ರಾಮನಗರದಲ್ಲಿ ಸರಣಿ ಕಳ್ಳತನ ಮಾಡಿದ ದರೋಡೆಕೋರರು
ರಾಮನಗರ, ಮಾರ್ಚ್ 23: ಕಳೆದ ರಾತ್ರಿ ಮೂರ್ನಾಲ್ಕು ಮನೆಗಳಿಗೆ ನುಗ್ಗಿದ ದರೋಡೆಕೋರರು, ಓರ್ವನಿಗೆ ಮಾರಣಾಂತಿಕವಾಗಿ ಥಳಿಸಿ ಮೂವತ್ತು 30 ಸಾವಿರ ರೂ. ಹಣ ಕಿತ್ತು ಪರಾರಿಯಾಗಿರುವ ಘಟನೆ ರಾಮನಗರ ತಾಲ್ಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಹೊಸದೊಡ್ಡಿ ಗ್ರಾಮದಲ್ಲಿ ಮೂರು ಮನೆಗಳಿಗೆ ನುಗ್ಗಿದ ದರೋಡೆಕೋರರು ಕೆಂಪಾಜಮ್ಮ ಎಂಬ ವೃದ್ಧೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತಿದ್ದಾರೆ, ಎಚ್ಚರಗೊಂಡು ಕೂಗಿಕೊಂಡಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ.
ಅದೇ ಗ್ರಾಮದ ಮತ್ತೊಂದು ಬೀದಿಯಲ್ಲಿ ಮೋಟಪ್ಪ ಹಾಗೂ ಸಿದ್ದಪ್ಪಾಜಿ ಎಂಬುವರ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ, ಈ ವೇಳೆ ಸಿದ್ದಪ್ಪಾಜಿ ಎಂಬಾತ ಅಡ್ಡ ಬಂದಿದ್ದರಿಂದ ಆತನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ನಂತರ ಅದೇ ಗ್ರಾಮದಲ್ಲಿರುವ ಬಂದೂಕಾರಲಿಂಗೇಶ್ವರ ದೇವಾಲಯಕ್ಕೆ ನುಗ್ಗಿ ಹುಂಡಿ ಕಳವು ಮಾಡಿ ಪರಾರಿಯಾಗಿದ್ದಾರೆ.
ಸುಮಾರು ರಾತ್ರಿ ಒಂದು ಗಂಟೆ ನುಗ್ಗಿದ ಕಳ್ಳರು ಸರಣಿ ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದಪ್ಪಾಜಿ ಎಂಬುವವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.