲಿಸಿದ ದೂರುದಾರ
ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ತಮಗೆ ಬೆದರಿಕೆ ಕರೆ ಹಾಗೂ ಅಪರಿಚಿತ ವ್ಯಕ್ತಿಗಳು ಮನೆ ಮುಂದೆ ಓಡಾಡುತ್ತಿದ್ದಾರೆ, ಆದ್ದರಿಂದ ಸೂಕ್ತ ಭದ್ರತೆ ಒದಗಿಸುವಂತೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ದಿನೇಶ್ ಅವರ ದೂರಿನ ಅನ್ವಯ ಮನೆ ಮುಂದೆ ಪೊಲೀಸ್ ಇಲಾಖೆ ಭದ್ರತೆ ಕಲ್ಪಿಸಿದೆ.
ದಿನೇಶ್ ಕಲ್ಲಹಳ್ಳಿ ಅವರಿಗೆ ಬೆದರಿಕೆ ಕರೆ ಬಂದಿದ್ದು, ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ ಎಂದು ಆರೋಪಿಸಲಾಗಿದೆ. 990****472 ನಂಬರಿನಿಂದ ಬೆದರಿಕೆ ಹಾಕುವ ರೀತಿಯಲ್ಲಿ ಕರೆ ಬಂದಿದ್ದು, ಯಾಕೆ ವಿಡಿಯೋ ಹಾಕಿದಿರಿ?, ಯಾಕೆ ದೂರು ಕೊಟ್ಟಿದ್ದೀರಿ? ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.
ನೀವು ಕರೆ ಮಾಡಿರುವುದು ಸಮಂಜಸವಲ್ಲ, ಬೆದರಿಸುತ್ತಿದ್ದೀರ ಎಂದು ದಿನೇಶ್ ಹೇಳಿದ್ದಾರೆ. ಕಾನೂನು ಬದ್ಧವಾಗಿ ಹೋರಾಟ ಮಾಡ್ತಿದ್ದೀನಿ. ನೀವು ಕೇಳುವ ರೀತಿ ಇದಲ್ಲ, ನನಗೆ ಧಮ್ಕಿ ಹಾಕಬೇಡಿ ಎಂದು ಹೇಳಿ ದಿನೇಶ್ ಕಲ್ಲಹಳ್ಳಿ ಕಾಲ್ ಕಟ್ ಮಾಡಿದ್ದಾರೆ.
ಇನ್ನು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವಿಚಾರಣೆಗೆ ಗೈರು ಹಾಜರಾಗಿದ್ದು, ಮಾ.9ರಂದು ವಿಚಾರಣೆಗೆ ಬರುವುದಾಗಿ ದಿನೇಶ್ ಕಲ್ಲಹಳ್ಳಿ ಪೊಲೀಸ್ ಅಧಿಕಾರಿಗೆ ಪತ್ರ ಬರೆದಿದ್ದಾರೆ.
Recommended Video
ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಬೇಕಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಮಾ.9ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರ ಬರೆದಿದ್ದು, ವಾಟ್ಸಪ್ ಮೂಲಕ ದಿನೇಶ್ ಕಲ್ಲಹಳ್ಳಿ ಪೊಲೀಸ್ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ. ಈ ಕುರಿತು ಫೋನ್ ಮೂಲಕವೂ ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ.