ಸ್ವಸಹಾಯ ಸಂಘಗಳ ಸಾಲದ ಹೆಸರಿನಲ್ಲಿ 17 ಲಕ್ಷ ರು. ವಂಚನೆ; ವಂಚಕನ ಬಂಧನ
ರಾಮನಗರ, ಆಗಸ್ಟ್ 11: ಸ್ವಸಹಾಯ ಸಂಘಗಳ ಹೆಸರಿನಲ್ಲಿ ಹಲವಾರು ಜಿಲ್ಲೆಯ ಜನರನ್ನು ವಂಚಿಸುತ್ತಿದ್ದ ತುಮಕೂರು ಮೂಲದ ವ್ಯಕ್ತಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ಮಂಜುನಾಥ ಎಂಬಾತ ಬಂಧಿತ ಆರೋಪಿ.
ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಮೂಲಕ ಪ್ರತಿ ಸದಸ್ಯರಿಗೆ 50 ಸಾವಿರ ಸಾಲ ಕೊಡಿಸುವುದಾಗಿ ನಂಬಿಸಿ, ಬ್ಯಾಂಕ್ ಅಕೌಂಟ್ ತೆರಯಲು 1000 ದಿಂದ 1500 ರುಪಾಯಿ ವಸೂಲಿ ಮಾಡಿ, ಮೋಸ ಮಾಡಿದ್ದಾನೆ ಎನ್ನಲಾಗಿದೆ. 6 ತಿಂಗಳಿಂದ ವಿವಿಧ ಜಿಲ್ಲೆಗಳಿಂದ ಸುಮಾರು 17,50,000 ರುಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಂಜುನಾಥ ಈ ಹಿಂದೆಯೂ ಹಲವಾರು ವಂಚನೆ ಪ್ರಕರಣಗಳಲ್ಲಿ ಜೈಲು ವಾಸ ಅನುಭವಿಸಿದ್ದಾನೆ.
ಈತನ ಮೇಲೆ ತುಮಕೂರು ಜಿಲ್ಲೆಯ ತುರುವೇಕೆರೆ, ಕಿಬ್ಬನಳ್ಳಿ, ಹುಲಿಯೂರುದುರ್ಗ, ಮಧುಗಿರಿ ಮತ್ತು ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚನ್ನಪಟ್ಟಣ, ಕನಕಪುರ ಸೇರಿದಂತೆ ಹಲವೆಡೆ ವಂಚನೆ ದೂರುಗಳು ಬಂದಿವೆ.
ಆರೋಪಿ ಮಂಜುನಾಥನ ವಿರುದ್ಧ ಮಾಗಡಿ ಪಟ್ಟಣದ ಹೇಮಂತ್ ಎಂಬುವರು ದೂರು ನೀಡಿದ್ದಾರೆ. "ನನಗೆ ಮತ್ತು ನನ್ನ 60 ಮಂದಿ ಸ್ನೇಹಿತರಿಗೆ ಸಾಲ ಕೊಡಿಸುವುದಾಗಿ ಪ್ರತಿಯೊಬ್ಬರಿಂದ 1100 ರುಪಾಯಿ ಪಡೆದು, ಮಂಜುನಾಥ ವಂಚಿಸಿದ್ದಾನೆ" ಎಂದು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ರಾಮನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.