ರಾಮನಗರದಲ್ಲಿ ಜನತಾ ಕರ್ಫ್ಯೂಗೆ ಬೆಂಬಲ; ದೇವಾಲಯಗಳೂ ಬಂದ್
ರಾಮನಗರ, ಮಾರ್ಚ್ 21: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ ಹಿನ್ನೆಲೆಯಲ್ಲಿ ರೇಷ್ಮೆನಾಡಿನ ಚಿನ್ನಬೆಳ್ಳಿ ಮಾರಾಟಗಾರರು ಬೆಂಬಲ ವ್ಯಕ್ತಪಡಿಸಿ ಇದೇ ತಿಂಗಳ 22ರಿಂದ 29 ರವರೆಗೆ ಒಂದು ವಾರ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ.
ಜಿಲ್ಲೆಯ ಪ್ರಮುಖ ದೇವಾಲಯಗಳಾದ ಕನಕಪುರ ತಾಲ್ಲೂಕಿನ ಕಬ್ಬಾಳಮ್ಮ ದೇವಾಲಯ, ಮಾಗಡಿ ಶ್ರೀರಂಗನಾಥ ದೇವಾಲಯ ಮತ್ತು ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ದೇವಾಲಯಗಳು ಸೇರಿದಂತೆ ಮುಜರಾಯಿ ಇಲಾಖೆಯ ವ್ಯಾಪ್ತಿಯ ಎಲ್ಲಾ ದೇವಾಲಯಗಳ ಉತ್ಸವ, ಜಾತ್ರೆ ಹಾಗೂ ಜನರು ಹೆಚ್ಚು ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಪ್ರಕಟಣೆ ಹೊರಡಿಸಿದ್ದಾರೆ.
'ಜನತಾ ಕರ್ಫ್ಯೂ'ಗೆ ಬೆಂಬಲ ನೀಡಿದ ಹೋಟೆಲ್ ಮಾಲೀಕರ ಸಂಘ
ಈಗಾಗಲೇ ಜಿಲ್ಲಾಧಿಕಾರಿಗಳು ಸೆಕ್ಷನ್ 133 ಜಾರಿ ಮಾಡಿದ್ದು ಹೆಚ್ಚು ಜನ ಸೇರುವ ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ಸಭೆ ಸಮಾರಂಭಗಳಿಗೂ ಕಡಿವಾಣ ಹಾಕಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಆದೇಶದ ಮೇರೆಗೆ ಪುರಾಣ ಪ್ರಸಿದ್ಧ ಹಾಗೂ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಸ್ಥಳೀಯ ಹಾಗೂ ಹೊರ ಪ್ರದೇಶಗಳಿಂದ ಆಗಮಿಸುವ ಭಕ್ತರಿಗೆ ದೇವರ ದರ್ಶನ, ತೀರ್ಥ ಹಾಗೂ ಪ್ರಸಾದ ವಿತರಣೆಯನ್ನು ನಿಷೇಧಿಸಿದ್ದಾರೆ. ಅರ್ಚಕರು, ದೇವಾಲಯ ಸಿಬ್ಬಂದಿ ವರ್ಗ ದಿನ ನಿತ್ಯದ ಶಾಸ್ತ್ರ ಮತ್ತು ಸಾಂಪ್ರದಾಯಿಕ ಪೂಜೆಗೆ ಷರತ್ತುಬದ್ಧ ಅವಕಾಶ ನೀಡಿದ್ದಾರೆ.