ಏಳು ತಲೆ ಸರ್ಪದ ಹಿಂದಿನ ಹುನ್ನಾರ; ಅಸಲಿ ಕಥೆ ಬಿಚ್ಚಿಟ್ಟ ಉರುಗ ತಜ್ಞ
Recommended Video
ರಾಮನಗರ, ಅಕ್ಟೋಬರ್ 11: ಇದೇ ಅಕ್ಟೋಬರ್ 9ರಂದು ಕನಕಪುರದಲ್ಲಿ ಏಳು ಹೆಡೆಯ ಸರ್ಪದ ಪೊರೆ ಕಂಡುಬಂದ ಸುದ್ದಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಆರು ತಿಂಗಳ ಹಿಂದೆ ಏಳು ಹೆಡೆ ಸರ್ಪದ ಪೊರೆ ಕಾಣಿಸಿಕೊಂಡಿದ್ದು, ಮತ್ತೆ ಅಲ್ಲಿಂದ ಹತ್ತು ಹಡಿ ದೂರದಲ್ಲಿ ಪೊರೆ ಕಂಡುಬಂದಿದ್ದು ಅಚ್ಚರಿ ಮೂಡಿಸಿತ್ತು. ಸುತ್ತಮುತ್ತಲಿನ ಊರಿನ ಜನರೂ ಗುಂಪು ಗುಂಪಾಗಿ ಹಾವಿನ ಪೊರೆ ನೋಡಲು ದೌಡಾಯಿಸಿದ್ದರು. ಇದೆಂಥ ಅಚ್ಚರಿ ಎಂದು ಬೆರಗಾಗಿದ್ದರು. ಹಾವಿನ ಪೊರೆಯ ವೀಡಿಯೋ ಕೂಡ ವೈರಲ್ ಆಗಿತ್ತು.
ವೀಡಿಯೋ ವೈರಲ್; ಮತ್ತೆ ರಾಮನಗರದಲ್ಲಿ ಕಾಣಿಸಿಕೊಂಡ ಏಳು ಹೆಡೆ ಸರ್ಪದ ಪೊರೆ!
ಆದರೆ ಇವೆಲ್ಲ ಶುದ್ಧ ಸುಳ್ಳು, ಜನರನ್ನು ಮರಳು ಮಾಡಲು ಮಾಡಿರುವ ವ್ಯವಸ್ಥಿತ ಸಂಚು ಎಂದು ಆರೋಪಿಸಿದ್ದಾರೆ ಉರುಗ ತಜ್ಞ ಆರ್.ಸುರೇಶ್.
ಆರು ತಿಂಗಳ ಹಿಂದೆಯೂ ಕಂಡುಬಂದಿದ್ದ ಹಾವಿನ ಪೊರೆ
ಈ ಏಳು ಹೆಡೆ ಸರ್ಪದ ಪೊರೆಯ ಹಿನ್ನೆಲೆ ಕುರಿತು ಜಿಲ್ಲಾಡಳಿತ ಸ್ಥಳ ಪರಿಶೀಲನೆ ಮಾಡಿ ಸೂಕ್ತ ತನಿಖೆ ನಡೆಸಿ ಪ್ರಕರಣದ ನಿಜಾಂಶ ಪತ್ತೆ ಮಾಡಬೇಕೆಂದೂ ಸುರೇಶ್ ಆಗ್ರಹಿಸಿದ್ದಾರೆ.
ಜಿಲ್ಲೆಯ ಕನಕಪುರದ ಮರೀಗೌಡನದೊಡ್ಡಿ ಗ್ರಾಮದ ಬೋಳಪ್ಪ (ದೊಡ್ಡಕೆಂಪೇಗೌಡ) ಎಂಬುವವರ ಜಮೀನಿನಲ್ಲಿ 6 ತಿಂಗಳ ಹಿಂದೆ ಏಳು ತಲೆ ಸರ್ಪ ಪೊರೆ ಬಿಟ್ಟಿದೆ ಎಂದು ಸುದ್ದಿಯಾಗಿತ್ತು. ಆಗಲೂ ಜನ ಅಚ್ಚರಿಯಿಂದ ಇದನ್ನು ನೋಡಲು ಸೇರಿದ್ದರು. ಅಲ್ಲಿ ಬಿದ್ದಿದ್ದ ಹಾವಿನ ಪೊರೆಗೆ ಪೂಜೆಯನ್ನೂ ನೆರವೇರಿಸಿದ್ದರು. ಪೊರೆ ದೊರೆತಿದ್ದ ಅನತಿ ದೂರದಲ್ಲೇ ದೇವಸ್ಥಾನವೂ ಇದೆ.
ಹುನ್ನಾರವಿದೆ ಎಂದ ಸುರೇಶ್
ಆರು ತಿಂಗಳ ಹಿಂದೆ ಪೊರೆ ಕಾಣಿಸಿಕೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸುರೇಶ್, "ಅದು ಏಳು ಅಡಿ ಉದ್ದದ ಹಾವಿನ ಪೊರೆಯಷ್ಟೇ. ಅದನ್ನೇ ಜೋಡಿಸಿಟ್ಟು ಏಳು ತಲೆ ಸರ್ಪದ ಪೊರೆ ಎಂದು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡಿಸಿದ್ದಾರೆ, ಇದರ ಹಿಂದೆ ದೊಡ್ಡ ಹುನ್ನಾರವಿದೆ" ಎಂದಿದ್ದರು.
ಏಳು ತಲೆ ಸರ್ಪ ಎನ್ನುವುದು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ ಅಷ್ಟೇ. ಅದರ ಅಸ್ತಿತ್ವ ಇಲ್ಲವೇ ಇಲ್ಲ" ಎಂದು ವೀಡಿಯೋ ಕೂಡ ಮಾಡಿ ಹರಿಬಿಟ್ಟಿದ್ದರು.
ಸಯಾಮಿ ಹಾವುಗಳಿರಬಹುದಷ್ಟೆ, ಏಳು ಹೆಡೆ ಸರ್ಪದ ಅಸ್ತಿತ್ವವಿಲ್ಲ
"ಸರ್ಪದ ಪೊರೆ ಸಿಕ್ಕ ಜಮೀನಿನ ಪಕ್ಕದಲ್ಲೇ ಸರ್ಕಾರಕ್ಕೆ ಸೇರಿದ ಜಮೀನಿದ್ದು, ಅದರಲ್ಲಿ ನೀರಿನ ಸೊಣೆ ಮತ್ತು ಕಾಡುಗಣಗಲೇ ಮರ ಇವೆ. ಇದನ್ನೆಲ್ಲ ಜನರಿಗೆ ತೋರಿಸಿ ಇಲ್ಲಿ ಏಳು ತಲೆ ಸರ್ಪದ ಸಂಚಾರವಿದೆ ಎಂದು ನಂಬಿಸಲು ನಡೆಸಿರುವ ಷಢ್ಯಂತ್ರ. ಇಲ್ಲಿ ದೇವಸ್ಥಾನ ಕಟ್ಟಿಸುವ ಹುನ್ನಾರವೂ ಒಳಗೊಳಗೇ ನಡೆಯುತ್ತಿದೆ. ಏಳು ತಲೆ ಸರ್ಪ ಎನ್ನುವುದು ಇಲ್ಲ. ಮಾನವರಲ್ಲಿ ಇರುವಂತೆ ಎರಡು ತಲೆಯ ಸಯಾಮಿಗಳು ಹಾವಿನಲ್ಲೂ ಇರಬಹುದು ಅಷ್ಟೆ. ಇದೀಗ ಆರು ತಿಂಗಳ ಹಿಂದೆ ಹರಡಿಸಿದ್ದ ಸುಳ್ಳು ಸುದ್ದಿಗೆ ಮತ್ತೆ ಜೀವ ತುಂಬುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ ಸುರೇಶ್.
ಶಾಕಿಂಗ್ ವಿಡಿಯೋ: ಹಾವಿನ ವಿರುದ್ಧ ನಾಲ್ಕು ಬೆಕ್ಕುಗಳ ಫೈಟಿಂಗ್!
"ನಮಗೂ ಗೊಂದಲವಿದೆ" ಎಂದ ಗ್ರಾಮಸ್ಥರು
ಉರುಗ ತಜ್ಞ ಸುರೇಶ್ ಕಳೆದ 13 ವರ್ಷಗಳಿಂದ ಹಾವುಗಳ ಸಂರಕ್ಷಣೆಯಲ್ಲಿ ನಿರತವಾಗಿದ್ದಾರೆ. ಮೂಲತಃ ಚನ್ನಪಟ್ಟಣದರಾದ ಇವರು 6 ತಿಂಗಳ ಹಿಂದೆ ಸರ್ಪದ ಪೊರೆ ಸಿಕ್ಕ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದ ವಿಡಿಯೋ ಬಿಡುಗಡೆ ಮಾಡಿ, ಜನರನ್ನು ಮೂಢನಂಬಿಕೆಗೆ ತಳ್ಳುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಇದೀಗ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಗ್ರಾಮಸ್ಥರನ್ನು ಈ ಬಗ್ಗೆ ವಿಚಾರಿಸಿದಾಗ, "ನಮಗೂ ಈ ಕುರಿತು ಗೊಂದಲವಿದೆ. ಯಾವುದನ್ನು ನಂಬಬೇಕು, ಬಿಡಬೇಕು ತಿಳಿಯುತ್ತಿಲ್ಲ. ಆರು ತಿಂಗಳ ಹಿಂದೆ ಪೊರೆ ಕಂಡಿತ್ತು. ಮತ್ತೆ ಈಗ ದೇವಸ್ಥಾನದ ಹತ್ತಿರವೇ ಪೊರೆ ಕಂಡುಬಂದಿದೆ. ಜಿಲ್ಲಾಡಳಿತ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ಈ ಜಾಗದ ಸುತ್ತಲೂ ಕ್ಯಾಮೆರಾ ಇಟ್ಟರೆ ಒಳ್ಳೆಯದು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.