ಸಿದ್ದರಾಮೋತ್ಸವದಿಂದ ಬಿಜೆಪಿಯಲ್ಲ ಕಾಂಗ್ರೆಸ್ನಲ್ಲೇ ನಡುಕ!
ರಾಮನಗರ, ಆಗಸ್ಟ್ 8: "ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಕಾಂಗ್ರೆಸ್ ಪಕ್ಷದಲ್ಲೇ ನಡುಕ ಪ್ರಾರಂಭವಾಗಿದೆ. ಸಿಎಂ ಕುರ್ಚಿ ಯಾರಿಗೆ? ಎಂದು ಕಾಂಗ್ರೆಸ್ ಪಕ್ಷದಲ್ಲೇ ತಲ್ಲಣ ಶುರುವಾಗಿದೆ" ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ ನಾರಾಯಣ್ ಸಿದ್ದರಾಮೋತ್ಸವದ ಬಗ್ಗೆ ವ್ಯಂಗ್ಯವಾಡಿದರು.
ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವು ಭಾಗಗಳಲ್ಲಿ ಉಂಟಾಗಿರುವ ನೆರೆ ಅನಾಹುತ ಸ್ಥಳಗಳಿಗೆ ಭೇಟಿ ನೀಡಿ ಸರ್ಕಾರದ ವತಿಯಿಂದ ನೊಂದವರಿಗೆ ಪರಿಹಾರದ ಚೆಕ್ ವಿತರಿಸಿ ನಂತರ ಮಾಧ್ಯಮಗಳೊಂದಿಗೆ ಸಚಿವರು ಮಾತನಾಡಿದರು.
ಸಿದ್ದರಾಮೋತ್ಸವದ ನಂತರ ರಾಜಕೀಯವಾಗಿ ಪುಟಿದೆದ್ರಾ ಸಿದ್ದರಾಮಯ್ಯ?
"ಸಿದ್ದರಾಮೋತ್ಸವದಿಂದ ಬಿಜೆಪಿಯವರಿಗೆ ನಡುಕ ಶುರುವಾಗಿದೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, "ನಮಗೆ ಏನೂ ಭಯ ಇಲ್ಲ, ಕಾಂಗ್ರೆಸ್ ನಲ್ಲಿರುವ ನಾಯಕರಿಗೆ ನಡುಕ ಬಂದಿದೆ. ಕಾಂಗ್ರೆಸ್ ನಲ್ಲಿರುವ ನಾಯಕರಿಗೆ ಸಿಎಂ ಕುರ್ಚಿ ಯಾರಿಗೆ ಅನ್ನೋ ನಡುಕ ಶುರುವಾಗಿದೆ. ವಿಶೇಷವಾಗಿ ಡಿ. ಕೆ. ಶಿವಕುಮಾರ್ಗೆ" ಎಂದು ಟಾಂಗ್ ನೀಡಿದರು.
"ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಕಾಂಗ್ರೆಸ್ ಪಕ್ಷ ಅಂದರೆ ಅದು ಸಿದ್ದರಾಮಯ್ಯ ಅನ್ನೋ ಹಾಗಾಗಿದೆ. ಹಾಗಾಗಿ ಬೇರೆ ಜನಾಂಗದ ನಾಯಕರು ಆ ಪಕ್ಷದಲ್ಲಿ ಯಾಕೆ ಇರೋದಕ್ಕೆ ಹೋಗುತ್ತಾರೆ?. ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ, ನಮಗೆ ಯಾಕಪ್ಪಾ ಈ ಪಕ್ಷ ಬರೀ ಸಿದ್ದರಾಮಯ್ಯ ಅನ್ನೋದಾದ್ರೆ ಅಂತ ಯೋಚನೆಗೆ ಬಿದ್ದಿದ್ದಾರೆ" ಎಂದು ಸಚಿವರು ಲೇವಡಿ ಮಾಡಿದರು.
ಜೈಕಾರ ಹಾಕಿದ ಕ್ಷಣವೇ ಡಿ. ಕೆ. ಶಿವಕುಮಾರ್ ಜೈ ಆಗೋದ್ರು
ಇನ್ನು ಸಿದ್ದರಾಮೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ತಮ್ಮ ಭಾಷಣ ಪ್ರಾರಂಭಿಸುವಾಗ ಸಿದ್ದರಾಮಯ್ಯನವರಿಗೆ ಜೈ ಎಂದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಗ್ಗೆ ಮಾತನಾಡಿದ ಸಚಿವ ಅಶ್ವಥ ನಾರಾಯಣ್, "ಸಿದ್ದರಾಮಯ್ಯಗೆ ಜೈಕಾರ ಹಾಕಿದ ಕ್ಷಣವೇ ಡಿ. ಕೆ. ಶಿವಕುಮಾರ್ ಜೈ ಆಗೋದ್ರು. ಕಾಂಗ್ರೆಸ್ ಪಕ್ಷವನ್ನು ಎಲ್ಲೋ ಒಂದು ಕಡೆ ಸಿದ್ದರಾಮಯ್ಯಗೆ ಸೀಮಿತ ಮಾಡಿಕೊಂಡತಾಗಿದೆ" ಎಂದು ಅಶ್ವಥ ನಾರಾಯಣ್ ಟೀಕಿಸಿದರು.
ಕಾಂಗ್ರೆಸ್ಗೆ ಸಿದ್ದರಾಮಯ್ಯನವರೇ ಗತಿ
"ಸಿದ್ದರಾಮಯ್ಯನವರಿಗೂ ವಯಸ್ಸು ಆಗಿಬಿಟ್ಟಿದೆ. ಪಾಪ 75 ವರ್ಷ ಆಗಿದೆ, ಹಾಗಾಗಿ ಅವರೂ ಸಹ ಈ ಸಿಎಂ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯಾಗಿಲ್ಲ. ಆದರೂ ಸಹ ಕಾಂಗ್ರೆಸ್ ನವರಿಗೆ ಸಿದ್ದರಾಮಯ್ಯನವರೇ ಗತಿಯಾಗಿಬಿಟ್ಟಿದೆ. ಪಾಪ ಡಿಕೆಶಿ ಅವರೇ ಸಿದ್ದರಾಮಯ್ಯಗೆ ಜೈ ಅಂದ ಮೇಲೆ ಇನ್ನೇನು ಉಳಿದಿದೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಏನು ಅನ್ನೋದನ್ನು ಸಿದ್ದರಾಮೋತ್ಸವದಲ್ಲಿ ತೋರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಯಾವುದೇ ರೀತಿಯ ನೆಲೆಯೂ ಇಲ್ಲ, ಜನರ ಬೆಂಬಲವೂ ಇಲ್ಲ" ಎಂದು ಸಚಿವ ಅಶ್ವಥ ನಾರಾಯಣ್ ಕಿಡಿಕಾರಿದರು.
ಚೀಪ್ ರೇಟಡ್ ಸ್ಟೇಟ್ಮೆಂಟ್
"ಬಿಜೆಪಿ ಅಹಿಂದ ಮತಗಳನ್ನು ಕಿತ್ತುಹಾಕುವ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ಇಂತಹ ನಿರಾಧಾರಿತ ಹೇಳಿಕೆ ಕೊಟ್ಟಿರುವುದು ಚೀಪ್ ರೇಟಡ್ ಸ್ಟೇಟ್ಮೆಂಟ್ ಗಳು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲೇ ಮತದಾರರ ಪಟ್ಟಿಯನ್ನ ರಾತ್ರೋರಾತ್ರಿ ಜೋಡಿಸುತ್ತಿದ್ದರು. ಇಂತಹ ಕೆಲಸಗಳನ್ನ ಮಾಡುವುದರಲ್ಲಿ ಪ್ರವೀಣರು. ಅನುಭವ ಜಾಸ್ತಿ ಅಲ್ವಾ" ಎಂದು ಸಚಿವ ಅಶ್ವಥ ನಾರಾಯಣ್ ಡಿಕೆಶಿಗೆ ಟಾಂಗ್ ನೀಡಿದರು.
ಮತ್ತೆ ಅಧಿಕಾರಕ್ಕೆ ಬರುವಂತೆ ಶಾ ಸೂಚನೆ
ರಾಜ್ಯ ಸರಕಾರಕ್ಕೆ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ ಎನ್ನುವ ವಂದಂತಿಗಳನ್ನು ಅಲ್ಲಗೆಳೆದ ಜಿಲ್ಲಾ ಉಸ್ತುವಾರಿ ಸಚಿವರು, "ಚೆನ್ನಾಗಿ ಕೆಲಸ ಮಾಡಿ, ಅಧಿಕಾರಕ್ಕೆ ಬನ್ನಿ ಎಂದು ಸೂಚನೆ ಕೊಟ್ಟಿದ್ದಾರೆ ಅಷ್ಟೇ. ಸಿದ್ದರಾಮೋತ್ಸವ ಮಾಡಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಪತನವಾಗಿದೆ. ಜನ ನಮ್ಮಜೊತೆ ಇದ್ದಾರೆ. ಎಲ್ಲಾ ಜನಾಂಗ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ನಿಂತಿವೆ" ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು.
Recommended Video