ಸಿದ್ದರಾಮಯ್ಯ ಬಳಿ ವಾಚ್, ಶೂ ಲೆಕ್ಕ ಕೇಳಿದ; ಅಶ್ವಥ್ ನಾರಾಯಣ
ರಾಮನಗರ, ಮೇ 31: "ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಆರ್ಎಸ್ಎಸ್ ಬಗ್ಗೆ ಮಾತನಾಡುವ ವಿಪಕ್ಷ ನಾಯಕ ಸಿದ್ದರಾಮಯ್ಯರ ವಾಚ್, ಶೂ, ಕನ್ನಡಕದ ಬಗ್ಗೆ ಅಕೌಂಟೆಬಿಲಿಟಿ ಇದೆಯೇ?" ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್.ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದರು.
ಮಂಗಳವಾರ ನಗರದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ 'ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನ ಮಂತ್ರಿ ಯವರ ಸಂವಾದ' ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ಆರ್ಎಸ್ಎಸ್ ನಾಯಕರ ಬಗ್ಗೆ ಹೇಳಿಕೆ ಕೊಟ್ಟರೆ ಬಿಜೆಪಿ ನಾಯಕರು ಏಕೆ ಉತ್ತರ ನೀಡುತ್ತಾರೆ?" ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಸಿದ್ದರಾಮಯ್ಯ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ನಾನು ಆರ್ಎಸ್ಎಸ್ನಿಂದ ಬಂದವನೇ, ಬಿಜಿಪಿ ಪಕ್ಷದಲ್ಲಿ ಇದ್ದೇನೆ. ಆರ್ಎಸ್ಎಸ್ನಲ್ಲಿ ಎಲ್ಲಾ ಜಾತಿಯವರು ಕೆಲಸ ಮಾಡುತ್ತಿದ್ದಾರೆ" ಎಂದರು.
ರಾಜಕೀಯ ಬಿಟ್ಟು ಸನ್ಯಾಸತ್ವ ಸ್ವೀಕರಿಸಲಿ; "ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತ ನೋಡಿದ್ದೇವೆ, ಅವರ ವಾಚ್, ಶೂ, ಕನ್ನಡಕದ ಬಗ್ಗೆ ಅಕೌಂಟೆಬಿಲಿಟಿ ಇದಿಯಾ?. ಸಿದ್ದರಾಮಯ್ಯ ಆಡಳಿತದಲ್ಲಿ ಎಷ್ಟು ಅಕ್ರಮಗಳು ನಡೆದಿದೆ. ಮರಳು ದಂಧೆ, ಅರ್ಕಾವತಿ ಬಡಾವಣೆ, ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಸೇರಿದಂತೆ ಎಲ್ಲಾ ಕಡೆ ಹಗರಣಗಳೇ ತುಂಬಿದ್ದವು" ಎಂದು ಆರೋಪಿಸಿದರು.
"ಕಡು ಬಡತನದಿಂದ ಬಂದ ಅವರು ಪ್ರಾಮಾಣಿಕ, ದಕ್ಷತೆ ಬಿಟ್ಟು ಭ್ರಷ್ಟಾಚಾರದ ಕೂಪವನ್ನೇ ಮಾಡಿದ್ದಾರೆ. ಸಿಎಂ ಆಗಿ ಅಧಿಕಾರ ಅನುಭವಿಸಿ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದಿದ್ದರು. ಆದರೆ ಅವರು ಹಾಗೆ ಮಾಡಿಲ್ಲ, ಸಿದ್ದರಾಮಯ್ಯ ರಾಜಕೀಯ ಬಿಟ್ಟು ಸನ್ಯಾಸತ್ವ ಸ್ವೀಕರಿಸಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯಕ್ಕೆ ಅವಕಾಶವಿಲ್ಲ; ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಪ್ರತಿಕ್ರಿಯೆ ನೀಡಿ, "ಈ ವಿಚಾರದಲ್ಲಿ ಈಗಾಗಲೇ ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಯಾವ ಯಾವ ಕಾಲದಲ್ಲಿ ಯಾವ ಜನಾಂಗದವರು ಎಷ್ಟೆಷ್ಟು ಇದ್ದಾರೆ ಎಂಬುದನ್ನು ಹೇಳಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ರಾಜಕೀಯ ಮಾಡಲು ಯಾರಿಗೂ ಅವಕಾಶವಿಲ್ಲ. ಈ ವಿಚಾರದ ಬಗ್ಗೆ ಗಮನಹರಿಸಲಾಗುವುದು. ಏನಾದರೂ ತಪ್ಪುಗಳಿದ್ದರೆ ಚರ್ಚಿಸಿ ಅದನ್ನು ಸರಿಪಡಿಸಲಾಗುವುದು" ಎಂದು ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು.