ಜಾನಪದ ಲೋಕದ ಸಂಕ್ರಾಂತಿ ಸಂಭ್ರಮ ಕಸಿದ ಕೊರೊನಾ ಭೀತಿ
ರಾಮನಗರ, ಜನವರಿ 14: ಜಾನಪದ ಕಲೆಗಳ ತವರೂರು, ಜನಪದರ ಕಾಶಿ ಖ್ಯಾತಿಯ ಜಾನಪದ ಲೋಕದಲ್ಲಿ ಇಂದು ನಡೆದ ಮಕರ ಸಂಕ್ರಾಂತಿಯ ಸುಗ್ಗಿಯ ಹಬ್ಬ ಕೋವಿಡ್-19 ಭೀತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು.
ಅನ್ನದಾತನ ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ದವಸ ಧಾನ್ಯಗಳಾದ ರಾಗಿ, ಕಡಲೆಕಾಯಿ, ಜೋಳ ಹಾಗೂ ಅವರೆಕಾಯಿ ರಾಶಿ ಮಾಡಿ ಅದಕ್ಕೆ ಗ್ರಾಮೀಣ ಸೊಗಡಿನ ರಾಶಿ ಪೂಜೆ ನೆರವೇಸುವ ಮೂಲಕ ಸಂಪ್ರದಾಯಕ ಸಂಕ್ರಾಂತಿ ಆಚರಿಸಲಾಯಿತು.
ಉತ್ತರಾಯಣ ಪುಣ್ಯಕಾಲ: ತುಂಗಭದ್ರಾ ತಟದಲ್ಲಿ ಮಕರ ಸಂಕ್ರಾಂತಿ ಸಂಭ್ರಮ
ಅಲ್ಲದೇ ರಾಶಿ ಪೂಜೆಯ ಸುತ್ತಲೂ ರೈತರು ವ್ಯವಸಾಯದಲ್ಲಿ ಬಳಸುವ ವಿವಿಧ ಪರಿಕರಗಳು, ಜನಪದರ ಗ್ರಾಮೀಣ ಬದುಕಿನಲ್ಲಿ ದಿನ ನಿತ್ಯ ಬಳಸುತ್ತಿದ್ದ ಅಲವಾರು ಪರಿಕಾರಗಳ ಪ್ರದರ್ಶನಕ್ಕೆ ಇಡುವ ಮೂಲಕ, ಜಾನಪದ ಲೋಕಕ್ಕೆ ಬರುವ ಮಂದಿಗೆ ರೈತರ ಪರಿಕರಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನವನ್ನು ಮಾಡಲಾಗಿತ್ತು.
ಸಂಕ್ರಾಂತಿ ಹಬ್ಬದ ಸಾಂಪ್ರದಾಯಿಕ ಆಚರಣೆಯದ ಸಂಕ್ರಾಂತಮ್ಮಗೆ ಪೂಜೆ ಸಲ್ಲಿಸುವುದು ಹಾಗೂ ಬೆಂಕಿಯ ಮೇಲೆ ರಾಸುಗಳನ್ನು ಓಡಿಸುವುದು, ಬೆಂಕಿಯಲ್ಲಿ ಕಿಚ್ಚಾಯಿಸುವುದನ್ನು ಸರಳವಾಗಿ ಆಚರಣೆ ಮಾಡಲಾಯಿತು. ಜನರು ಕೂಡ ಬಹಳ ಉತ್ಸಾಹಕರಾಗಿ ಬಂದು ಈ ಜಾನಪದ ಲೋಕದ ಈ ಸುಗ್ಗಿಯ ಹಬ್ಬವನ್ನ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.
ಜಾನಪದ ಲೋಕದ ಸಂಕ್ರಾಂತಿ ಸುಗ್ಗಿ ಹಬ್ಬಕ್ಕೆ ರಾಶಿ ಪೂಜೆ ಮಾಡುವ ಮೂಲಕ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಚಾಲನೆ ನೀಡಿದರು. ಇನ್ನು ಸುಗ್ಗಿ ಹಬ್ಬದಲ್ಲಿ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಟಿ.ತಿಮ್ಮೇಗೌಡ, ಪರಿಷತ್ ಮ್ಯಾನೇಜಿಂಗ್ ಟ್ರಸ್ಟಿ ಅದಿತ್ಯ ನಂಜರಾಜ್, ಲೋಕದ ಅಧಿಕಾರಿ ರುದ್ರಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.