ನುಂಗಣ್ಣರ ಪಾಲಾಗಿದೆ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ
ಚನ್ನಪಟ್ಟಣ, ಜುಲೈ 20: ಒಂದು ಕಾಲದಲ್ಲಿ ಸುಮಾರು ಇಪ್ಪತ್ತು ಎಕರೆ ಜಾಗದಲ್ಲಿ ನಳನಳಿಸುತ್ತಿದ್ದ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ ಇದೀಗ ಕುರುಹೇ ಇಲ್ಲದಂತೆ ಮಾಯವಾಗಿದೆ. ಪಟ್ಟಣದ ತಾಲ್ಲೂಕು ಕಚೇರಿ ಹಿಂಭಾಗವೇ ಇರುವ ಕೆರೆಯು ಒತ್ತುವರಿಯಿಂದಾಗಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ.
ಆದರೆ ಈ ಕುರಿತು ಗಮನ ಹರಿಸುವವರು ಯಾರೂ ಇಲ್ಲವಾಗಿದ್ದಾರೆ.
ಭೂ ಮಾಫಿಯಾ ಕಪಿಮುಷ್ಟಿಯಿಂದ ಪಾರಾದ ಬೆಳ್ಳಂದೂರು, ಅಗರ ಕೆರೆ
ಭೂಗಳ್ಳರು ಇಟಾಚಿ, ಜೆಸಿಬಿ ಹಾಗೂ ಟ್ರಾಕ್ಟರ್ ನಂತಹ ಭಾರಿ ಯಂತ್ರಗಳನ್ನು ಬಳಸಿ ಕೆರೆಗೆ ಮಣ್ಣು ತುಂಬಿ ದೇವಸ್ಥಾನ, ರಸ್ತೆ ಸಂಪರ್ಕ ಹಾಗೂ ಅವ್ಯಾಹತವಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಟ್ಟಣದ ಜನತೆಯ ಕುಡಿಯುವ ನೀರಿನ ದಾಹ ತಣಿಸುತ್ತಿದ್ದ ಶೆಟ್ಟಿಹಳ್ಳಿ ಕೆರೆಯ ಸ್ವಲ್ಪ ಪಾಲೂ ಪಟ್ಟಣದ ಕೊಳಚೆ ತುಂಬಿಕೊಂಡು ತ್ಯಾಜ್ಯದ ಗುಂಡಿಯಾಗಿ ಮಾರ್ಪಟ್ಟಿದೆ.
ಇದನ್ನೆಲ್ಲ ಪ್ರಶ್ನಿಸಬೇಕಾದ ನಗರಸಭೆ, ತಾಲ್ಲೂಕು ಆಡಳಿತ ಮೌನವಾಗಿದೆ. ಎಲ್ಲವನ್ನು ನೋಡುತ್ತಿದ್ದರೂ ತಮಗೆ ಸಂಬಂಧವೇ ಇಲ್ಲವೆನ್ನುವ ರೀತಿ ಕಣ್ಣು ಮುಚ್ಚಿಕುಳಿತಿದ್ದಾರೆ ಅಧಿಕಾರಿಗಳು.
ಕೆರೆಗಳ ಒತ್ತುವರಿ, ಕ್ರಮಕ್ಕೆ ಯುನೈಟೆಡ್ ಬೆಂಗಳೂರು ಆಗ್ರಹ
ಹಿಂದಿನ ಶಾಸಕ ಸಿ.ಪಿ.ಯೋಗೇಶ್ವರ್ ಕೆರೆಯನ್ನು ಮುಚ್ಚಿ ಅದೇ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ಮಾಡುವುದಾಗಿ ನೀಡಿದ್ದ ಭರವಸೆ ನಾಲ್ಕು ಬಾರಿ ಶಾಸಕರಾಗಿ ಗೆದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಮುಖ್ಯಮಂತ್ರಿಗಳು ಗಮನ ಹರಿಸಿ, ತಾವು ಪ್ರತಿನಿಧಿಸಿದ ಕ್ಷೇತ್ರದ ಕೆರೆ ಒತ್ತುವರಿ ತೆರವುಗೊಳಿಸಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು, ಇಲ್ಲವೇ ಕೆರೆಯನ್ನು ಮೂಲ ಸ್ವರೂಪಕ್ಕೆ ತಂದು, ಕೆರೆ ಅಭಿವೃದ್ಧಿಪಡಿಸಿ ವಾಯು ವಿಹಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.