ಚನ್ನಪಟ್ಟಣ; ಉದ್ಘಾಟನೆಯಾಗಿ 14 ವರ್ಷವಾದರೂ ತೆರೆದಿಲ್ಲ ಈ ಮಳಿಗೆಗಳು
ಚನ್ನಪಟ್ಟಣ, ಜನವರಿ 30: ನಗರಸಭೆಯ ಅಧಿಕಾರಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ತಿಕ್ಕಾಟದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಮಾರುಕಟ್ಟೆಯ ಅಂಗಡಿ ಮಳಿಗೆಗಳು ಕಳೆದ 14 ವರ್ಷಗಳಿಂದಲೂ ಅನೈತಿಕ ಚುಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.
ಹುಷಾರ್! ಬಳ್ಳಾರಿಯ ಈ ಆಸ್ಪತ್ರೆಗೆ ಬಂದರೆ ರೋಗ ಗ್ಯಾರಂಟಿ
ಪ್ರಸ್ತುತ ಪಟ್ಟಣದ ಶಾಸಕರಾಗಿರುವ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪ್ರಥಮ ಬಾರಿಗೆ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕೆಂದು ಅಂಗಡಿ ಮಳಿಗೆಗಳನ್ನು ಕಟ್ಟಿಸಲಾಗಿತ್ತು. ಆದರೆ ಈ ಮಳಿಗೆಗಳೆಲ್ಲಾ ಈಗ ಸಂಪೂರ್ಣ ಹಾಳಾಗಿವೆ. ಸರಿಸುಮಾರು 125 ಅಂಗಡಿ ಮಳಿಗೆಗಳು ಪ್ರಯೋಜನಕ್ಕೆ ಬಾರದೇ ಬಿದ್ದಿವೆ.
2006ರಲ್ಲಿ ಉದ್ಘಾಟನೆಗೊಂಡಿದ್ದ ಮಳಿಗೆಗಳು
ನಗರ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಸುರಕ್ಷಿತವಾಗಿ ಒಂದೇ ಕಡೆ ತಮ್ಮ ವ್ಯಾಪಾರ ವಹಿವಾಟು ನಡೆಸಲಿ ಎಂಬ ಮೂಲ ಉದ್ದೇಶದೊಂದಿಗೆ ಈ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. 2006ರಲ್ಲಿ ಉದ್ಘಾಟನೆ ಕೂಡ ಮಾಡಲಾಯಿತು. ಇದೀಗ ಸರಿಸುಮಾರು 14 ವರ್ಷ ಕಳೆಯುತ್ತಿದ್ದರೂ ಒಬ್ಬನೇ ಒಬ್ಬ ಫುಟ್ ಪಾತ್ ವ್ಯಾಪಾರಿ ಮಾರುಕಟ್ಟೆಗೆ ಸ್ಥಳಾಂತರವಾಗಿಲ್ಲ.
ಹಾಳುಕೊಂಪೆಯಾಗಿರುವ ಮಳಿಗೆಗಳು
ಒಂದೆಡೆ ಜನರ ತೆರಿಗೆ ಹಣದಲ್ಲಿ ಕಟ್ಟಿದ ಮಾರುಕಟ್ಟೆ ಹಾಳು ಕೊಂಪೆಯಾಗಿ ಬಿದ್ದಿದೆ. ರಾತ್ರಿಯಾದರೆ ಸಾಕು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತದೆ. ಬೆಳಿಗ್ಗೆ ಸಮಯದಲ್ಲಿ ಅಂಗಡಿ ಮಳಿಗೆಗಳನ್ನು ಯಾರೂ ಬಳಸದ ಕಾರಣ ತಾಜ್ಯದ ವಿಲೇವಾರಿ ತಾಣವಾಗಿ ಗಬ್ಬುನಾರುತ್ತಿದೆ. ಮಾರುಕಟ್ಟೆಯ ಪಕ್ಕದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು
ನಗರಸಭೆ ಅಧಿಕಾರಿಗಳೂ ತಲೆಕೆಡಿಸಿಕೊಂಡಿಲ್ಲ
ಈ ವಿಷಯಗಳಿಗೆ ನಗರಸಭೆಯ ಅಧಿಕಾರಿಗಳೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಬಗ್ಗೆ ಮಾತನಾಡಲು ಅವರು ಹಿಂಜರಿಯುತ್ತಾರೆ. ಜೊತೆಗೆ ವರ್ಷಕ್ಕೊಮ್ಮೆ ನಗರಸಭೆ ಪೌರಾಯುಕ್ತರು ಬದಲಾಗುವ ಕಾರಣ ಯಾರನ್ನು ಪ್ರಶ್ನೆ ಮಾಡಿದರೂ ಪರಿಶೀಲನೆ ಮಾಡುತ್ತೇವೆಂದು ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುತ್ತಾರೆ.
"ನಗರಸಭೆ ನಿರ್ಮಾಣ ಮಾಡಿರುವ ಅಂಗಡಿ ಮಳಿಗೆಗಳ ಬಾಡಿಗೆ ಜಾಸ್ತಿ ಇದೆ. ಆದ್ದರಿಂದ ಮಳಿಗೆಗಳಲ್ಲಿ ವ್ಯಾಪಾರ ಮಾಡಲು ಬೀದಿಬದಿ ವ್ಯಾಪರಸ್ಥರು ಆಸಕ್ತಿ ವಹಿಸುತ್ತಿಲ್ಲ. ಅಲ್ಲದೇ ಮಾರುಕಟ್ಟೆ ನಿರ್ಮಾಣ ಮಾಡಿರುವ ಸ್ಥಳದಲ್ಲಿ ಸಾರ್ವಜನಿಕ ಸಂಚಾರ ಕಡಿಮೆ ಇದೆ. ಅಲ್ಲಿ ವ್ಯಾಪಾರ ಮಾಡುವುದು ಹೇಗೆ" ಎಂದು ಪ್ರಶ್ನಿಸುತ್ತಾರೆ ಬೀದಿಬದಿ ವ್ಯಾಪಾರಿಗಳು.ವಾಹನ ಸಂಚಾರಕ್ಕೆ ಕಿರಿಕಿರಿ
ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿರುವುದರಿಂದ ಜನರು ಹಾಗೂ ವಾಹನಗಳ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ಇದರಿಂದ ಸಣ್ಣಪುಟ್ಟ ಅಪಘಾತಗಾಳಾಗಿ ಸಾಕಷ್ಟು ತೊಂದರೆಯಾಗುತ್ತಿರುವುದಾಗಿ ಸಾರ್ವಜನಿಕರು ಆರೋಪ ಮಾಡಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರದ ಹಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಈ ಅಂಗಡಿ ಮಳಿಗೆಗಳು ಈಗ ಪ್ರಯೋಜನಕ್ಕೆ ಬಾರದ ಸ್ಥಿತಿ ತಲುಪಿವೆ. ಈ ಬಗ್ಗೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ತ್ವರಿತವಾಗಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕ್ಷೇತ್ರದ ಜನರು ಒತ್ತಾಯ ಮಾಡಿದ್ದಾರೆ.