'ಆಗ ದೇವೇಗೌಡರ ಕಾಲು ಹಿಡಿದಿದ್ದ ಸಿದ್ದು ಈಗ ಜುಟ್ಟು ಹಿಡಿಯುವ ಯತ್ನ'
ರಾಮನಗರ, ಏಪ್ರಿಲ್ 5 : ಜೆಡಿಎಸ್ ನ ವಿಕಾಸಪರ್ವಕ್ಕೆ ದೊರಕಿರುವ ಅಭೂತಪೂರ್ವ ಬೆಂಬಲದಿಂದ ದಿಕ್ಕೆಟ್ಟಿರುವ ಸಿದ್ದರಾಮಯ್ಯ ದೊಡ್ಡವರನ್ನು ಟೀಕಿಸುವ ಮೂಲಕ ತಾವು ದೊಡ್ಡವರಾಗಲು ಹೊರಟಿದ್ದಾರೆ. ಅವರೊಬ್ಬ ಡೋಂಗಿ ಸಮಾಜವಾದಿ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಮತ್ತು ರಮೇಶ್ ಬಾಬು ರಾಮನಗರದಲ್ಲಿ ಟೀಕಿಸಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದ ಶಾನುಭೋಗನಹಳ್ಳಿಯಲ್ಲಿ ಗುರುವಾರ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪರ ಪ್ರಚಾರ ನಡೆಸಲು ಬಂದಿದ್ದ ಶ್ರೀಕಂಠೇಗೌಡ ಹಾಗೂ ರಮೇಶ್ ಬಾಬು ಸುದ್ದಿಗೋಷ್ಠಿ ನಡೆಸಿದರು. ದೇವೇಗೌಡರನ್ನು ಟೀಕಿಸಿ ಸಿದ್ದರಾಮಯ್ಯ ದೊಡ್ಡವರಾಗಲು ಹೊರಟಿರುವುದು ಅವರ ಭ್ರಮೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರಗಳಲ್ಲಿ ಸೋಲಿನ ಸುಳಿವು ದೊರೆತಿದೆ. ಅದ್ದರಿಂದ ಹತಾಶರಾದಂತೆ ವರ್ತಿಸುತ್ತಿದ್ದಾರೆ. ಗುಂಡ್ಲುಪೇಟೆ- ನಂಜನಗೂಡು ಉಪ ಚುನಾವಣೆ ಮತ್ತು ಕಾವೇರಿ ವಿವಾದ ಎದುರಾಗಿದ್ದಾಗ ಸಿದ್ದರಾಮಯ್ಯ ಅವರು ದೇವೇಗೌಡರ ಕಾಲು ಹಿಡಿದು, ಸಹಾಯ ಪಡೆದರು. ಇದೀಗ ದೇವೇಗೌಡರ ಜುಟ್ಟು ಹಿಡಿಯಲು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಗಡಿಯಲ್ಲಿ ಯಾರು ಯಾವ ಪಕ್ಷವೋ? ಪಕ್ಷಾಂತರ ಪರ್ವದಲ್ಲಿ ಎಲ್ಲ ಅದಲುಬದಲು
ಡೋಂಗಿ ಸಮಾಜವಾದಿ ಸಿದ್ದರಾಮಯ್ಯ ಲಕ್ಷಾಂತರ ರುಪಾಯಿ ಮೌಲ್ಯದ ವಾಚು ಕಟ್ಟಿಕೊಳ್ತಾರೆ. ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಿದ್ದಾರೆ. ಅಲ್ಲದೇ ತಮ್ಮ ಹಾಗೂ ಸಂಪುಟ ಸಹೋದ್ಯೋಗಿಗಳ ಪ್ರಕರಣಗಳಿಗೆ ಕ್ಲೀನ್ ಚಿಟ್ ನೀಡಲು ಎಸಿಬಿ ಸ್ಥಾಪಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷದ ಹಾಗೂ ಎಚ್.ಡಿ.ದೇವೇಗೌಡರ ಜಾತ್ಯತೀತತೆಯನ್ನು ಪ್ರಶ್ನೆ ಮಾಡುವ ನೈತಿಕ ಹಕ್ಕು ಸಿದ್ದರಾಮಯ್ಯ ಅವರಿಗಿಲ್ಲ. ಇದೇ ರೀತಿ ಮಾತು ಮುಂದುವರಿಸಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಜೆಡಿಎಸ್ ಒಡೆಯುವ ಉದ್ದೇಶದಿಂದ ಪಕ್ಷದ ಏಳು ಶಾಸಕರಿಗೆ ಹಣ ಕೊಟ್ಟು, ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜು, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜೇಡ್ರಳ್ಳಿ ಕೃಷ್ಣಪ್ಪ ಸೇರಿದಂತೆ ಜೆಡಿಎಸ್ ನ ಹಲವು ಮುಖಂಡರು ಉಪಸ್ಥಿತರಿದ್ದರು.